ಶುಕ್ರವಾರವೂ ದಕ್ಷಿಣ ಕರ್ನಾಟಕದಲ್ಲಿ ಮಳೆಯ ಅಭಿಯಾನ
ಬೆಂಗಳೂರು, ಮೇ 19 : ಗುರುವಾರ ಸಂಜೆ 8.30ರ ಸುಮಾರಿಗೆ ಬೆಂಗಳೂರಿನ ಹಲವಾರು ಬಡಾವಣೆಗಳಲ್ಲಿ, ಗುಡುಗು ಮಿಂಚು ಬಿರುಗಾಳಿ ಸಮೇತ ಮುಕ್ಕಾಲು ಗಂಟೆಗಳ ಕಾಲ ಮಳೆ ಸುರಿದಿದೆ. ಶುಕ್ರವಾರವೂ ಸಂಜೆ ನಗರದಲ್ಲಿ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಬಿರುಬೇಸಿಗೆ, ನೀರಿಲ್ಲದೆ ತತ್ತರಿಸಿದ್ದ ಬೆಂಗಳೂರು ಜನತೆಗೆ, ಈ ಮುಂಗಾರು ಮುಂಚಿನ ಮಳೆ ಸಾಕಷ್ಟು ಅಡೆತಡೆಗಳನ್ನು ತಂದರೂ ಸಂತಸವನ್ನೂ ತಂದಿದೆ. ಜಕ್ಕೂರು, ಮಾಚೋಹಳ್ಳಿ, ಆಲೂರು, ಹೆಸರಘಟ್ಟ, ಮಾದನಾಯಕನಹಳ್ಳಿ, ರಾಮೋಹಳ್ಳಿ ಸೇರಿದಂತೆ ಹಲವಾರು ಬಡಾವಣೆಗಳಲ್ಲಿ ಮಳೆ ಸುರಿದಿದೆ.
ಉತ್ತರ ಮತ್ತು ಮಧ್ಯ ಕರ್ನಾಟಕದಲ್ಲಿ ಒಣಹವೆ ಜಾರಿಯಲ್ಲಿದ್ದರೆ, ಶುಕ್ರವಾರ ದಕ್ಷಿಣ ಕರ್ನಾಟಕ ಮತ್ತು ಕರಾವಳಿಯ ಹಲವಾರು ಜಿಲ್ಲೆಗಳಲ್ಲಿ ಸಾಕಷ್ಟು ಮಳೆಯಾಗಿದೆ. ಬೆಂಗಳೂರು, ತುಮಕೂರು, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಮೈಸೂರು, ಕೊಡಗು, ಮಂಡ್ಯ, ಚಾಮರಾಜನಗರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ.
ಎಲ್ಲೆಲ್ಲಿ ಎಷ್ಟೆಷ್ಟು ಮಳೆ? : ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ 5 ಸೆಂ.ಮೀ., ತುಮಕೂರು ಜಿಲ್ಲೆಯ ಶಿರಾ, ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ 4 ಸೆಂ.ಮೀ., ಬೆಂಗಳೂರು ಎಚ್ಎಎಲ್, ಬೆಂಗಳೂರು ಗ್ರಾಮೀಣ ಜಿಲ್ಲೆಯ ಹೊಸಕೋಟೆ, ಚಿಕ್ಕಮಗಳೂರು ಜಿಲ್ಲೆಯ ಯಗಟಿ, ತರೀಕೆರೆಯಲ್ಲಿ 2 ಸೆಂ.ಮೀ., ಮಂಡ್ಯದ ಕೆಆರ್ ಪೇಟೆ, ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ನಲ್ಲಿ 1 ಸೆಂ.ಮೀ. ಮಳೆಯಾಗಿದೆ.
ಬೆಂಗಳೂರು ಹವಾಮಾನ ಇಲಾಖೆಯ ಪ್ರಕಾರ ಮುಂದಿನ 5 ದಿನಗಳ ಕಾಲವೂ ಮಳೆಯ ಅಭಿಯಾನ ಮುಂದುವರಿಯಲಿದೆ. ಬೆಂಗಳೂರು, ಮೈಸೂರು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಮಂಡ್ಯ, ಉಡುಪಿ, ದಕ್ಷಿಣ ಕನ್ನಡ, ಚಾಮರಾಜನಗರ ಜಿಲ್ಲೆಗಳಲ್ಲಿ ಜನರು ಸಂಜೆಯ ವೇಳೆ ಛತ್ರಿ ಹಿಡಿದುಕೊಂಡು ಅಡ್ಡಾಡುವುದು ಸೂಕ್ತ.
ಇಷ್ಟೆಲ್ಲ ಮಳೆಯ ಸಂತಸದ ನಡುವೆ, ಕ್ರಿಕೆಟ್ ಪ್ರೇಮಿಗಳು ಚಿಂತಾಕ್ರಾಂತರಾಗಿ ಕುಳಿತಿದ್ದಾರೆ. ಶುಕ್ರವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಕೊಲ್ಕತಾ ನೈಟ್ ರೈಡರ್ಸ್ ನಡುವೆ 2ನೇ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ನಿನ್ನೆಯಂತೆ ಈ ದಿನವೂ ಮಳೆಯಾಗಿ ಪಂದ್ಯ ಸಂಪೂರ್ಣ ರದ್ದಾದರೆ ಹೆಚ್ಚು ಅಂಕ ಪಡೆದ ಮುಂಬೈ ಇಂಡಿಯನ್ಸ್ ಫೈನಲ್ ತಲುಪಲಿದೆ.