ನಾವು ಹುಟ್ಟಿನಿಂದಲೇ ಹಿಂದುಗಳು, ಅವರದ್ದು ನಾಟಕ ಎಂದು ಡಿ.ಕೆ.ಶಿವಕುಮಾರ್ ಕಿಡಿ
ಬೆಳಗಾವಿ,ಡಿಸೆಂಬರ್ 19: ನಾವೂ ಕೂಡಾ ಹಿಂದೂ, ಅವರದ್ದು ಬರೀ ನಾಟಕ. ಆಚಾರ ವಿಚಾರದಲ್ಲಿ ನಾವು ಹಿಂದೂಗಳೇ. ಅಧಿವೇಶನದಲ್ಲಿ ಭ್ರಷ್ಟಾಚಾರ ಚರ್ಚೆ ಆಗಬಾರದು, ಓಟ್ ಕಳ್ಳತನ ಚರ್ಚೆ ಆಗಬಾರದು ಎಂದು ಈ ವಿವಾದ ಸೃಷ್ಟಿ ಮಾಡಿದ್ದಾರೆ ಎಂದು ಬಿಜೆಪಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕಿಡಿ ಕಾರಿದರು.
ಈ ಕುರಿತು ವಿಧಾನಸಭೆ ಸಭಾಂಗಣದಲ್ಲಿ ವೀರ್ ಸಾವರ್ಕರ್ ಫೋಟೋ ಹಾಕಿದ್ದನ್ನು ಖಂಡಿಸಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಸುವರ್ಣಸೌಧದಲ್ಲಿ ಪ್ರತಿಭಟನೆ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಸುಳ್ಳಿನ ರಾಜ, ಸುವರ್ಣ ಸೌಧದ ಅಸೆಂಬ್ಲಿ ಹಾಲ್ ನಲ್ಲಿ ಸಾವರ್ಕರ್ ಫೋಟೋ ಹಾಕಿದ್ದು ನನಗೆ ಗೊತ್ತೇ ಇಲ್ಲ ಎನ್ನುತ್ತಾರೆ ಎಂದು ಮುಖ್ಯಮಂತ್ರಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಸುವರ್ಣಸೌಧದ ಅಸೆಂಬ್ಲಿ ಹಾಲ್ ನಲ್ಲಿ ಮಹಾತ್ಮ ಗಾಂಧಿ, ಅಂಬೇಡ್ಕರ್ ಫೋಟೋ ಅನಾವರಣ ಇದೆ ಎಂದು ಆಹ್ವಾನ ನೀಡಿದರು. ಆದರೆ ಇವಾಗ ಸಾವರ್ಕರ್ ಫೋಟೋ ಕೂಡಾ ಹಾಕಿದ್ದಾರೆ. ಸಾವರ್ಕರ್ ಗೆ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣಕ್ಕೆ ಸಂಬಂಧ ಇಲ್ಲ, ಸ್ವಾತಂತ್ರ ಹೋರಾಟಕ್ಕೆ ಸಾವರ್ಕರ್ ಕೊಡುಗೆ ಇಲ್ಲ. ಅವರು ವಿವಾದಾತ್ಮಕ ವ್ಯಕ್ತಿ ಎಂದು ಆರೋಪಿಸಿದರು.

ಬೆಳಗಾವಿಯಲ್ಲಿ ಅಧಿವೇಶನ ಮಾಡಬೇಕು ಎಂದು ಒತ್ತಾಯ ಮಾಡಿ ಮಾಡಿಸಿದ್ದೇವೆ. ಸರ್ಕಾರ ಉತ್ತರ ಕರ್ನಾಟಕವನ್ನು ಮರೆತು ಬಿಟ್ಟಿದೆ. ಇಲ್ಲಿ ನಡೆದ ಪ್ರತಿಭಟನೆ, ಇಲ್ಲಿನ ಸಮಸ್ಯೆಗಳು, ಭ್ರಷ್ಟಾಚಾರದಿಂದ ಆತ್ಮಹತ್ಯೆ ಪ್ರಕರಣ ಚರ್ಚೆ ಆಗುತ್ತೆ ಎಂದು ದಾರಿ ತಪ್ಪಿಸುವ ಪ್ರಯತ್ನ ಇದಾಗಿದೆ ಎಂದು ಆರೋಪಿಸಿದರು.
ಅಸೆಂಬ್ಲಿ ಹಾಲ್ ನಲ್ಲಿ ನೆಹರೂ, ಶಿಶುನಾಳ ಶರೀಫ, ಬಸವಣ್ಣ ನಾರಾಯಣ ಗುರು,ಕನಕದಾಸರ ಫೋಟೋ ಹಾಕಬೇಕು ಎಂಬುದು ನಮ್ಮ ಬೇಡಿಕೆ. ಬಿಜೆಪಿ ರಾಜಕಾರಣ ಮಾಡುತ್ತಿದೆ ಹೊರತು ಸಾಮಾಜಿಕ ಕಳಕಳಿ ಇಲ್ಲ. ಜನರ ಬದುಕು ಭಾವನೆ ಮುಖ್ಯ ಅಲ್ಲ ಎಂದರು.
