ಪತ್ನಿ ಗಂಡನ ಮನೆ ತೊರೆದು ಪದೇ ಪದೇ ತವರಿಗೆ ಹೋದರೆ ‘ಕ್ರೌರ್ಯ’ವಲ್ಲ- ಹೈಕೋರ್ಟ್
ಬೆಂಗಳೂರು,ಮಾ.31. ಪತ್ನಿ ಪದೇ ಪದೇ ಪತಿಯ ಮನೆ ತೊರೆದು ತವರು ಮನೆಗೆ ಹೋದರೆ ಅದು ಕ್ರೌರ್ಯವಲ್ಲ ಮತ್ತು ಅದೇ ವಿಚ್ಛೇದನಕ್ಕೂ ಆಧಾರವಲ್ಲ..!
ಹೀಗೆಂದು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಆದೇಶ ನೀಡಿದೆ. ಅಷ್ಟೇ ಅಲ್ಲದೆ, ಅದೇ ಕಾರಣಕ್ಕಾಗಿ ನೀಡಲಾಗಿದ್ದ ವಿವಾಹ ವಿಚ್ಚೇದನವನ್ನೂ ಸಹ ರದ್ದು ಮಾಡಿದೆ.
ಬೆಂಗಳೂರಿನ ದಂಪತಿ ಪ್ರಕರಣದಲ್ಲಿ ನ್ಯಾಯಮೂರ್ತಿ ಅಲೋಕ್ ಅರಾಧೆ ಹಾಗೂ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯಪೀಠ, ಹಿಂದೂ ವಿವಾಹ ಕಾಯ್ದೆ-1955ರ ಕಲಂ 13 (1)(ಐಎ) ಮತ್ತು (ಐಬಿ) ಅನ್ವಯ ಕೋರಲಾಗಿದ್ದ ವಿವಾಹ ವಿಚ್ಛೇದನದ ಡಿಕ್ರಿ ರದ್ದುಗೊಳಿಸಿದೆ.

ಜೊತೆಗೆ ದಂಪತಿ ನಡುವೆ ಜಗಳವಿದೆ ಹಾಗೂ ಅವರು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ ಎಂದ ಮಾತ್ರಕ್ಕೆ ವಿವಾಹ ವಿಚ್ಛೇದನದ ಮನವಿ ಮಾನ್ಯ ಮಾಡಿ ಅದಕ್ಕೆ ಮುದ್ರೆಯೊತ್ತುವುದು ಸಮಂಜಸವಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟು ಆ ಕುರಿತಂತೆ ಪತಿಯ ವಿವಾಹ ವಿಚ್ಛೇದನಕ್ಕೆ ಅನುಮೋದನೆ ನೀಡಿದ್ದ ಬೆಂಗಳೂರಿನ ನಾಲ್ಕನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರ ಆದೇಶವನ್ನು ಅನೂರ್ಜಿತಗೊಳಿಸಿದೆ.
ತೀರ್ಪು ಏನು?:
ಅರ್ಜಿದಾರ ದಂಪತಿಯ ನಡುವೆ ಸರಿಪಡಿಸಲಾಗದಂತಹ ಕಂದಕವಿದೆ. ಒಂಬತ್ತು ವರ್ಷಗಳಿಂದ ಅವರು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ. ಹಾಗಾಗಿ ಇದು ವಿವಾಹ ವಿಚ್ಛೇದನಕ್ಕೆ ಅರ್ಹವಾಗಿದೆ ಎಂಬ ಅಭಿಪ್ರಾಯದೊಂದಿಗೆ ಕೌಟುಂಬಿಕ ನ್ಯಾಯಾಲಯ ವಿಚ್ಛೇದನದ ಡಿಕ್ರಿ ನೀಡಿರುವುದು ಸರಿಯಲ್ಲ ಎಂದು ನ್ಯಾಯಾಲಯ ಹೇಳಿದೆ.
ಪತಿ-ಪತ್ನಿಯರ ಆರೋಪ- ಪ್ರತ್ಯಾರೋಪಗಳನ್ನು ಆಯಾ ಸಮಾಜದಲ್ಲಿನ ಆಂತರಿಕ ಸ್ಥಿತಿಗತಿ ಆಧರಿಸಿ ನಿರ್ಧರಿಸಬೇಕಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.
