ಪೂರ್ಣ ಪ್ರಮಾಣದ ಸಿದ್ದರಾಮಯ್ಯ ಸಂಪುಟ ಯಾವಾಗ?

ಆದರೆ ಇದರಿಂದ ಸದ್ಯಕ್ಕೆ ಸಂಪುಟದ ಭಾರಿ ಹೊರೆ ಅವರ ಹೆಗಲ ಮೇಲೆ ಬಿದ್ದಂತಾಗಿದೆ. ಸಂತೋಷ್ ಲಾಡ್ ಹೈಡ್ರಾಮಾ ನಡೆಸಿ ಕೊನೆಗೂ ರಾಜೀನಾಮೆ ಒಗಾಯಿಸಿರುವ ಹಿನ್ನೆಲೆಯಲ್ಲಿ ಅವರು ನಿರ್ವಹಿಸುತ್ತಿದ್ದ ಮೂಲಸೌಕರ್ಯ ಅಭಿವೃದ್ಧಿ ಖಾತೆ ಹಾಗೂ ವಾರ್ತಾ ಖಾತೆಯು ಈಗ ಮುಖ್ಯಮಂತ್ರಿಯ ಹೆಗಲೇರಿದಂತಾಗಿದೆ.
ಹಾಗೆ ನೋಡಿದರೆ ಕಳೆದ 6 ತಿಂಗಳಲ್ಲಿ ಲಾಡ್ ಅವರು ಸಂತೋಷವಾಗಿ ಈ ಎರಡೂ ಖಾತೆಗಳನ್ನು ಸಮರ್ಪಕವಾಗಿ ನಿಭಾಯಿಸಿದರು ಅಂತಲ್ಲ. ಅವರದೇ ಸಮಸ್ಯೆಗಳಲ್ಲಿ ಮುಳುಗಿದ್ದ ಸಚಿವರ ಲಾಡ್ ತಮ್ಮ ಇಲಾಖೆಗಳ ಕಡೆ ಹರಿಸಿರಲಿಲ್ಲ.
ಈಗ ಹೆಚ್ಚು'ವರಿ'ಯಾಗಿ ಸಿಎಂ ಸಿದ್ದರಾಮಯ್ಯನವರೇ ಅವುಗಳನ್ನು ನಿಭಾಯಿಸಬೇಕಿದೆ. ಆದರೆ ಈಗಾಗಲೇ, ಪ್ರಮುಖ ಖಾತೆಗಳಾದ ಹಣಕಾಸು, ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಇಂಧನ ಖಾತೆಗಳು ಮುಖ್ಯಮಂತ್ರಿ ಉಸ್ತುವಾರಿಯಲ್ಲಿ ಕಳೆದುಹೋಗಿರುವ ಸಿಎಂ,
ಮೂಲಸೌಕರ್ಯ ಅಭಿವೃದ್ಧಿ ಖಾತೆ ಹಾಗೂ ವಾರ್ತಾ ಖಾತೆಯನ್ನು ಹೆಚ್ಚು ಕಾಲ ತಮ್ಮಲ್ಲೇ ಉಳಿಸಿಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗದು. ಏಕೆಂದರೆ ಗಣಿ ಮತ್ತು ಭೂವಿಜ್ಞಾನ, ಆಡಳಿತ ಸಿಬ್ಬಂದಿ ಮತ್ತು ಸುಧಾರಣೆ, ಗುಪ್ತಚರ, ಬೆಂಗಳೂರು ನಗರಾಭಿವೃದ್ಧಿ, ರೇಷ್ಮೆ ಸೇರಿದಂತೆ 10 ಖಾತೆಗಳು ಈಗಾಗಲೇ ಅವರ ಹೆಗಲ ಮೇಲಿವೆ.
ಹೋಗಲಿ ಬೆಳಗಾವಿ ಅಧಿವೇಶನಕ್ಕೂ ಮುನ್ನ ತರಾತುರಿಯಲ್ಲಿ ನಾಳೆಯೇ ಒಂದಿಬ್ಬರನ್ನು ಸಂಪುಟಕ್ಕೆ ತೆಗೆದುಕೊಳ್ಳುತ್ತಾರಾ ಅಂದರೆ ರಾಜಕೀಯವಾಗಿ ಅದು ತಕ್ಷಣಕ್ಕೆ ಈಡೇರುವಂತಿಲ್ಲ. ಡಿಕೆ ಶಿವಕುಮಾರ್, ರೋಶನ್ ಬೇಗ್ ಮುಂತಾದವರು ಒಳನುಸುಳುತ್ತಾರೆಂಬ ಎಣಿಕೆಯಿದೆಯಾದರೂ ಸಂಪುಟದ ಪರಮಾಧಿಕಾರ ಹೊಂದಿರುವ ಸಿದ್ದರಾಮಯ್ಯಗೆ ಆ ಬಗ್ಗೆ ಒಲವಿಲ್ಲ.
ಇನ್ನು, ಸಿಎಂ ಸಿದ್ದು ಹೊರೆ ಇಳಿಸಿಕೊಳ್ಳಲು ಬೇರೆ ಸಚಿವರಿಗೆ ಹೆಚ್ಚುವರಿ ಕೊಡುತ್ತಾರಾ? ಎಂದು ಆಲೋಚಿಸಿದರೆ ಸಿದ್ದರಾಮಯ್ಯನವರ ಅತ್ಯಾಪ್ತರಾದ ಡಾ.ಎಚ್ ಸಿ ಮಹದೇವಪ್ಪ ಅವರು ಎದುರಾಗುತ್ತಾರೆ. ಜತೆಗೆ 6 ತಿಂಗಳಿಂದ ಅನೌಪಚಾರಿಕವಾಗಿ 'ವಾರ್ತಾ ಸಚಿವರಾಗಿರುವ' ಟಿಬಿ ಜಯಚಂದ್ರ ಸಹ ಕಾಣಿಸಿಕೊಳ್ಳುತ್ತಾರೆ. ಮಹದೇವಪ್ಪ ಅವರಿಗೆ ಮೂಲಸೌಕರ್ಯ ಅಭಿವೃದ್ಧಿಯನ್ನು ಮತ್ತು ಜಯಚಂದ್ರಗೆ ವಾರ್ತಾಲಾಪ ಹಂಚಿಕೆ ಮಾಡುವ ಸಾಧ್ಯತೆಯಿದೆ.
ಇನ್ನೂ 5 ಖಾಲಿ ಇವೆ:
ಸಿದ್ದರಾಮಯ್ಯ ಸೇರಿ ಈಗ ಸಂಪುಟದಲ್ಲಿ 30 ಮಂದಿಯಿದ್ದಾರೆ. ಲಾಡ್ ರಾಜೀನಾಮೆಯೊಂದಿಗೆ 5 ಸಚಿವ ಸ್ಥಾನಗಳು ಖಾಲಿಬಿದ್ದಿವೆ. 4 ಸಚಿವ ಸ್ಥಾನಗಳಿಗೆ 6 ತಿಂಗಳಿಂದಲೂ ಲಾಬಿ ಮೇಲೆ ಲಾಬಿ ನಡೆಯುತ್ತಲೇ ಇದೆ. ಸಿದ್ದರಾಮಯ್ಯನವರ ಪೂರ್ಣ ಪ್ರಮಾಣದ ಸಂಪುಟ ಯಾವಾಗ ಅಸ್ತಿತ್ವಕ್ಕೆ ಬರುವುದೋ ಕಾದುನೋಡಬೇಕಿದೆ.












Click it and Unblock the Notifications