ಎಂ.ಬಿ.ಪಾಟೀಲ್ಗೆ ಸಚಿವ ಸ್ಥಾನ ನಿರಾಕರಣೆ ಹಿಂದಿನ ಮರ್ಮವೇನು?
Recommended Video

ಬೆಂಗಳೂರು, ಜೂನ್ 06: ಮೊದಲ ಹಂತದ ಸಚಿವ ಸಂಪುಟ ವಿಸ್ತರಣೆ ಮುಗಿದಿದೆ. ಕೆಲವು ಖ್ಯಾತನಾಮರ ಹೆಸರು ಸಚಿವರ ಪಟ್ಟಿಯಿಂದ ಕೈಬಿಡಲಾಗಿದೆ. ಅದರಲ್ಲಿ ಎಂ.ಬಿ.ಪಾಟೀಲ್ ಕೂಡ ಒಬ್ಬರು.
ಬಬಲೇಶ್ವರ ಕ್ಷೇತ್ರದಿಂದ ಆರಿಸಿ ಬಂದಿರುವ ಎಂ.ಬಿ.ಪಾಟೀಲ್ ಅವರು ಕಳೆದ ಬಾರಿ ಜಲಸಂಪನ್ಮೂಲ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಅವರು ಮತ್ತೆ ಸಂಪುಟ ಸೇರುವುದು ಖಚಿತ ಎಂದೇ ಹೇಳಲಾಗಿತ್ತು ಆದರೆ ಅದು ಸುಳ್ಳಾಗಿದೆ. ಆದರೆ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳದೆ ಇರುವ ಕಾಂಗ್ರೆಸ್ನ ನಡೆ ಕುತೂಹಲ ಕೆರಳಿಸಿದೆ.
ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಕ್ಕೆ ನೀರೆರೆದಿದ್ದ ಕಾಂಗ್ರೆಸ್ ಈಗ ಆ ಹೋರಾಟದಿಂದ ದೂರ ಉಳಿಯಲು ಯತ್ನಿಸಿದ್ದು ಅದರ ಮೊದಲ ಭಾಗವಾಗಿ ಹೋರಾಟದ ಮುಂಚೂಣಿಯಲ್ಲಿದ್ದ ಎಂ.ಬಿ.ಪಾಟೀಲ್ ಅವರನ್ನು ಸಂಪುಟದಿಂದ ಹೊರಗಿಟ್ಟಿದೆ.

'ಲಿಂಗಾಯತ ಪ್ರತ್ಯೇಕ ಧರ್ಮ'ಕ್ಕೆ ನೀಡಿದ ಬೆಂಬಲ ಕಾಂಗ್ರೆಸ್ ಈ ಬಾರಿಯ ಚುನಾವಣೆಯಲ್ಲಿ ಹಿನ್ನೆಡೆಗೆ ಪ್ರಮುಖ ಕಾರಣಗಳಲ್ಲೊಂದು ಎನ್ನಲಾಗಿದೆ. ಹೈಕಮಾಂಡ್ ಕೂಡ ಈ ಬಗ್ಗೆ ರಾಜ್ಯ ಕಾಂಗ್ರೆಸ್ ಮೇಲೆ ಗರಂ ಆಗಿದ್ದು, ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಿಂದ ಅಂತರ ಕಾಯ್ದುಕೊಳ್ಳುವಂತೆ ಹೇಳಿದೆ ಹಾಗಾಗಿಯೇ ಎಂಬಿ ಪಾಟೀಲ್ಗೆ ಸಂಪುಟದ ಬಾಗಿಲು ಬಂದ್ ಮಾಡಲಾಗಿದೆ ಎನ್ನಲಾಗಿದೆ.
ಎಂಬಿ ಪಾಟೀಲ್ ಒಬ್ಬರನ್ನು ಬಿಟ್ಟು ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಬಹುತೇಕರನ್ನು ಜನ ಈ ಬಾರಿ ಸೋಲಿಸಿದ್ದಾರೆ. ಸಚಿವ ಸ್ಥಾನ ನೀಡದೆ ಎಂಬಿ ಪಾಟೀಲ್ ಅವರ ಕೈ ಕಟ್ಟಿಹಾಕಿದರೆ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟವನ್ನು ಸೊಲ್ಲಿಲ್ಲದೆ ಮಾಡಬಹುದು ಆ ಮೂಲಕ ಕಳೆದುಕೊಂಡಿರುವ ಲಿಂಗಾಯತ ಮತಗಳನ್ನು ಮತ್ತೆ ಗಳಿಸಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್ಗೆ ಇದ್ದಂತಿದೆ.
ಅಲ್ಲದೆ ಎಂಬಿ ಪಾಟೀಲ್ ಅವರ ಸಮುದಾಯದವರೇ ಆದ ರಾಜಶೇಖರ್ ಪಾಟೀಲ್ ಕೂಡ ಕಾಂಗ್ರೆಸ್ಗಾಗಿ ಬಹಳ ವರ್ಷಗಳಿಂದ ದುಡಿದವರು, ಕಳೆದ ಬಾರಿಯೇ ಅವರು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು ಈ ಬಾರಿ ಅವರಿಗೆ ಅವಕಾಶ ನೀಡದಿದ್ದಲ್ಲಿ ಬಂಡಾಯದ ಸಾಧ್ಯತೆಯೂ ಇತ್ತು ಹಾಗಾಗಿ ಎಂಬಿ ಪಾಟೀಲ್ ಅವರ ಬದಲಿಗೆ ರಾಜಶೇಖರ ಪಾಟೀಲ್ ಅವರಿಗೆ ಅವಕಾಶ ನೀಡಲಾಗಿದೆ ಎಂಬ ವಾದವೂ ಇದೆ.












Click it and Unblock the Notifications