"ಪತಿ ವಿರುದ್ಧ ಪತ್ನಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರೆಂದ ಮಾತ್ರಕ್ಕೆ ಅದನ್ನು ಕ್ರೌರ್ಯವೆಂದು ಒಪ್ಪಲಾಗದು. ಕ್ರೌರ್ಯ ಎಂಬ ಪದವನ್ನು ಗಮನಿಸುವಾಗ ಅದು ದೈಹಿಕವಾಗಿ ಅಥವಾ ಮಾನಸಿಕವಾಗಿ ಅಘಾತ ಅಥವಾ ತೊಂದರೆ ಒಡ್ಡುವಂತಿದೆಯೇ ಎಂಬುದನ್ನು ಪರಿಶೀಲಿಸಬೇಕು. ಮಾನಸಿಕ ಅಪಾಯಗಳಿವೆ ಎಂದಾದರೆ ಆ ಪತಿ-ಪತ್ನಿ ಹೊಂದಿರುವ ಸಾಮಾಜಿಕ ಮೌಲ್ಯ, ಅಂತಸ್ತು ಮತ್ತು ಅವರು ಎಂತಹ ಪರಿಸರದಲ್ಲಿ ಜೀವನ ನಡೆಸುತ್ತಿದ್ದಾರೆ ಎಂಬುದನ್ನು ಗುರುತಿಸಬೇಕಾಗುತ್ತದೆ' ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ.
ಪ್ರಕರಣದ ಹಿನ್ನೆಲೆ:
2022ರಲ್ಲಿ ಆತ ಮತ್ತು ಆಕೆ ತಿಪಟೂರಿನಲ್ಲಿ ವಿವಾಹವಾದರು. ಸ್ವಲ್ಪ ದಿನ ಚೆನ್ನಾಗಿಯೇ ಸಂಸಾರ ಸಾಗಿತ್ತು. ಆನಂತರ ಭಿನ್ನಾಬಿಪ್ರಾಯ ಆರಂಭವಾಯಿತು.
ಆಗ ಪತಿ, ಮದುವೆಯಾದ ತಕ್ಷಣ ಪತ್ನಿ ಪ್ರತ್ಯೇಕ ಮನೆ ಮಾಡಬೇಕೆಂದು ಒತ್ತಾಯಿಸಿ ಪದೇ ಪದೇ ಜಗಳ ತೆಗೆಯುತ್ತಿದ್ದಾಳೆ, ಹೇಳದೇ ಕೇಳದೇ ತವರಿಗೆ ಮತ್ತು ಸಹೋದರಿಯರ ಮನೆಗೆ ಹೋಗುತ್ತಿದ್ದಾಳೆ, ಮುನಿಸಿಕೊಂಡು ತವರಿಗೆ ಹೇಳದೇ ಕೇಳದೆ ಹೋದವಳನ್ನು ನಾನು ಎಷ್ಟು ಕರೆದರೂ ಬರಲಿಲ್ಲ ಎಂದು ವಕೀಲರ ಮೂಲಕ ನೋಟಿಸ್ ನೀಡಿದರು.
ಅದಕ್ಕೆ ಆಕೆ ಉತ್ತರಿಸಲಿಲ್ಲ. ಆದರೆ ನನ್ನ ಮತ್ತು ಕುಟುಂಬದ ಸದಸ್ಯರ ವಿರುದ್ಧ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಳು. ಹಾಗಾಗಿ, ನನಗೆ ಪತ್ನಿಯಿಂದ ವಿಚ್ಛೇದನ ಬೇಕು' ಎಂದು ಕೋರಿದ್ದ ಪತಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು.
ನ್ಯಾಯಾಲಯ ಆ ಮನವಿಯನ್ನು ಆಲಿಸಿ ಪತ್ನಿಯ ಅಭಿಪ್ರಾಯ ಕೇಳದೆ ವಿಚ್ಚೇದನ ಮಂಜೂರು ಮಾಡಿತ್ತು. ಆ ಆದೇಶವನ್ನು ಪ್ರಶ್ನಿಸಿ ಪತ್ನಿ ಹೈಕೋರ್ಟ್ ಮೆಟ್ಟಿಲೇರಿದ್ದರು.












Click it and Unblock the Notifications