ಬಿಜೆಪಿ ನಾಯಕರಿಗೆ ಕುಮಾರಣ್ಣ, ಜೆಡಿಎಸ್ ಟಾರ್ಗೆಟ್ ಏಕೆ? 5 ಕಾರಣಗಳು
Recommended Video

ಬೆಂಗಳೂರು, ಸೆಪ್ಟೆಂಬರ್ 21 : ಪ್ರತಿಪಕ್ಷ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸ 'ಧವಳಗಿರಿ' ಮುಂದೆ ಗುರುವಾರ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಆದರೆ, ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮೇಲೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಮೇ ತಿಂಗಳಿನಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಬಿಜೆಪಿಯ ಟಾರ್ಗೆಟ್ ಎಚ್.ಡಿ.ಕುಮಾರಸ್ವಾಮಿ. ಸಿದ್ದರಾಮಯ್ಯ, ಕೆ.ಜೆ.ಜಾರ್ಜ್ ಸೇರಿದಂತೆ ಕಾಂಗ್ರೆಸ್ ನಾಯಕರ ವಿಚಾರದಲ್ಲಿ ಬಿಜೆಪಿ ಮೆತ್ತಗಾಗಿದೆಯೇ?.
ಸಮ್ಮಿಶ್ರ ಸರ್ಕಾರದಲ್ಲಿ ಡಾ.ಜಿ.ಪರಮೇಶ್ವರ ಅವರು ಉಪ ಮುಖ್ಯಮಂತ್ರಿಯಾಗಿದ್ದಾರೆ. ಆದರೆ, ಬಿಜೆಪಿ ನಾಯಕರು ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಜೆಡಿಎಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.
ಕರ್ನಾಟಕದ ರಾಜಕಾರಣದಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಎರಡು ಪ್ರಮುಖ ಸಮುದಾಯಗಳು. ಒಕ್ಕಲಿಗೆ ಕೈಗೆ ಅಧಿಕಾರ ಸಿಕ್ಕಿದ ಬಳಿಕ ಲಿಂಗಾಯತರು ವಾಗ್ದಾಳಿ ಆರಂಭಿಸಿದರೆ? ಎಂಬ ಪ್ರಶ್ನೆಯೂ ಎದ್ದಿದೆ. ಜೆಡಿಎಸ್, ಕುಮಾರಸ್ವಾಮಿ ಟಾರ್ಗೆಟ್ ಯಾಕೆ? ಚಿತ್ರಗಳಲ್ಲಿದೆ ಮಾಹಿತಿ.....

ಕಾಂಗ್ರೆಸ್ ಜೊತೆ ಕೈ ಜೋಡಿಸಿದ್ದು
2018ರ ವಿಧಾನಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಅಂದಿನಿಂದಲೂ ಪ್ರತಿಪಕ್ಷ ಬಿಜೆಪಿ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಅಸಮಾಧಾನಗೊಂಡಿದೆ.
ಕಾಂಗ್ರೆಸ್ ಜೆಡಿಎಸ್ಗೆ ಸರ್ಕಾರ ರಚನೆ ಮಾಡಲು ಬೆಂಬಲ ನೀಡಿತು. 37 ಸೀಟು ಗೆದ್ದ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿತು. ಈ ಬೆಳವಣಿಗೆ ಬಳಿಕ ಬಿಜೆಪಿ ನಾಯಕರು ಕುಮಾರಸ್ವಾಮಿ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ.

ಒಕ್ಕಲಿಗ/ಲಿಂಗಾಯತ ಪ್ರಾಬಲ್ಯ
ಕರ್ನಾಟಕ ರಾಜಕಾರಣದಲ್ಲಿ ಒಕ್ಕಲಿಗ, ಲಿಂಗಾಯತ ಸಮುದಾಯಗಳು ಪ್ರಬಲವಾಗಿವೆ. 2013ರ ಚುನಾವಣೆ ಬಳಿಕ ಕುರುಬ ಸಮಮುದಾಯಕ್ಕೆ ಸೇರಿದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. 2018ರ ಚುನಾವಣೆ ಬಳಿಕ ಒಕ್ಕಲಿಗ ಸಮುದಾಯದ ಎಚ್.ಡಿ.ಕುಮಾರಸ್ವಾಮಿ ಅಧಿಕಾರ ಪಡೆದಿದ್ದಾರೆ. ಆದ್ದಿರಂದ, ರಾಜ್ಯದ ಪ್ರಭಾವಿ ಸಮುಯದಾಯಕ್ಕೆ ಅಧಿಕಾರ ಕೈ ತಪ್ಪಿದೆ. ಇದರಿಂದಾಗಿ ಕುಮಾರಸ್ವಾಮಿ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ.

