ಪೌರಾತ್ವ ಹೋರಾಟದಲ್ಲಿ ಸೈಲೆಂಟ್: ರಾಜ್ಯ ಕಾಂಗ್ರೆಸ್ಸಿಗೆ ಕಾಡಿದ ಭಯವಾದರೂ ಏನು?
ವಿವಾದಿತ ಪೌರತ್ವ ತಿದ್ದುಪಡಿ ಮಸೂದೆಗೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅನುಮೋದನೆ ಸಿಕ್ಕಿದ ನಂತರ, ಅಕ್ಷರಸಃ ದೇಶಾದ್ಯಂತ ಬೀದಿಗಿಳಿದಿದ್ದ ಕಾಂಗ್ರೆಸ್, ಈಗ ಈ ವಿಚಾರದಲ್ಲಿನ ಹೋರಾಟದಲ್ಲಿ ಅಷ್ಟೇನೂ ಉತ್ಸಾಹ ತೋರುತ್ತಿಲ್ಲ.
ಪ್ರತಿಭಟನೆಯ ಕಾವು ಕಮ್ಮಿಯಾಗುತ್ತಿರುವ ಈ ಸಮಯದಲ್ಲಿ, ಇದೇ ವಿಚಾರವನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಲು ಮುಂದಾದರೆ, ಪಕ್ಷಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುವ ತೀರ್ಮಾನಕ್ಕೆ ಕಾಂಗ್ರೆಸ್ ಬಂದಿದೆ ಎನ್ನುವ ಮಾಹಿತಿಯಿದೆ.
ರಾಜ್ಯದಲ್ಲೂ ಮಸೂದೆಯ ವಿರುದ್ದವಾಗಿ ನಡೆದ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿದ್ದ ಕಾಂಗ್ರೆಸ್, ತದನಂತರ ಈ ಹೋರಾಟದಿಂದ ಅಂತರ ಕಾಯ್ಡುಕೊಂಡು ಬಂತು.
ಪೌರತ್ವ ತಿದ್ದುಪಡಿ ಮಸೂದೆಯ ವಿಚಾರದಲ್ಲಿ ಪರ/ವಿರೋಧ ನಿಲುವನ್ನು ಸಾರ್ವಜನಿಕರೂ ಹೊಂದಿರುವುದರಿಂದ, ಈ ವಿಚಾರವನ್ನು ಬಿಟ್ಟು, ಬೇರೆ ವಿಚಾರದತ್ತ ಗಮನ ಹರಿಸಲು ರಾಜ್ಯ ಕಾಂಗ್ರೆಸ್ ನಿರ್ಧರಿಸಿದೆ.

ಪೌರತ್ವ ತಿದ್ದುಪಡಿ ಮಸೂದೆ
ಪೌರತ್ವ ತಿದ್ದುಪಡಿ ಮಸೂದೆಯ ವಿಚಾರದಲ್ಲಿ ಮುಸ್ಲಿಂ ಸಮುದಾಯ ಬಿಜೆಪಿಯನ್ನು ನಂಬುವ ಸ್ಥಿತಿಯಲ್ಲಿ ಇಲ್ಲ ಎನ್ನುವುದು ವಾಸ್ತವತೆ. ಈ ಹೋರಾಟದಲ್ಲಿ, ಕಾಂಗ್ರೆಸ್ ಯಾವತ್ತೂ ನಿಮ್ಮ ಬೆಂಬಲಕ್ಕೆ ನಿಲ್ಲುತ್ತೆ ಎನ್ನುವುದನ್ನು ಮನದಟ್ಟು ಮಾಡುವ ಉದ್ದೇಶವನ್ನು ಪಕ್ಷ ಹೊಂದಿತ್ತು. ಅದರಲ್ಲಿ ಬಹುತೇಕ ಯಶಸ್ವಿಯಾಗಿರುವುದರಿಂದ, ಕಾಂಗ್ರೆಸ್ ಈ ಹೋರಾಟದಿಂದ ಅಂತರ ಕಾಯ್ದುಕೊಂಡಿದೆ ಎನ್ನುವುದು ಒಂದು ಆಯಾಮ.

