Border Dispute : ಯಾವುದೇ ಕಾರಣಕ್ಕೂ ಮಹಾರಾಷ್ಟ್ರ ಸಚಿವರನ್ನ ಕರ್ನಾಟಕಕ್ಕೆ ಬರಲು ಬಿಡಲ್ಲ: ಆರ್. ಅಶೋಕ್
ಬೆಂಗಳೂರು, ಡಿಸೆಂಬರ್ 5 : ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿವಾದದಲ್ಲಿ ಯಾವುದೇ ಕಾರಣಕ್ಕೂ ಮಹಾರಾಷ್ಟ್ರ ಸಚಿವರನ್ನ ಕರ್ನಾಟಕಕ್ಕೆ ಬರಲು ಬಿಡಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ಈ ಕುರಿತು ವಿಧಾನಸೌಧದಲ್ಲಿ ಸೋಮವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಎಂಇಎಸ್ ವರ್ಚಸ್ಸು ಕಡಿಮೆ ಆಗ್ತಿದ್ದಂತೆ ಈ ರೀತಿ ಮಾಡ್ತಿದ್ದಾರೆ. ಅವರಿಗೆ ಈವೆಂಟ್ ಇಲ್ಲದಾಗ ಖ್ಯಾತೆ ತಗೀತಾರೆ. ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿವಾದದಲ್ಲಿ ಮಹಾಜನ್ ವರದಿಯೇ ಅಂತಿಮ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. ಸುಪ್ರೀಂ ಕೋರ್ಟ್ ನಲ್ಲಿ ಕೂಡ ಸ್ಪಷ್ಟವಾಗಿದೆ. ದಾಖಲೆ, ಜನಾಭಿಪ್ರಾಯ ಎಲ್ಲವೂ ನಮ್ಮಂತೆಯೇ ಇದೆ, ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ರೀತಿ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಶಿವಸೇನೆ ನಾಟಕದ ಕಂಪನಿ ಆಗಾಗ ಈ ರೀತಿ ನಾಟಕ ಮಾಡ್ತಾರೆ.
ನೆಲ, ಜಲ ವಿಚಾರ ಬಂದಾಗ ನಮ್ಮ ಸರ್ಕಾರ ಬದ್ಧವಾಗಿದೆ. ನಾವು ಅದನ್ನ ಬಿಟ್ಟು ಕೊಡುವ ಪ್ರಶ್ನೆ ಇಲ್ಲ. ಶಿವಸೇನೆ ನಾಟಕದ ಕಂಪನಿ ಆಗಾಗ ಈ ರೀತಿ ನಾಟಕ ಮಾಡ್ತಾರೆ ಎಂದು ಕಿಡಿಕಾರಿದರು.

