ಪಂಕ್ತಿಭೇದ ಇದ್ದರೆ ಉಡುಪಿ ಊಟಕ್ಕೆ ಯಾಕೆ ಹೋಗ್ತೀರಾ: ದೇವೇಗೌಡ
ಉಡುಪಿ, ಅ 17: ಯಾರಿಂದಲೂ ಇನ್ನೊಬ್ಬರ ಭಾವನೆ ಮತ್ತು ನಂಬಿಕೆಗೆ ತೊಂದರೆಯಾಗುವಂತಹ ಕೆಲಸವಾಗಬಾರದು. ಉಡುಪಿಯಲ್ಲಿ ಪಂಕ್ತಿಭೇದ ಇದೆ ಎನ್ನುವುದಾದರೆ ಅಲ್ಲಿಗೆ ಹೋಗಬಾರದು ಎಂದು ಮಾಜಿ ಪ್ರಧಾನಿ ದೇವೇಗೌಡ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ನಗರದಲ್ಲಿ ಭಾನುವಾರ (ಅ 16) ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ದೇವೇಗೌಡ, ಜನರ ನಂಬಿಕೆಯ ಮೇಲೆ ಮುತ್ತಿಗೆ ಹಾಕುವವರು ಹಿಂದೆಯೂ ಇದ್ದರು, ಈಗಲೂ ಇದ್ದಾರೆ. ಕೃಷ್ಣಮಠಕ್ಕೆ ಮುತ್ತಿಗೆ ಹಾಕುವ ವಿಚಾರದಲ್ಲಿ ನಾನು ಹೆಚ್ಚೇನೂ ಪ್ರತಿಕ್ರಿಯಿಸುವುದಿಲ್ಲ ಎಂದು ಗೌಡ್ರು ಹೇಳಿದ್ದಾರೆ. (ಮಠಕ್ಕೆ ಮುತ್ತಿಗೆ ಹಾಕಿದರೆ ಉಪವಾಸ, ಪೇಜಾವರ ಶ್ರೀ)
ಕೃಷ್ಣಮಠದಲ್ಲಿ ಪಂಕ್ತಿಭೇದ ಇದೆ ಎನ್ನುವುದು ಕೆಲವರ ವಾದವಾದರೆ ಅಂತವರು ಅಲ್ಲಿಗೆ ಹೋಗಬಾರದು. ಬರಲೇ ಬೇಕೆಂದು ಯಾರೂ ಒತ್ತಡ ಹೇರಲ್ಲ. ಇಷ್ಟವಿಲ್ಲದಿದ್ದರೆ ಅಲ್ಲಿಗೆ ಹೋಗಬಾರದು ಎನ್ನುವುದು ನಮ್ಮ ನಿಲುವು ಎಂದು ದೇವೇಗೌಡ ಹೇಳಿದರು.
ಸುಮ್ಮನೆ ವಿವಾದ ಮಾಡಿಕೊಂಡು ಧಾರ್ವಿುಕ ಭಾವನೆಗಳಿಗೆ ಕುಂದು ತರಬಾರದು. ದೇಶದಲ್ಲಿ ಸಮಸ್ಯೆಗಳು ಸಾಕಷ್ಟಿವೆ, ಅದರ ಬಗ್ಗೆ ಚರ್ಚಿಸೋಣ ಎಂದು ಗೌಡ್ರು ತಮ್ಮ ನಿಲುವು ವ್ಯಕ್ತ ಪಡಿಸಿದ್ದಾರೆ.
ಈ ನಡುವೆ ಅಕ್ಟೋಬರ್ 23ರಂದು ನಡೆಸಲು ಉದ್ದೇಶಿಸಲಾಗಿರುವ 'ಕನಕನ ನಡೆ' ಕಾರ್ಯಕ್ರಮಕ್ಕೆ ಬ್ರೇಕ್ ಹಾಕಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. (ಪೇಜಾವರರ ಬಗ್ಗೆ ಯೋಗೇಶ್ ಮಾಸ್ಟರ್ ವಿಡಂಬನೆ)
ಉಡುಪಿಗೆ ಹೋದರೂ, ಕೃಷ್ಣಮಠಕ್ಕೆ ಭೇಟಿ ನೀಡದ ದೇವೇಗೌಡ, ಮುಂದೆ ಓದಿ..
