ಭಾರತ್ ಜೋಡೋ; ರಾಹುಲ್ ಸ್ವಾಗತಿಸುವೆ ಎಂದ ಜೆಡಿಎಸ್ ಶಾಸಕ!
ಬೆಂಗಳೂರು, ಸೆಪ್ಟೆಂಬರ್ 28; "ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಪಾದಯಾತ್ರೆ ಗುಬ್ಬಿ ವಿಧಾನಸಭಾ ಕ್ಷೇತ್ರಕ್ಕೆ ಬರುತ್ತಿದ್ದಂತೆ ಸ್ವಾಗತಿಸುತ್ತೇನೆ. ಆದರೆ ಪಾದಯಾತ್ರೆಯಲ್ಲಿ ಭಾಗವಹಿಸುವುದಿಲ್ಲ" ಎಂದು ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್. ಆರ್. ಶ್ರೀನಿವಾಸ್ ಹೇಳಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕರು, "ಭಾರತ್ ಜೋಡೋ ಯಾತ್ರೆ ಒಳ್ಳೆಯ ಉದ್ದೇಶ ಇಟ್ಟುಕೊಂಡು ನಡೆಯುತ್ತಿರಬಹುದು. ಇದರಲ್ಲಿ ಪಾಲ್ಗೊಳ್ಳುವಂತೆ ಕಾಂಗ್ರೆಸ್ ನಾಯಕರು ಆಹ್ವಾನ ನೀಡಿದ್ದಾರೆ. ಸ್ಥಳೀಯ ಮುಖಂಡರ ಜೊತೆ ಮಾತನಾಡಿ ಈ ಕುರಿತು ತೀರ್ಮಾನ ಕೈಗೊಳ್ಳುತ್ತೇನೆ" ಎಂದರು.
"ರಾಹುಲ್ ಗಾಂಧಿ ರಾಷ್ಟ್ರಮಟ್ಟದ ನಾಯಕರು. ಈಗಾಗಲೇ ಸಂಸದ ಡಿ. ಕೆ. ಸುರೇಶ್ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷದ ನಾಯಕರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದ್ದಾರೆ. ನನ್ನ ವಿಧಾನಸಭಾ ಕ್ಷೇತ್ರಕ್ಕೆ ರಾಹುಲ್ ಗಾಂಧಿ ಬರುತ್ತಿದ್ದಂತೆ ಅವರನ್ನು ಸ್ವಾಗತಿಸುತ್ತೇನೆ. ಆದರೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವುದಿಲ್ಲ" ಎಂದು ಶಾಸಕರು ಸ್ಪಷ್ಟಪಡಿಸಿದರು.

"ನನ್ನ ಪತ್ನಿ ಮತ್ತು ಮಗ ಡಿ. ಕೆ. ಸುರೇಶ್ ಜೊತೆ ಕಾಣಿಸಿಕೊಂಡಿದ್ದು ರಾಜಕೀಯ ಉದ್ದೇಶಕ್ಕೆ ಅಲ್ಲ. ಅವರು ನಮ್ಮ ಸಂಬಂಧಿಕರಾಗಿರುವುದರಿಂದ ಅವರ ಜೊತೆ ಕಾಣಿಸಿಕೊಂಡಿದ್ದಾರೆ. ಬೇರೆ ಯಾವುದೇ ಉದ್ದೇಶವಿಲ್ಲ" ಎಂದು ಎಸ್. ಆರ್. ಶ್ರೀನಿವಾಸ್ ತಿಳಿಸಿದರು.
ಎಸ್. ಆರ್. ಶ್ರೀನಿವಾಸ್ ಜೆಡಿಎಸ್ ಪಕ್ಷದ ಚಟುವಟಿಕೆಗಳಿಂದ ದೂರವಾಗಿದ್ದಾರೆ. ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳು ಹಲವು ದಿನಗಳಿಂದ ಹಬ್ಬಿದೆ. ಇಂತಹ ಸಂದರ್ಭದಲ್ಲಿ ಎಸ್. ಆರ್. ಶ್ರೀನಿವಾಸ್ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆಯೇ? ಎಂಬ ಪ್ರಶ್ನೆ ಎದುರಾಗಿತ್ತು.
ಡಿಸೆಂಬರ್ ವೇಳೆಗೆ ತೀರ್ಮಾನ; ಮುಂದಿನ ರಾಜಕೀಯ ತೀರ್ಮಾನದ ಬಗ್ಗೆ ಮಾತನಾಡಿರುವ ಎಸ್. ಆರ್. ಶ್ರೀನಿವಾಸ್, "ನಾನು ನನ್ನ ತೀರ್ಮಾನವನ್ನು ಕಾರ್ಯಕರ್ತರು, ಮುಖಂಡರ ಜೊತೆ ಚರ್ಚಿಸಿ ತೆಗೆದುಕೊಳ್ಳುತ್ತೇನೆ. ಅವರ ಅಭಿಪ್ರಾಯ ಸಂಗ್ರಹ ಮಾಡಿ ಅದರಂತೆ ನಡೆದುಕೊಳ್ಳುತ್ತೇನೆ" ಎಂದು ಶಾಸಕರು ಸ್ಪಷ್ಟಪಡಿಸಿದರು.
ಶಾಸಕ ಎಸ್. ಆರ್. ಶ್ರೀನಿವಾಸ್ ಮತ್ತು ಜೆಡಿಎಸ್ ವರಿಷ್ಠ ನಾಯಕರ ನಡುವೆ ಜಟಾಪಟಿ ನಡೆಯುತ್ತಿದೆ. ಕೆಲವು ದಿನಗಳ ಹಿಂದೆ ರಾಜ್ಯಸಭೆ ಚುನಾವಣೆ ನಡೆದಾಗ ಎಸ್. ಆರ್. ಶ್ರೀನಿವಾಸ್ ಪಕ್ಷದ ವಿಪ್ ಉಲ್ಲಂಘನೆ ಮಾಡಿದ್ದಾರೆ ಎಂಬುದು ದೊಡ್ಡ ಸುದ್ದಿಯಾಗಿತ್ತು.
ಜೆಡಿಎಸ್ ಕಾರ್ಯಕರ್ತರು ಎಸ್. ಆರ್. ಶ್ರೀನಿವಾಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತಿಥಿ ಕಾರ್ಡ್ ಮಾದರಿಯ ವಿನ್ಯಾಸವನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಎಸ್. ಆರ್. ಶ್ರೀನಿವಾಸ್ ಬೆಂಬಲಿಗರು ಎಚ್. ಡಿ. ಕುಮಾರಸ್ವಾಮಿ ತಿಥಿ ಕಾರ್ಡ್ ಹಂಚಿಕೆ ಮಾಡಿದ್ದರು.
ಎಸ್. ಆರ್. ಶ್ರೀನಿವಾಸ್ ಜೆಡಿಎಸ್ ತೊರೆಯುವುದು ಖಚಿತವಾಗಿದೆ. ಈಗಾಗಲೇ ಜೆಡಿಎಸ್ ಸಹ ಗುಬ್ಬಿ ಕ್ಷೇತ್ರಕ್ಕೆ ಬೇರೆ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿದೆ. ಕೆಲವು ತಿಂಗಳ ಹಿಂದೆ ಗುಬ್ಬಿಯಲ್ಲಿ ಜೆಡಿಎಸ್ನ ಬೃಹತ್ ಸಮಾವೇಶ ನಡೆದಿತ್ತು. ಸಮಾವೇಶಕ್ಕೆ ಗುಬ್ಬಿಯಲ್ಲಿದ್ದರೂ ಎಸ್. ಆರ್. ಶ್ರೀನಿವಾಸ್ ಗೈರಾಗಿದ್ದರು.
ಸೆಪ್ಟೆಂಬರ್ ಅಂತ್ಯಕ್ಕೆ ಆಗಮನ; ಕನ್ಯಾಕುಮಾರಿಯಲ್ಲಿ ಆರಂಭವಾಗಿರುವ ಸಂಸದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಸೆಪ್ಟೆಂಬರ್ 30ರಂದು ಕರ್ನಾಟಕಕ್ಕೆ ಆಗಮಿಸಲಿದೆ. ಚಾಮರಾಜನಗರ ಮೂಲಕ ಯಾತ್ರೆ ಕರ್ನಾಟಕಕ್ಕೆ ಆಗಮಿಸಲಿದ್ದು, ಯಾತ್ರೆ ಯಶಸ್ವಿಗೊಳಿಸಲು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ನೇತೃತ್ವದಲ್ಲಿ ಸಿದ್ಧತೆ ನಡೆಸಲಾಗುತ್ತಿದೆ.
ಒಟ್ಟು 38 ಜನರ ಸಮಿತಿ ರಚನೆ ಮಾಡಿರುವ ಡಿ. ಕೆ. ಶಿವಕುಮಾರ್ ಯಾತ್ರೆಯ ಯಶಸ್ವಿಗಾಗಿ ಪ್ರತಿ ಕ್ಷೇತ್ರದಿಂದ ತಲಾ 5 ಸಾವಿರ ಜನರನ್ನು ಯಾತ್ರೆಗೆ ಕರೆತರಬೇಕು ಎಂದು ಸೂಚನೆ ನೀಡಿದ್ದಾರೆ. ದೇಶಾದ್ಯಂತ 3500 ಕಿ. ಮೀ ಸಾಗುವ ಯಾತ್ರೆ ಕರ್ನಾಟಕದಲ್ಲಿ 21 ದಿನಗಳ ಕಾಲ 510 ಕಿ. ಮೀ. ಸಂಚಾರ ನಡೆಸಲಿದೆ.
ಅಕ್ಟೋಬರ್ 12ರಂದು ಸಂಜೆ ತುಮಕೂರಿನ ಮೂಲಕ ಯಾತ್ರೆ ಚಿತ್ರದುರ್ಗ ಜಿಲ್ಲೆಗೆ ತೆರಳಲಿದೆ. ಚಿತ್ರದುರ್ಗಕ್ಕೆ ತೆರಳಲಿರುವ ಯಾತ್ರೆ ಅಲ್ಲಿಂದ ಆಂಧ್ರ ಪ್ರದೇಶಕ್ಕೆ ಸಂಚಾರ ನಡೆಸಲಿದೆ. ಕರ್ನಾಟಕದಲ್ಲಿ ಯಾತ್ರೆ ಸಾಗುವ ಮಾರ್ಗ ಈಗಾಗಲೇ ಅಂತಿಮಗೊಂಡಿದ್ದು, ಒಂದು ಸಮಾವೇಶ ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಲಿದ್ದಾರೆ.












Click it and Unblock the Notifications