ರಾಜ್ಯದಲ್ಲಿ ನೀರಿಗೆ ಹಾಹಾಕಾರ: ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಮಹತ್ವ ಸಭೆ
ಬೆಂಗಳೂರು, ಜೂನ್ 12: ಮುಂಗಾರು ವಿಳಂಬವಾಗಿದ್ದರಿಂದ ಕೇವಲ ