ಕಾಂಗ್ರೆಸ್ ಸರ್ಕಾರದ ಪ್ರಭಾವಿ ಸಚಿವರಿಗೇ ಜಿಲ್ಲಾ ಉಸ್ತುವಾರಿ ಮಿಸ್!
ಬೆಂಗಳೂರು: ಸಾಲು ಸಾಲು ಸವಾಲುಗಳ ನಂತರ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಟೇಕ್ ಆಫ್ ಆಗಿದೆ. 135 ಸ್ಥಾನದಲ್ಲಿ ಗೆದ್ದು, ಭರ್ಜರಿ ಬಹುಮತ ಪಡೆದ ಕಾಂಗ್ರೆಸ್ಗೆ ಎಲ್ಲಾ ಹಂತದಲ್ಲೂ ಸವಾಲು ಎದುರಾಗಿತ್ತು. ಈಗ ಜಿಲ್ಲಾ ಉಸ್ತುವಾರಿ ಸ್ಥಾನ ಹಂಚಿಕೆ ವಿಚಾರದಲ್ಲೂ ಗೊಂದಲ ಎದುರಾಯ್ತಾ? ಅನ್ನೋ ಡೌಟ್ ಶುರುವಾಗಿದೆ.
ಈ ಅನುಮಾನ ಮೂಡಲು ಪ್ರಮುಖ ಕಾರಣ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಅವಕಾಶ ಮಿಸ್ ಆಗಿರುವುದು. ರಾಜ್ಯ ಕಾಂಗ್ರೆಸ್ನಲ್ಲಿ ಪ್ರಭಾವಿ ನಾಯಕ ಎಂದು ಗುರುತಿಸಿಕೊಂಡಿದ್ದ ಕೃಷ್ಣ ಬೈರೇಗೌಡ ಅವರಿಗೆ ಯಾವುದೇ ಜಿಲ್ಲೆಯ ಉಸ್ತುವಾರಿ ಸಿಕ್ಕಿಲ್ಲ. ಆದರೆ ಕೋಲಾರಕ್ಕೆ ಜಿಲ್ಲಾ ಉಸ್ತುವಾರಿ ಆಗುವ ಆಸೆಯನ್ನು ಸಚಿವ ಕೃಷ್ಣ ಬೈರೇಗೌಡ ಹೊಂದಿದ್ದರು ಅನ್ನೋ ಮಾತು ಕೇಳಿಬಂದಿತ್ತು. ಹೀಗೆ ಕೋಲಾರ ಜಿಲ್ಲೆ ಉಸ್ತುವಾರಿ ಸ್ಥಾನಕ್ಕೆ ಕೃಷ್ಣ ಬೈರೇಗೌಡರ ಜೊತೆಗೆ ಬೈರತಿ ಸುರೇಶ್ ಹಾಗೂ ಕೆ.ಎಚ್.ಮುನಿಯಪ್ಪ ಕೂಡ ಪ್ರಯತ್ನಿಸಿದ್ದರು ಅನ್ನೋ ಮಾತು ಕೇಳಿಬಂದಿತ್ತು. ಆದರೆ ಕೊನೆಗೆ ಬೈರತಿ ಸುರೇಶ್ ಗೆದ್ದು ಬೀಗಿದ್ದಾರೆ (Krishna Byre Gowda).

ಕೃಷ್ಣ ಬೈರೇಗೌಡಗೆ ಮಿಸ್ ಆಗಿದ್ದೇಕೆ?
ಪಕ್ಕಾ ಕಾಂಗ್ರೆಸ್ ಅನುಯಾಯಿ & ಪಕ್ಷದ ಶಿಸ್ತಿನ ನಾಯಕ ಅನ್ನೋ ಹೆಸರು ಸಚಿವ ಕೃಷ್ಣ ಬೈರೇಗೌಡ ಅವರಿಗಿದೆ. ಕೊಟ್ಟ ಕೆಲಸವನ್ನ ಶಿಸ್ತಿನಿಂದ ನಿರ್ವಹಿಸಿಕೊಂಡು ಹೋಗುತ್ತಾರೆ. ಆದ್ರೆ ಈಗ ದಿಢೀರ್ ಅಂತಾ ಸಿದ್ದರಾಮಯ್ಯ ಸರ್ಕಾರ ವ್ಯತಿರಿಕ್ತ ನಿರ್ಧಾರ ಕೈಗೊಂಡಿತಾ? ಅನ್ನೋ ಅನುಮಾನ ಮೂಡುತ್ತಿದೆ. ಕೃಷ್ಣ ಬೈರೇಗೌಡ ಹಿರಿಯ ಸಚಿವರಾಗಿದ್ದರೂ ಅವರಿಗೆ ಯಾವುದೇ ಜಿಲ್ಲೆಯ ಉಸ್ತುವಾರಿ ಯಾಕೆ ಕೊಟ್ಟಿಲ್ಲ? ಅನ್ನೋ ಚರ್ಚೆ ಶುರುವಾಗಿದೆ. ಇದು ಒಂದು ಕಡೆಯಾದರೆ, ಕೋಲಾರ ಜಿಲ್ಲೆಯ ಉಸ್ತುವಾರಿ ಸಿಗದ ಮುನಿಸು ಕೃಷ್ಣ ಬೈರೇಗೌಡ ಅವರಿಗೆ ಇದೆಯಾ? ಅನ್ನೋ ಮಾತುಗಳು ಕೂಡ ಓಡಾಡುತ್ತಿವೆ.
ಸಿದ್ದರಾಮಯ್ಯ ಆಪ್ತನಿಗೆ ಚಿನ್ನದ ಜಿಲ್ಲೆ!
ಕೋಲಾರ ಜಿಲ್ಲೆ ಉಸ್ತುವಾರಿ ಸಚಿವರಾಗಿ ಆಯ್ಕೆಯಾಗಿರುವ ಸಚಿವ ಬೈರತಿ ಸುರೇಶ್ ಸಿಎಂ ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಾಗಿಯೇ ಕೋಲಾರ ಉಸ್ತುವಾರಿಗೆ ಸಿಕ್ಕಾಪಟ್ಟೆ ಪೈಪೋಟಿ ಇದ್ದರೂ ಬೈರತಿ ಸುರೇಶ್ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಸಕ್ಸಸ್ ಕಂಡಿದ್ದಾರೆ ಅನ್ನೋ ಮಾತೂ ಇದೆ. ಮತ್ತೊಂದ್ಕಡೆ ಜಿಲ್ಲಾ ಉಸ್ತುವಾರಿ ಸ್ಥಾನಗಳ ಹಂಚಿಕೆ ಬಳಿಕ, ಕಾಂಗ್ರೆಸ್ ಪಕ್ಷದ ಒಳಗೆ ಮುನಿಸು ಜೋರಾಯ್ತಾ? ಅನ್ನೋ ಡೌಟ್ ಕೂಡ ದಟ್ಟವಾಗಿದೆ. ಹಾಗಾದ್ರೆ ಕೃಷ್ಣ ಬೈರೇಗೌಡರ ಜೊತೆ ಯಾರಿಗೆಲ್ಲಾ ಜಿಲ್ಲಾ ಉಸ್ತುವಾರಿ ಸ್ಥಾನ ಮಿಸ್ ಆಗಿದೆ? ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.

