ಶಿಸ್ತು ಮೀರಿದ ಈಶ್ವರಪ್ಪ ಮತ್ತಿತರರ ವಿರುದ್ಧ ಕ್ರಮಕ್ಕೆ ಸೂಚನೆ?
ಸಮಾವೇಶದಲ್ಲಿ ಪಾಲ್ಗೊಂಡವರ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದರೆ ಶಿಸ್ತಿನ ಪ್ರಶ್ನೆ ಬರುತ್ತದೆ. ತೆಗೆದುಕೊಂಡರೆ ಹಿಂದುಳಿದ ಸಮಾಜಗಳಿಗೆ ಬೇರೆ ಸಂದೇಶ ಹೋಗುತ್ತದೆ. ಹಾಗಿದ್ದರೆ ಮುಂದೇನಾಗುತ್ತದೆ?
ಬೆಂಗಳೂರು, ಡಿಸೆಂಬರ್ 9: ರಾಯಣ್ಣ ಬ್ರಿಗೇಡ್ ನ ಕದನ ನಿರ್ಣಾಯಕ ಹಂತ ತಲುಪಿದಂತಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ ಲಾಲ್ ಅವರೇ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿದ್ದು, ಯಾರ್ಯಾರು ಬ್ರಿಗೇಡ್ ಜತೆ ಗುರುತಿಸಿಕೊಂಡಿದ್ದಾರೋ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಈ ಅದೇಶದ ಮುಂದಿನ ಪರಿಣಾಮಗಳೇನು ಎಂದು ಕಾದುನೋಡಬೇಕಾಗಿದೆ. ಏಕೆಂದರೆ, ರಾಜ್ಯ ಬಿಜೆಪಿಯ ಉಸ್ತುವಾರಿ ವಹಿಸಿರುವ ಮುರಳೀಧರ್ ರಾವ್ ಅವರು ಖಡಕ್ ಎಚ್ಚರಿಕೆ ನೀಡಿದ್ದ ನಂತರವೂ ಬೆಳಗಾವಿಯಲ್ಲಿ ನಡೆದ ರಾಯಣ್ಣ ಬ್ರಿಗೇಡ್ ಸಮಾವೇಶದಲ್ಲಿ ಈಶ್ವರಪ್ಪ ಸೇರಿದಂತೆ ಮಾಜಿ ಸಚಿವರು, ಬಿಜೆಪಿ ಮುಖಂಡರು ಪಾಲ್ಗೊಂಡಿದ್ದರು.[ರಾಯಣ್ಣ ಬ್ರಿಗೇಡ್: ಮಾಜಿ ಸಚಿವ ಸೊಗಡು ಶಿವಣ್ಣ ಸಂದರ್ಶನ]

ಈ ವಿಚಾರ ತಿಳಿದ ಮೇಲೆ, ಇದು ಇಷ್ಟಕ್ಕೆ ಬಿಟ್ಟರೆ ಸರಿಹೋಗುವುದಿಲ್ಲ ಎಂಬ ಕಾರಣಕ್ಕೆ ಶಿಸ್ತುಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ನೋಟಿಸ್ ನೀಡಲು ಸಹ ಸೂಚಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದರಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪನವರ ಹೆಸರು ಪ್ರಮುಖವಾದದ್ದು.
ಇನ್ನು ಮಾಜಿ ಸಚಿವ ಸೊಗಡು ಶಿವಣ್ಣ, ಆದಿಜಾಂಬವ ಸಮಾಜದ ಸ್ವಾಮೀಜಿ ಬನ್ನಿ ಅಂತ ಕರೆದರೆ ಹೋಗಿದ್ದು ತಪ್ಪಾ? ಎಂದು ಒನ್ ಇಂಡಿಯಾ ಸಂದರ್ಶನದಲ್ಲೇ ಕೇಳಿದ್ದರು. ಹಿಂದೂಗಳೆಲ್ಲ ಒಂದಾಗಬೇಕು ಎಂಬ ಪ್ರಯತ್ನ ಮಾಡಬಾರದಾ? ತುರ್ತು ಪರಿಸ್ಥಿತಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರಶ್ನಿಸಿ ಜೈಲಿಗೆ ಹೋಗಿದ್ದವರು ನಾವು. ಹಾಗಿದ್ದರೆ ಪ್ರಜಾಪ್ರಭುತ್ವಕ್ಕೆ ಬೆಲೆ ಇಲ್ಲವೆ ಎಂದಿದ್ದರು.[ರಾಜ್ಯ ಬಿಜೆಪಿಯಲ್ಲಿ ಗೊಂದಲ ಇದೆ: ಈಶ್ವರಪ್ಪ ಹೊಸ ರಾಗ]
ಈ ರೀತಿಯ ಪ್ರಶ್ನೆಗಳಿಗೆ ಉತ್ತರಿಸುವ ಸಂದರ್ಭ ಬಂದರೆ ಗೊಂದಲಕ್ಕೆ, ಭಿನ್ನಾಭಿಪ್ರಾಯಗಳಿಗೆ ಕಾರಣವಾಗುವುದಂತೂ ಸ್ಪಷ್ಟ. ಈಗ ಸಮಾವೇಶದಲ್ಲಿ ಪಾಲ್ಗೊಂಡವರ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದರೆ ಶಿಸ್ತಿನ ಪ್ರಶ್ನೆ ಬರುತ್ತದೆ. ತೆಗೆದುಕೊಂಡರೆ ಹಿಂದುಳಿದ ಸಮಾಜಗಳಿಗೆ ಬೇರೆ ಸಂದೇಶ ಹೋಗುತ್ತದೆ. ಹಾಗಿದ್ದರೆ ಮುಂದೇನಾಗುತ್ತದೆ?












Click it and Unblock the Notifications