ಸುಪ್ರೀಂ ಕೋರ್ಟ್ನಲ್ಲಿ ಕೇಸ್ ಇರುವಾಗ ಈ ರೀತಿ ಮಾಡಬಾರದು. ಸಚಿವರನ್ನ ಕಳಿಸಿರೋದಕ್ಕೆ ಪ್ರತಿಯಾಗಿ ನಾವು ಸ್ಟ್ರಾಟರ್ಜಿ ಮಾಡ್ತೀವಿ. ಮುಖ್ಯಮಂತ್ರಿಗಳ ಸಿಎಂ ಬಳಿ ನಾವು ಮಾತಾಡ್ತೀವಿ.
ಮತ್ತೆ ಮತ್ತೆ ಖ್ಯಾತೆ ತೆಗೆಯೋದು ಕಾಮನ್ ಆಗಿದೆ. ಜಿಲ್ಲಾಧಿಕಾರಿಗಳ ಜೊತೆಗೆ ಮಾತಾಡಿದ್ದೀನಿ, ಮತ್ತೆ ಮಾತಾಡ್ತಿವಿ, ಯಾವುದೇ ರೀತಿಯ ಕಾನೂನು ಸುವ್ಯವಸ್ಥೆ ಹಾಳಾಗದಂತೆ ನೋಡಿಕೊಳ್ಳಲು ಸೂಚಿಸಿದ್ದೇನೆ. ಬಹಳ ವರ್ಷದಿಂದ ಇದೆ ರೀತಿ ಖ್ಯಾತೆ ತಗೀತಿದ್ದಾರೆ. ಇದೆಲ್ಲಾ ಎಲೆಕ್ಷನ್ ಸ್ಟಂಟ್, ಅದಕ್ಕೆ ಯಾರೂ ಬೆಲೆ ಕೊಡಲ್ಲ ಎಂದರು.
ಕರ್ನಾಟಕದ ಪ್ರಕಾರ ಗಡಿವಿವಾದ ಮುಗಿದುಹೋಗಿರುವ ಅಧ್ಯಾಯ: ಬಸವರಾಜ ಬೊಮ್ಮಾಯಿ
ಕರ್ನಾಟಕದ ಪ್ರಕಾರ ಗಡಿವಿವಾದ ಮುಗಿದುಹೋಗಿರುವ ಅಧ್ಯಾಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಭೇಟಿ ನೀಡುವ ಬಗ್ಗೆ ತಿಳಿದ ಸಂದರ್ಭದಲ್ಲಿ ಲಿಖಿತವಾಗಿ ಈಗಿರುವ ವಾತಾವರಣದಲ್ಲಿ ಭೇಟಿ ನೀಡುವುದು ಬೇಡ. ಕಾನೂನು ಸುವ್ಯವಸ್ಥೆಗೆ ಸಮಸ್ಯೆಯಾಗಲಿದೆ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಆದಾಗ್ಯೂ ಕೂಡ ಅವರು ಬರುವುದಾಗಿ ತಿಳಿಸಿರುವುದು ಸರಿಯಾದ ಕ್ರಮವಲ್ಲ ಎಂದರು.

ಮಹಾರಾಷ್ಟ್ರ ಹಾಗೂ ಕರ್ನಾಟಕದ ಜನರ ಮಧ್ಯೆ ಸಾಮರಸ್ಯವಿದೆ. ಅದೇ ಸಂದರ್ಭದಲ್ಲಿ ಗಡಿ ವಿವಾದವೂ ಇದೆ. ಆದರೆ ಮಹಾರಾಷ್ಟ್ರ ಕ್ಯಾತೆ ತೆಗೆದು ಸುಪ್ರೀಂ ಕೋರ್ಟಿಗೆ ಹೋಗಿದ್ದಾರೆ. ಈಗಿನ ಸಂದರ್ಭದಲ್ಲಿ ಪ್ರವಾಸ ಮಾಡುವುದು ಪ್ರಚೋದನಕಾರಿ ಕೆಲಸ. ಜನರಲ್ಲಿ ಭಾವನೆಗಳನ್ನು ಕೆರಳಿಸುವ ಕೆಲಸವಾಗುತ್ತದೆ. ಮತ್ತೊಮ್ಮೆ ಮಹಾರಾಷ್ಟ್ರ ಮುಖ್ಯ ಮಂತ್ರಿಗಳೊಂದಿಗೆ ಮಾತನಾಡುವುದಾಗಿ ತಿಳಿಸಿದರು.
ಅಕಸ್ಮಾತ್ ಬರುವ ಸಾಹಸ ಮಾಡಿದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಸೂಕ್ತ ಕಾನೂನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲು ನಮ್ಮ ಸರ್ಕಾರ ಹಿಂದೆ ಮುಂದೆ ನೋಡುವುದಿಲ್ಲ ಎಂದರು. ಹಿಂದೆ ಇಂಥ ಸಂದರ್ಭಗಳಾದ ಸಂದರ್ಭದಲ್ಲಿ ಏನು ಕ್ರಮ ತೆಗೆದುಕೊಂಡಿದ್ದರೋ ಅದೇ ರೀತಿ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.












Click it and Unblock the Notifications