ಕೈಕೊಟ್ಟ ಮುಂಗಾರು, ಕೆಆರ್ಎಸ್ನಲ್ಲಿ ಎಷ್ಟು ನೀರಿದೆ?
ಮಂಡ್ಯ, ಆಗಸ್ಟ್ 8 : ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ನಗರಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಕೆಆರ್ಎಸ್ ಜಲಾಶಯ ಈ ಬಾರಿ ತುಂಬುವುದೇ?. ಕೆಆರ್ಎಸ್ನಲ್ಲಿ 105.21 ಅಡಿಯಷ್ಟು ನೀರು ಮಾತ್ರ ಸಂಗ್ರಹವಾಗಿದ್ದು, ರೈತರ ಮತ್ತು ಜನರ ಆತಂಕಕ್ಕೆ ಕಾರಣವಾಗಿದೆ.
ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದು ಜಲಾಶಯಕ್ಕೆ ನೀರಿನ ಒಳ ಹರಿವು ಕಡಿಮೆಯಾಗಿದೆ. 2012ರಲ್ಲಿ ಇದೇ ಸಮುಯದಲ್ಲಿ ಜಲಾಶಯದಲ್ಲಿ 79.3 ಅಡಿ ನೀರು ಸಂಗ್ರಹವಾಗಿತ್ತು. ಅದು ಬಿಟ್ಟರೆ ಕಡಿಮೆ ನೀರು ಸಂಗ್ರಹಣೆಯಾಗಿರುವುದು ಈ ವರ್ಷ ಮಾತ್ರ. [76 ಅಡಿಗೆ ಕುಸಿದ ಕೆಆರ್ ಎಸ್ ನೀರಿನ ಮಟ್ಟ]

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೃಷ್ಣರಾಜ ಸಾಗರ ಜಲಾಶಯದ ಗರಿಷ್ಟ ಮಟ್ಟ 124 ಅಡಿ. 2013, 2014ರಲ್ಲಿ ಆಗಸ್ಟ್ 5ರ ವೇಳೆಗೆ ಜಲಾಶಯ ಬಹುತೇಕ ಭರ್ತಿಯಾಗಿತ್ತು. ಆದರೆ, ಈ ಬಾರಿ ಆಗಸ್ಟ್ 5ರಂದು 105.21 ಅಡಿಗಳಷ್ಟು ನೀರು ಮಾತ್ರ ಸಂಗ್ರಹವಾಗಿದೆ. [ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ: ಗರಿಷ್ಠ, ಸಂಗ್ರಹಣೆ]
ಕಾವೇರಿ ನದಿ ನೀರು ಹಂಚಿಕೆಯ ತೀರ್ಪಿನ ಅನ್ವಯ ಸೆಪ್ಟೆಂಬರ್ನಲ್ಲಿ ಕರ್ನಾಟಕ 40 ಟಎಂಸಿ ನೀರನ್ನು ತಮಿಳುನಾಡಿಗೆ ನೀಡಬೇಕಾಗಿದೆ. ಈಗ ಸಂಗ್ರಹವಾಗಿರುವ ನೀರಿನಲ್ಲಿ 40 ಟಿಎಂಸಿ ನೀರು ಕೊಟ್ಟರೆ ಜಲಾಶಯದ ಮತ್ತಷ್ಟು ಬರಿದಾಗಲಿದೆ. ನೀರು ಬಿಡದಿದ್ದರೆ ತಮಿಳುನಾಡು ಖ್ಯಾತೆ ತೆಗೆಯಲಿದೆ.
ಮಂಡ್ಯ ಜಿಲ್ಲೆಯಲ್ಲಿ ಈ ಬಾರಿ ಮಳೆ ಕಡಿಮೆಯಾಗಿದೆ. ವಾಡಿಕೆಯಂತೆ ಜುಲೈ ತಿಂಗಳಿನಲ್ಲಿ ಮಂಡ್ಯದಲ್ಲಿ 49.5 ಮಿ.ಮೀ ಮಳೆಯಾಗಬೇಕು. ಆದರೆ, ಈ ಬಾರಿ ಕೇವಲ 8.9 ಮಿ.ಮೀ.ಮಳೆಯಾಗಿದೆ. ಕಬ್ಬು ಬೆಳೆಗೆ ಬೆಂಬಲ ಬೆಲೆ ಸಿಕ್ಕಿಲ್ಲ ಎಂದು ಮಂಡ್ಯದಲ್ಲಿ ಇದುವರೆಗೆ 34 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಆರ್ಎಸ್ ಭರ್ತಿಯಾಗದಿದ್ದರೆ ಮುಂದೆ ಮಂಡ್ಯದ ರೈತರು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ.












Click it and Unblock the Notifications