ಚಿಕ್ಕಬಳ್ಳಾಪುರದಿಂದಲೇ ಸ್ಪರ್ಧೆ; ರಾಹುಲ್ ಸಮರ್ಥ- ಮೊಯ್ಲಿ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಕ್ಷೇತ್ರ ಬದಲಾವಣೆ ಮಾಡಲಿದ್ದೇನೆ (ದಕ್ಷಿಣ ಕನ್ನಡಕ್ಕೆ) ಎಂಬುದು ಕೇವಲ ಊಹಾಪೋಹ ಮತ್ತು ಆಧಾರರಹಿತ ಎಂದು ಹೇಳಿದ ಅವರು ಕಳೆದ ನಾಲ್ಕು ವರ್ಷದಿಂದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದು, ಜನರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಬಂದಿದ್ದೇನೆ. ಪರಿಸ್ಥಿತಿ ಹೀಗಿರುವಾಗ ನಾನು ಬೇರೆ ಕಡೆಗೆ ಏಕೆ ಹೋಗಲಿ? ಅದರ ಅಗತ್ಯವೂ ನನಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ದಕ್ಷಿಣ ಕನ್ನಡದಿಂದ ಮೊಯ್ಲಿ ಪುತ್ರ ಕಣಕ್ಕೆ: 'ದಕ್ಷಿಣ ಕನ್ನಡ ಲೋಕಸಭಾ ಅಭ್ಯರ್ಥಿಯಾಗುವ ಬಗ್ಗೆ ನನ್ನ ಮಗ ಹರ್ಷ ಮೊಯ್ಲಿ ಟಿಕೆಟ್ ಕೇಳುತ್ತಿರುವುದರಲ್ಲಿ ಯಾವುದೇ ತಪ್ಪಿಲ್ಲ. ಟಿಕೆಟ್ ಕೊಡುವುದು ಬಿಡುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಇದರಲ್ಲಿ ನಾನು ತಲೆ ಹಾಕುವುದಿಲ್ಲ' ಎಂದೂ ಅವರು ತಿಳಿಸಿದರು.
ರಾಹುಲ್ ಸಮರ್ಥ ಪ್ರಧಾನಿ ಅಭ್ಯರ್ಥಿ (ಮುಂಬೈ ವರದಿ):
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನ ಮಂತ್ರಿ ಸ್ಥಾನ ಅಲಂಕರಿಸಲು ಸಮರ್ಥರಾಗಿದ್ದು, ಅತ್ಯಂತ ಪ್ರಭಾವಶಾಲಿ ಮತ್ತು ಪರ್ಯಾಯ ನಾಯಕರಾಗಿದ್ದಾರೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಎಂ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ ಅವರಿಗೆ ದೇಶದ ನಾಡಿಮಿಡಿತ ಅರ್ಥವಾಗಿದೆ. ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ದೇಶ ಮುನ್ನಡೆಸುವ ಸಾಮರ್ಥ್ಯ ಅವರಿಗಿದೆ ಎಂದು ಪ್ರತಿಪಾದಿಸಿದರು.
'ರಾಹುಲ್ ಗಾಂಧಿ ಪ್ರಧಾನಿ ಹುದ್ದೆ ಅಲಂಕರಿಸುವ ಎಲ್ಲ ಲಕ್ಷಣಗಳಿವೆ. ಅವರೊಬ್ಬ ಕಾಂಗ್ರೆಸ್ ಪಕ್ಷದ ನಿಜವಾದ ನಾಯಕರೂ ಮತ್ತು ಆಸ್ತಿಯೂ ಹೌದು. ಪ್ರಧಾನಿ ಹುದ್ದೆಗೆ ಅವರಷ್ಟು ಸಮರ್ಥರು ಬೇರೊಬ್ಬರಿಲ್ಲ ಎಂದು ತಿಳಿಸಿದರು. ದೇಶದ ಯುವಜನತೆ ಅವರ ನಾಯಕತ್ವವನ್ನು ಎದುರು ನೋಡುತ್ತಿದೆ.
ರಾಹುಲ್ ಗಾಂಧಿ ಪ್ರಧಾನಿಯಾಗಬೇಕೆಂಬುದು ಲಕ್ಷಾಂತರ ಕಾರ್ಯಕರ್ತರ ಒತ್ತಾಸೆಯಾಗಿದೆ. ಪ್ರತಿಯೊಬ್ಬರೂ ಕೂಡ ಅವರ ನಾಯಕತ್ವವನ್ನು ಒಪ್ಪಿಕೊಂಡಿದ್ದಾರೆ. ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಸೋನಿಯಾ ಗಾಂಧಿ, ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ಆಶೀರ್ವಾದವೂ ಅವರಿಗಿದೆ ಎಂದರು.












Click it and Unblock the Notifications