ಸಿಎಂ ಕೂಡ ಉಸ್ತುವಾರಿ ಅಲ್ಲ!
ಗಮನಾರ್ಹ ಸಂಗತಿ ಎಂದರೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಯಾವುದೇ ಜಿಲ್ಲೆ ಉಸ್ತುವಾರಿ ವಹಿಸಿಕೊಂಡಿಲ್ಲ. ಸಾಮಾನ್ಯವಾಗಿ ಸಿಎಂ ಜಿಲ್ಲೆಯ ಉಸ್ತುವಾರಿ ವಹಿಸಿಕೊಳ್ಳಲ್ಲ. ಆದರೆ ಕಳೆದ ಅವಧಿಯಲ್ಲಿ ಬಿಜೆಪಿ ಸರ್ಕಾರದ ಸಂದರ್ಭದಲ್ಲಿ ಪರಿಸ್ಥಿತಿ ಬೇರೆಯೇ ಆಗಿತ್ತು. ಬೆಂಗಳೂರು ನಗರ ಉಸ್ತುವಾರಿ ಸ್ಥಾನಕ್ಕೆ ಸಚಿವರಾಗಿದ್ದ ಆರ್.ಅಶೋಕ್ ಹಾಗೂ ಸೋಮಣ್ಣ ನಡುವೆ ಪೈಪೋಟಿ ಇದ್ದ ಕಾರಣ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿದ್ದರು ಎನ್ನಲಾಗಿತ್ತು. ಇದೀಗ ಮತ್ತೆ ತಮ್ಮ ಸರ್ಕಾರದಲ್ಲಿ ಹಿಂದಿನ ಸಂಪ್ರದಾಯವನ್ನೇ ಮುಂದುವರಿಸಿದ್ದಾರೆ ಸಿಎಂ ಸಿದ್ದರಾಮಯ್ಯ.
ಇನ್ನು ಕಂದಾಯ ಸಚಿವ ಕೃಷ್ಣ ಬೈರೇಗೌಡರ ಜೊತೆಗೆ ಪೌರಾಡಳಿತ & ಹಜ್ ಖಾತೆಯ ಸಚಿವ ರಹಿಮ್ ಖಾನ್ ಅವರಿಗೂ ಯವುದೇ ಜಿಲ್ಲೆಯ ಉಸ್ತುವಾರಿ ನೀಡಿಲ್ಲ. ರಹಿಮ್ ಖಾನ್, ಈಶ್ವರ ಖಂಡ್ರೆ ಬೀದರ್ ಜಿಲ್ಲೆಯವರು. ಬೀದರ್ ಜಿಲ್ಲೆ ಉಸ್ತುವಾರಿಯನ್ನಾಗಿ ಈಶ್ವರ ಖಂಡ್ರೆ ಅವರನ್ನು ನೇಮಕ ಮಾಡಲಾಗಿದೆ. ಹೀಗಾಗಿ ಸಚಿವ ರಹಿಂ ಖಾನ್ಗೂ ಯಾವುದೇ ಜಿಲ್ಲೆಯ ಉಸ್ತುವಾರಿ ಸ್ಥಾನ ನೀಡಿಲ್ಲ ಎನ್ನಲಾಗುತ್ತಿದೆ. ಹೀಗೆ ಇಬ್ಬರು ಸಚಿವರು ಹಾಗೂ ಸ್ವತಃ ಸಿಎಂಗೆ ಜಿಲ್ಲಾ ಉಸ್ತುವಾರಿ ಸ್ಥಾನ ಸಿಕ್ಕಿಲ್ಲ. ಡಿಸಿಎಂ ಡಿ.ಕೆ.ಶಿವಕುಮಾರ್ಗೆ ಬೆಂಗಳೂರು ನಗರ ಉಸ್ತುವಾರಿ, ರಾಮನಗರಕ್ಕೆ ರಾಮಲಿಂಗಾರೆಡ್ಡಿ ಅವರನ್ನು ಉಸ್ತುವಾರಿ ಸಚಿವರನ್ನಾಗಿ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.












Click it and Unblock the Notifications