ಮರಿ ಖರ್ಗೆಗೆ ಗೃಹ ಖಾತೆಯ ಕೆಲಸಗಳು ಲೀಸ್ ಎಂದ ನಳೀನ್: 'ಕಾಮಿಡಿ ಕಿಲಾಡಿ' ಕಟೀಲ್ಗೆ ಕಾಮನ್ ಸೆನ್ಸ್ ಇಲ್ಲ ಎಂದ ಕಾಂಗ್ರೆಸ್
ಬೆಂಗಳೂರು, ಜೂನ್ 23: ಡಾ ಜಿ ಪರಮೇಶ್ವರ ಅವರು ಗೃಹ ಖಾತೆಯ ಕೆಲಸಗಳನ್ನು ಮರಿ ಖರ್ಗೆಗೆ ಲೀಸ್ ಕೊಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್, ನಳೀನ್ ಕಟೀಲ್ಗೆ ಕನಿಷ್ಠ ಕಾಮನ್ ಸೆನ್ಸ್ ಇಲ್ಲ ಎಂದು ಹರಿಹಾಯ್ದಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಬಿಜೆಪಿಗರ ಇತ್ತೀಚಿನ ಮಾತು ಕೃತಿ ಗಮನಿಸಿದರೆ ನಮ್ಮ ಸರ್ಕಾರ ಉಚಿತ ಮಾನಸಿಕ ಚಿಕಿತ್ಸೆಯ ಯೋಜನೆಯನ್ನೂ ರೂಪಿಸಬೇಕಾದೀತು' ಎಂದು ವಾಗ್ದಾಳಿ ನಡೆಸಿದೆ.

ಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಸೋಲಿಗೆ ಕಾರಣನಾದ ನಾಮಕಾವಸ್ಥೆ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೆ ಕನಿಷ್ಠ ಕಾಮನ್ ಸೆನ್ಸ್ ಇಲ್ಲ, ಇನ್ನು ಸಂಸದೀಯ ನಿಯಮಗಳ ಬಗ್ಗೆ ಅರಿವಿರಲು ಹೇಗೆ ಸಾಧ್ಯ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಪ್ರಿಯಾಂಕ್ ಖರ್ಗೆ ಅವರು ಕಲಬುರ್ಗಿಯ ಉಸ್ತುವಾರಿ ಸಚಿವರು, ಅಲ್ಲಿನ ವ್ಯವಸ್ಥೆಯನ್ನು ಸರಿಪಡಿಸುವುದು ಅವರ ಹೊಣೆಗಾರಿಕೆ, ಅಲ್ಲಿನ ಅಧಿಕಾರಿಗಳನ್ನು ಸರಿದಾರಿಗೆ ತರುವುದು ಅವರದ್ದೇ ಜವಾಬ್ದಾರಿ. ಇಷ್ಟು ಸಾಮಾನ್ಯ ತಿಳುವಳಿಕೆ ಇಲ್ಲದಿರುವುದಕ್ಕಾಗಿಯೇ ಕಟೀಲ್ ಅವರನ್ನು 'ಕಾಮಿಡಿ ಕಿಲಾಡಿ' ಎನ್ನುವುದು ಎಂದು ಕಾಂಗ್ರೆಸ್ ಹೇಳಿದೆ.
ಕಟೀಲ್ ಅವರೇ, ತಾವು ಅಧ್ಯಕ್ಷಗಿರಿಯನ್ನು ಬಿಎಲ್ ಸಂತೋಷ್ ಅವರ ಪಾದರಕ್ಷೆಗಳಿಗೆ ಲೀಸ್ಗೆ ಕೊಟ್ಟಿದ್ದೀರಿ ಎಂದ ಮಾತ್ರಕ್ಕೆ ಬೇರೆಲ್ಲರೂ ಹಾಗೆಯೇ ಎಂದು ತಿಳಿಯುವುದು ಮೂರ್ಖತನ ಎಂದು ಕಾಂಗ್ರೆಸ್ ಕಿಡಿಕಾರಿದೆ.

ಗೋರಕ್ಷಕರ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ
ಗೋರಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪೊಲೀಸ್ ಅಧಿಕಾರಿಗಳ ಜತೆಗಿನ ಸಭೆಯಲ್ಲಿ ಭಜರಂಗದಳದ ಸದಸ್ಯರಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದು, ಶಾಲು ಹೊದ್ದುಕೊಂಡವರು ಕಾನೂನನ್ನು ಕೈಗೆತ್ತಿಕೊಂಡು ಈ ದಳದವರೆಂದು ಹೇಳಿದರೆ ಅವರನ್ನು ಒದ್ದು ಒಳಗೆ ಹಾಕಿ. ಅವರನ್ನು ಕಂಬಿಗಳ ಹಿಂದೆ ಇರಿಸಿ ಎಂದು ಪೊಲೀಸರಿಗೆ ತಾಕೀತು ನೀಡಿದ್ದಾರೆ.
'ಯಾರಾದರೂ ಸ್ವಯಂ ಘೋಷಿತ ನಾಯಕರಾಗಿದ್ದರೆ ಮತ್ತು ಕೋಮುಗಳ ಹೆಸರಿನಲ್ಲಿ ವಿಷವನ್ನು ಉಗುಳುವವರಿದ್ದರೆ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಅನಗತ್ಯ ಕೋಮುಗಲಭೆಗಳು ನನಗೆ ಬೇಕಾಗಿಲ್ಲ' ಎಂದು ಕಲಬುರ್ಗಿಯಲ್ಲಿ ನಡೆದ ಸಭೆಯಲ್ಲಿ ಹೇಳಿದ್ದಾರೆ.
'ಜಾನುವಾರುಗಳ ಸಾಗಣೆಗೆ ಕಾನೂನು ಸ್ಪಷ್ಟವಾಗಿದೆ. ಅದು ನಗರ ಅಥವಾ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿರಲಿ. ಅವರ ಬಳಿ ಸರಿಯಾದ ದಾಖಲೆಗಳಿದ್ದರೆ ಕಿರುಕುಳ ನೀಡಬೇಡಿ' ಎಂದು ಸಚಿವರು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.












Click it and Unblock the Notifications