ಕೇಂದ್ರ ಸರಕಾರ ಮಸೂದೆಯನ್ನು ಹಿಂದಕ್ಕೆ ಪಡೆದುಕೊಳ್ಳುವ ಸಾಧ್ಯತೆ ಕಮ್ಮಿ
ಇನ್ನೊಂದು ಆಯಾಮದ ಪ್ರಕಾರ, ಏನೇ ಆದರೂ, ಕೇಂದ್ರ ಸರಕಾರ ಮಸೂದೆಯನ್ನು ಹಿಂದಕ್ಕೆ ಪಡೆದುಕೊಳ್ಳುವ ಸಾಧ್ಯತೆ ಕಮ್ಮಿ. ಹೀಗಿರುವಾಗ, ಮತ್ತೆಮತ್ತೆ ಅದೇ ವಿಚಾರವನ್ನು ಇಟ್ಟುಕೊಂಡು ಹೋರಾಟ ನಡೆಸಿದರೆ ಉಪಯೋಗವಿಲ್ಲ ಎನ್ನುವುದು ಇನ್ನೊಂದು ಆಯಾಮ.

ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಬಹುದು ಎನ್ನುವ ಅಭಿಪ್ರಾಯ
ಈ ಮಸೂದೆಯನ್ನು ವಿರೋಧಿಸಿಕೊಂಡು ಬರುತ್ತಿದ್ದರೆ, ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಬಹುದು ಎನ್ನುವ ಅಭಿಪ್ರಾಯವನ್ನು ಕೆಲವು ಕಾಂಗ್ರೆಸ್ ಮುಖಂಡರು ಹೊಂದಿದ್ದಾರೆ ಎನ್ನುವ ಮಾತಿದೆ. ಮಸೂದೆಯ ಪರವಾಗಿ ಇರುವವರ ವಿರೋಧವನ್ನು ತೀವ್ರವಾಗಿ ಕಟ್ಟಿಕೊಳ್ಳುವುದು ಬೇಡ ಎನ್ನುವ ಕಾರಣವೂ, ಕಾಂಗ್ರೆಸ್, ಈ ಮಸೂದೆಯ ವಿರುದ್ದದ ಹೋರಾಟದಿಂದ ಅಂತರ ಕಾಯ್ಡುಕೊಂಡಿದ್ದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಜನಪರವಾದ ಬೇರೆ ಸಮಸ್ಯೆಗಳು
ಮತ್ತೊಂದು ಆಯಾಮದ ಪ್ರಕಾರ, ಇದೇ ವಿಚಾರದಲ್ಲಿ ಹೋರಾಟ ನಡೆಸಿಕೊಂಡು ಬಂದರೆ, ಜನಪರವಾದ ಬೇರೆ ಸಮಸ್ಯೆಗಳನ್ನು ಕಡೆಗಣಿಸಿದಂತಾಗುತ್ತದೆ. ಹಾಗಾಗಿ, ರಾಜ್ಯದ/ದೇಶದ ಬೇರೆ ವಿವಾದಿತ ವಿಚಾರವನ್ನು ಮುಂದಿಟ್ಟುಕೊಂಡು ಹೋರಾಟ ಮಾಡುವ ತೀರ್ಮಾನಕ್ಕೆ ಕಾಂಗ್ರೆಸ್ ಬಂದಿದೆ ಎನ್ನುವ ಮಾತೂ ಕೇಳಿಬರುತ್ತಿದೆ.

ಪೌರತ್ವ ತಿದ್ದುಪಡಿ ಮಸೂದೆ, ಶುಕ್ರವಾರದಿಂದ (ಜ 10) ಜಾರಿಗೆ
ತೀವ್ರ ವಿರೋಧದ ನಡುವೆಯೂ ಪೌರತ್ವ ತಿದ್ದುಪಡಿ ಮಸೂದೆ, ಶುಕ್ರವಾರದಿಂದ (ಜ 10) ಜಾರಿಗೆ ಬಂದಿದೆ. ಕಳೆದ ಡಿಸೆಂಬರ್ ಹದಿನಾಲ್ಕಕ್ಕೆ ರಾಷ್ಟ್ರಪತಿಗಳು ಈ ವಿಧೇಯಕಕ್ಕೆ ಅಂಕಿತ ಹಾಕಿದ್ದರು. ಆದರೆ, ಕಾಯಿದೆಗೆ ಸಂಬಂಧಿಸಿದಂತೆ, ನಿಯಮಗಳೇನು ಎನ್ನುವುದನ್ನು ಕೇಂದ್ರ ಸರಕಾರ ಇನ್ನೂ ಸ್ಪಷ್ಟ ಪಡಿಸಿಲ್ಲ.












Click it and Unblock the Notifications