ಈಗ ನಾವು ಸರ್ಕಾರಕ್ಕೆ ಆಗ್ರಹಿಸುತ್ತಿರುವುದೇನೆಂದರೆ, ಈ ಸುವರ್ಣಸೌಧದಲ್ಲಿ ದೇಶದ ಮೊದಲ ಪ್ರಧಾನಿ, ಆಧುನಿಕ ಭಾರತದ ನಿರ್ಮಾತೃ ಪಂಡಿತ್ ಜವಹಾರ್ ಲಾಲ್ ನೆಹರೂ, ಶಿಶುನಾಳ ಷರೀಫರು, ವಿಶ್ವಗುರು ಬಸವಣ್ಣ, ನಾರಾಯಣಗುರು, ಕನಕದಾಸರು, ಅಂಬೇಡ್ಕರ್, ಬಾಬು ಜಗಜೀವನ ರಾಮ್, ಸರ್ದಾರ್ ವಲ್ಲಭಬಾಯ್ ಪಟೇಲ್, ಕುವೆಂಪು ಹಾಗೂ ಈ ಭಾಗದ ಪ್ರಮುಖ ವ್ಯಕ್ತಿಗಳ ಭಾವಚಿತ್ರಗಳನ್ನು ಹಾಕಬೇಕು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಉತ್ತರ ಕರ್ನಾಟಕವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಇಲ್ಲಿ ಜ್ವಲಂತ ಸಮಸ್ಯೆಗಳಿವೆ. ಅನೇಕ ಪ್ರತಿಭಟನೆಗಳು ನಡೆದಿವೆ. ಭ್ರಷ್ಟಾಚಾರ, ಆತ್ಮಹತ್ಯೆ ಪ್ರಕರಣಗಳು ನಡೆದಿವೆ. ಇವೆಲ್ಲವೂ ಚರ್ಚೆ ಆಗಲಿದೆ ಎಂಬ ಕಾರಣಕ್ಕೆ, ದಾರಿ ತಪ್ಪಿಸಲು ಸರ್ಕಾರ ಈ ಪ್ರಯತ್ನಕ್ಕೆ ಮುಂದಾಗಿದೆ.'
ಬಿಜೆಪಿಯವರು ಅಜೆಂಡಾ ರಚಿಸಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾರಾಯಣಗುರು, ಕುವೆಂಪು, ಬಸವಣ್ಣ, ಕನಕದಾಸರು, ವಾಲ್ಮೀಕಿ ಸೇರಿದಂತೆ ನಮಗೆ ಎಲ್ಲರೂ ಬೇಕು. ಸಾಮಾಜಿಕ ನ್ಯಾಯ ಸಿಗಬೇಕು. ದೇಶ, ರಾಜ್ಯದ ಹಿತಕ್ಕೆ ಶ್ರಮಿಸಿ ಅಮರರಾದ ಎಲ್ಲಾ ಧರ್ಮದ ನಾಯಕರು ಬೇಕು ಎಂಬುದು ನಮ್ಮ ಅಜೆಂಡಾ' ಎಂದು ತಿಳಿಸಿದರು.
ಬಿಜೆಪಿಯವರು ಈ ವಿಚಾರವನ್ನು ಈಗ ಯಾಕೆ ಪ್ರಸ್ತಾಪ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಮಾತನಾಡಿ, ಭ್ರಷ್ಟಾಚಾರ, ಮತದಾರರ ಮಾಹಿತಿ ಕಳುವು, 40% ಕಮಿಷನ್, ಈ ಭಾಗದ ಜನರಿಗೆ ಆಗುತ್ತಿರುವ ಅನ್ಯಾಯ, ದುರಾಡಳಿತದ ಬಗ್ಗೆ ಚರ್ಚೆ ಆಗಬಾರದು ಎಂಬ ಕಾರಣಕ್ಕೆ ಈ ವಿಚಾರ ಪ್ರಸ್ತಾಪಿಸುತ್ತಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಅವರು ಸುಳ್ಳಿನ ರಾಜ. ಸಾರ್ವಕರ್ ಫೋಟೋ ಹಾಕಿರುವುದು ನನಗೆ ಗೊತ್ತೇ ಇಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಈ ವಿಚಾರದಲ್ಲಿ ನೀವು ನಿಮಗೆ ಬೇಕಾದ ಸಮರ್ಥನೆ ಮಾಡಿಕೊಳ್ಳಿ. ಆದರೆ ನನಗೆ ಗೊತ್ತೇ ಇಲ್ಲ ಎಂದು ಸುಳ್ಳು ಹೇಳಿ ಮುಖ್ಯಮಂತ್ರಿ ಸ್ಥಾನಕ್ಕೆ ಧಕ್ಕೆ ತರಬಾರದು' ಎಂದು ಹೇಳಿದರು.












Click it and Unblock the Notifications