ಕಾಂಗ್ರೆಸ್ನಲ್ಲಿ ತಕ್ಕ ಉತ್ತರ
ಕರ್ನಾಟಕದ ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಸಹ ಪಾಲುದಾರರು. ಆದರೆ, ಬಿಜೆಪಿ ಸಿದ್ದರಾಮಯ್ಯ, ಕೆ.ಜೆ.ಜಾರ್ಜ್, ಡಾ.ಜಿ.ಪರಮೇಶ್ವರ ಅವರನ್ನು ಟಾರ್ಗೆಟ್ ಮಾಡುತ್ತಿಲ್ಲ. ಕುಮಾರಸ್ವಾಮಿ ಅವರನ್ನು ಮಾತ್ರ ಟಾರ್ಗೆಟ್ ಮಾಡುತ್ತಿದೆ.
ಮಾಜಿ ಸಚಿವ, ಕಾಂಗ್ರೆಸ್ ನಾಯಕ ಎ.ಮಂಜು ಅವರು ದೇವೇಗೌಡರ ಕುಟುಂಬದ ವಿರುದ್ಧದ ಭೂ ದಾಖಲೆ ಬಿಡುಗಡೆ ಮಾಡಿದರೆ, ಅದನ್ನು ಸಹ ಪ್ರಮುಖ ವಿಚಾರವಾಗಿ ಮಾಡಿಕೊಂಡು ಬಿಜೆಪಿ ವಾಗ್ದಾಳಿ ನಡೆಸುತ್ತಿದೆ.
ರಾಷ್ಟ್ರೀಯ ಪಕ್ಷ ಕಾಂಗ್ರೆಸ್ನಲ್ಲಿ ಹಲವಾರು ನಾಯಕರಿದ್ದಾರೆ. ಸ್ಥಳೀಯ ಮಟ್ಟದಿಂದ ರಾಷ್ಟ್ರ ಮಟ್ಟದ ತನಕ ಎಲ್ಲರೂ ಬೆಂಬಲಕ್ಕೆ ನಿಲ್ಲುತ್ತಾರೆ. ಆದರೆ, ಜೆಡಿಎಸ್ನಲ್ಲಿ ತಕ್ಕ ಉತ್ತರ ನೀಡುವ ನಾಯಕರ ಸಂಖ್ಯೆ ಕಡಿಮೆ ಇದೆ. ಇದನ್ನು ಬಿಜೆಪಿ ಬಂಡವಾಳ ಮಾಡಿಕೊಂಡಿದೆ.

ಪ್ರಾಬಲ್ಯ ಮುರಿಯುವುದು
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಿಜೆಪಿಗೆ ನೇರ ಎದುರಾಳಿ ಆಗಿರುವುದು ಜೆಡಿಎಸ್. ಅದರಲ್ಲೂ 2018ರ ಚುನಾವಣೆ ಬಳಿಕ ಬಿಜೆಪಿಗೆ ಕಾಂಗ್ರೆಸ್ ಮಾತ್ರ ಎದುರಾಳಿಯಲ್ಲ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ಮೇಲೆ ಜೆಡಿಎಸ್ ಪ್ರಭಾವ ಮತ್ತಷ್ಟು ಹೆಚ್ಚಿದೆ. ಆದ್ದರಿಂದ, ಪಕ್ಷದ ಪ್ರಾಬಲ್ಯ ಕಡಿಮೆ ಮಾಡಲು ಪಕ್ಷವನ್ನು ಟಾರ್ಗೆಟ್ ಮಾಡಲಾಗುತ್ತಿದೆ.

ಸಮ್ಮಿಶ್ರ ಸರ್ಕಾರದ ನೆನಪು
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವದಲ್ಲಿತ್ತು. ಆಗ ಜೆಡಿಎಸ್ ಅಧಿಕಾರ ಹಸ್ತಾಂತರ ಮಾಡಲಿಲ್ಲ ಎಂಬ ಹಿಂದಿನ ದ್ವೇಷ ಬಿಜೆಪಿ ನಾಯಕರಲ್ಲಿ ಇನ್ನೂ ಇದೆ. ಹಳೆಯ ದ್ವೇಷದ ಹಿನ್ನಲೆಯಲ್ಲಿ ಬಿಜೆಪಿ ಇನ್ನೂ ಜೆಡಿಎಸ್ ಪಕ್ಷವನ್ನು ಟಾರ್ಗೆಟ್ ಮಾಡುತ್ತಿದೆ.












Click it and Unblock the Notifications