ಕಳೆದ ದಸರಾ ವೇಳೆ ಮೈಲಾರ ಲಿಂಗೇಶ್ವರ ಭವಿಷ್ಯ ನುಡಿದಿದ್ದೇನು, ಆಗಿದ್ದೇನು?
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡದ ಮೈಲಾರಲಿಂಗೇಶ್ವರ ದೇವಾಲಯದಲ್ಲಿ ಪ್ರತೀ ಬಾರಿ ಆಯುಧಪೂಜೆಯ ದಿನದಂದು ಕಾರ್ಣಿಕ ನುಡಿಯುವ ಪದ್ದತಿಯಿದೆ.
ಹೆಚ್ಚಾಗಿ ಮಳೆಬೆಳೆ, ನಾಡಿನ ಕ್ಷೇಮದ ವಿಚಾರದಲ್ಲಿ ನುಡಿಯಲಾಗುವ ಈ ಭವಿಷ್ಯವನ್ನು ಜನರು ಬಹುಪಾಲು ನಂಬಿಕೊಂಡು ಬರುತ್ತಿದ್ದಾರೆ ಕೂಡಾ. ಈ ಭವಿಷ್ಯವನ್ನು ವೀಕ್ಷಿಸಲು ಅಸಂಖ್ಯಾತ ಭಕ್ತಸಮೂಹ ಸೇರಿರುತ್ತದೆ.
ಒಗಟಿನ ರೂಪದಲ್ಲಿ ಮತ್ತು ಒಂದು ವಾಕ್ಯದಲ್ಲಿ ಹೇಳುವ ಈ ಭವಿಷ್ಯವನ್ನು ಜನರು ತಮಗೆ ಬೇಕಾದಂತೆ ಅರ್ಥೈಸಿಕೊಂಡ ಉದಾಹರಣೆಗಳೂ ಇದೆ. ಹಿಂದೊಮ್ಮೆ, ಹೂವಿನಹಡಗಲಿಯಲ್ಲಿ, ಗೊರವಯ್ಯ ನುಡಿದ ಭವಿಷ್ಯ ಅಸ್ಪಷ್ಟತೆಯಿಂದ ಕೂಡಿತ್ತು ಎಂದು ಧ್ವನಿಮುದ್ರಿಕೆಯನ್ನು ಬೆಂಗಳೂರಿನ ಸ್ಟುಡಿಯೋಗೆ ಕಳುಹಿಸಿ ಸ್ಪಷ್ಟೀಕರಣ ಪಡೆಯಲಾಗಿತ್ತು.
ಕಳೆದ ವರ್ಷ ದಸರಾದ ವೇಳೆ (ಅಕ್ಟೋಬರ್ 18) ನುಡಿಯಲಾದ ಭವಿಷ್ಯದಲ್ಲಿ ಭಯ ಪಡುವ ಯಾವುದೇ ಅಂಶವಿರಲಿಲ್ಲ. ಮೈಲಾರಲಿಂಗೇಶ್ವರ ಸನ್ನಿಧಾನದಲ್ಲಿ ನುಡಿಯಲಾದ ಭವಿಷ್ಯವಾಣಿ ಏನು, ಅದರ ಸತ್ಯಾಸತ್ಯತೆ ಏನು...

"ಸರ್ವರು ಸಂಪಲೆ ನಾಡೆಲ್ಲ ತಂಪಲೆ ಪರಾಕ್
"ಸರ್ವರು ಸಂಪಲೆ ನಾಡೆಲ್ಲ ತಂಪಲೆ ಪರಾಕ್". ಇದು, ಕಳೆದ ವರ್ಷ ನುಡಿಯಲಾಗಿದ್ದ ಭವಿಷ್ಯ. ನಾಡಿನಲ್ಲಿ ಮಳೆಬೆಳೆ ಚೆನ್ನಾಗಿ ಇರಲಿದೆ, ಎಲ್ಲರೂ ಕ್ಷೇಮವಾಗಿ, ನೆಮ್ಮದಿಯಿಂದ ಬದುಕುತ್ತಾರೆ ಎಂದು ಇದನ್ನು ಅರ್ಥೈಸಲಾಗಿತ್ತು. ಹಾವೇರಿ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡದ ಗೊರವಯ್ಯ ನುಡಿದ ಭವಿಷ್ಯ ಇದಾಗಿತ್ತು. ಗೊರವಯ್ಯ ಇಪ್ಪತ್ತು ಅಡಿ ಎತ್ತರದ ಬಿಲ್ಲನೇರಿ ಕಾರ್ಣಿಕ ನುಡಿಯುತ್ತಾರೆ.