ಕೃಷ್ಣಮಠಕ್ಕೆ ಭೇಟಿ ನೀಡಲಿಲ್ಲ
ಶನಿವಾರ (ಅ 15) ದಕ್ಷಿಣಕನ್ನಡ ಜಿಲ್ಲಾ ಪ್ರವಾಸದಲ್ಲಿದ್ದ ದೇವೇಗೌಡರು, ಕಟೀಲು ದೇವಾಲಯ ಮತ್ತು ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿದ್ದರು. ಭಾನುವಾರ ಉಡುಪಿ ಜಿಲ್ಲಾ ಪ್ರವಾಸದಲ್ಲಿದ್ದರೂ, ಗೌಡ್ರು ಕೃಷ್ಣಮಠಕ್ಕೆ ಭೇಟಿ ನೀಡಲಿಲ್ಲ.
ದೇವರ ಬಳಿ ಬರುವಾಗ ಆಚಾರ ವಿಚಾರ ಪಾಲಿಸಬೇಕು
ಕೃಷ್ಣಮಠಕ್ಕೆ ಯಾಕೆ ಭೇಟಿ ನೀಡಲಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸುತ್ತಾ, ದೇವರ ಬಳಿ ಹೋಗುವಾಗ ಕೆಲವೊಂದು ಆಚಾರ, ವಿಚಾರಗಳನ್ನು ಪಾಲಿಸಬೇಕಾಗುತ್ತದೆ. ನಾನು ಇಲ್ಲಿಗೆ ಬಂದಿರೋದು ಪಕ್ಷ ಸಂಘಟನೆಗೆ. ಪೇಜಾವರ ಶ್ರೀಗಳ ಜೊತೆ ಈ ಬಗ್ಗೆ ದೂರವಾಣಿಯಲ್ಲಿ ಮಾತನಾಡಿದ್ದೇನೆ - ದೇವೇಗೌಡ.
ಶ್ರೀಕೃಷ್ಣನನ್ನು ನೋಡಲು ಯಾರು ಬೇಕಾದರೂ ಹೋಗಬಹುದು
ಉಡುಪಿ ಶ್ರೀಕೃಷ್ಣನನ್ನು ನೋಡಲು ಯಾರು ಬೇಕಾದರೂ ಹೋಗಬಹುದು. ಅಧರ್ಮದ ವಿರುದ್ಧ ಹೋರಾಡಿದವನು ಶ್ರೀಕೃಷ್ಣ. ಭಗವದ್ಗೀತೆಯ ಅಂಶಗಳನ್ನು ನಾವು ಉಲ್ಲೇಖಿಸಿರುತ್ತೇವೆ ಎಂದು ದೇವೇಗೌಡರು ಹೇಳಿದ್ದಾರೆ.
ಸಚಿವರಿಗೆ ದೇವೇಗೌಡ ತಿರುಗೇಟು
ಕೆಲವು ಸಚಿವರು ಕೃಷ್ಣ, ರಾಮ ಮಾಂಸಾಹಾರಿ ಎಂದು ಹೇಳಿದ್ದಾರೆ. ಅದರ ಬಗ್ಗೆ ಚರ್ಚೆಗೂ ಸಿದ್ದ ಎಂದಿದ್ದಾರೆ. ಚರ್ಚೆಗೆ ಹೋಗಲು ನಾವೂ ಸಿದ್ದ, ಆದರೆ ಚರ್ಚೆಗೆ ಬರುವವರು ಇತಿಹಾಸ ಓದಿರಲಿ ಎಂದು ದೇವೇಗೌಡ ಸಚಿವ ಪ್ರಮೋದ್ ಮಧ್ವರಾಜ್ ಹೆಸರು ಹೇಳದೇ ತಿರುಗೇಟು ನೀಡಿದ್ದಾರೆ.
ಪೇಜಾವರ ಶ್ರೀಗಳ ಜೊತೆ ಮಾತುಕತೆ
ಅಕ್ಟೋಬರ್ 23ರಂದು ನಡೆಸಲು ಉದ್ದೇಶಿಸಿರುವ 'ಕನಕ ನಡೆ' ಕಾರ್ಯಕ್ರಮ ಮುಂದೂಡುವಂತೆ ಆಯೋಜಕರ ಮನವೊಲಿಸಿ ಎಂದು ಪೊಲೀಸ್ ಅಧಿಕಾರಿಗಳು, ಪೇಜಾವರ ಶ್ರೀಗಳಿಗೆ ಮನವಿ ಮಾಡಿದ್ದಾರೆ. ಆದರೆ, ಮನವೊಲಿಕೆ ನನ್ನಿಂದಾಗದು ಎಂದು ಶ್ರೀಗಳು ಸ್ಪಷ್ಟಪಡಿಸಿದ್ದಾರೆ ಎನ್ನುವ ಮಾಹಿತಿಯಿದೆ.