ಉತ್ತರ ಕರ್ನಾಟಕದ ಪ್ರಸಿದ್ದ ದೇವಸ್ಥಾನ
ಉತ್ತರ ಕರ್ನಾಟಕದ ಪ್ರಸಿದ್ದ ದೇವಸ್ಥಾನ ಇದಾಗಿದ್ದು, ಪ್ರತಿ ರವಿವಾರ ಹಾಗೂ ಎಲ್ಲಾ ಹುಣ್ಣಿಮೆಗಳಂದು ಭಾರೀ ಜನಸಮೂಹದೊಂದಿಗೆ ಪಲ್ಲಕ್ಕಿ ಉತ್ಸವ ಇಲ್ಲಿ ಜರುಗುತ್ತದೆ. ಭರತ ಹುಣ್ಣಿಮೆ ದಿನದಂದು ದೇವಸ್ಥಾನದ ಆವರಣದಲ್ಲಿರುವ ದ್ಯಾಮವ್ವನ ಕಟ್ಟಿ ಬಳಿ ಮೂರು ಆಳೆತ್ತರದ ಬಿಲ್ಲಿನ ಮೇಲೆ ನಿಂತು ಕಾರ್ಣಿಕ ಹೇಳುವ ಬಗ್ಗಯ್ಯನ/ಗೊರವಯ್ಯನ ಸಂದೇಶ ಕೇಳಲು ರಾಜ್ಯದ ಮೂಲೆ ಮೂಲೆಗಳಿಂದಲೂ ಲಕ್ಷಾಂತರ ಜನ ಬಂದು ಸೇರುತ್ತಾರೆ.

ಉತ್ತರ ಕರ್ನಾಟಕದ ಬಹುಪಾಲು ಭಾಗ ಅತಿವೃಷ್ಟಿಯಲ್ಲಿ ಮುಳುಗಿತ್ತು
ಕಳೆದ ದಸರಾದಂದು ನುಡಿದ ಕಾರ್ಣಿಕದ ಪ್ರಕಾರ, ಎಲ್ಲರೂ ನೆಮ್ಮದಿಯಿಂದ ಬದುಕುತ್ತಾರೆ ಎಂದು ಅರ್ಥೈಸಲಾಗಿತ್ತು. ಆದರೆ, ಉತ್ತರ ಕರ್ನಾಟಕದ ಬಹುಪಾಲು ಭಾಗ ಅತಿವೃಷ್ಟಿಯಲ್ಲಿ ಮುಳುಗಿತ್ತು. ಕಂಡು ಕೇಳರಿಯದ ಪ್ರವಾಹಕ್ಕೆ ಜನ ತತ್ತರಿಸಿದ್ದರು. ಸಾವಿರಾರು ಕೋಟಿ ರೂಪಾಯಿ ನಷ್ಟವಾಗಿತ್ತು.

ಶ್ರೀ ಮಾಲತೇಶ ಸ್ವಾಮಿ ದೇವಸ್ಥಾನ
ಶ್ರೀ ಮಾಲತೇಶ ಸ್ವಾಮಿ ದೇವಸ್ಥಾನ, ಮೈಲಾರಲಿಂಗೇಶ್ವರ ದೇವಸ್ಥಾನ, ದೇವರಗುಡ್ಡ - ಏಳು ಕೋಟಿಗೋ...ಚಾಂಗ್ಮಲೋ ಎಂದು ಹೆಸರುವಾಸಿ. ಗುಡ್ಡ ಗುಡ್ಡಾಪುರ ಎಂಬ ಹೆಸರು ಬರಲು ಕಾರಣವೇನೆಂದರೆ ಗುಡ್ಡಗಳ ನಡುವೆ ಈ ಊರು ಇರುವುದರಿಂದ. ಇಲ್ಲಿನ ದೇವರನ್ನು ಮಲ್ಲಯ್ಯ, ಮಲ್ಲಾರಿ, ಮೈಲಾರ, ಮಾರ್ತಾಂಡ, ಖಂಡೋಬ, ಖಂಡೇರಾಯ ಎಂದೂ ಕರೆಯುವುದುಂಟು.

ಗೊರವಪ್ಪನ ಕಾರ್ಣಿಕ
ಕಳೆದ ಫೆಬ್ರವರಿ ತಿಂಗಳಲ್ಲಿ, ಬಳ್ಳಾರಿ ಜಿಲ್ಲೆಯ ಐತಿಹಾಸಿಕ ಸುಕ್ಷೇತ್ರ ಮೈಲಾರಲಿಂಗೇಶ್ವರನ ಕಾರ್ಣಿಕೋತ್ಸವ ನುಡಿ ಹೊರಬಿದ್ದಿತ್ತು. 'ಆಕಾಶದ ಕೆಳಗೆ ಗಿಳಿ ಕುಂತಿತ್ತಲೇ ಪರಾಕ್' ಎಂದು ಗೊರವಪ್ಪ ಕಾರ್ಣಿಕ ನುಡಿದಿದ್ದರು. ಆರಂಭದಲ್ಲಿ ಕಾರ್ಣಿಕವನ್ನು 'ಆಕಾಶಕ್ಕೆ ಸಿಡಿಲು ಬಡಿತಲೇ ಪರಾಕ್' ಎಂದು ವಿಶ್ಲೇಷಿಸಲಾಗಿತ್ತು. ಮೈಕ್ ಸಮಸ್ಯೆಯಿಂದ ಈ ರೀತಿಯ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ನಂತರ ಮೈಲಾರ ಜಾತ್ರಾ ಮಂಡಳಿ ಮತ್ತು ಮುಜರಾಯಿ ಇಲಾಖೆ ಈ ಕುರಿತಂತೆ ಸ್ಪಷ್ಟನೆ ನೀಡಿತ್ತು.












Click it and Unblock the Notifications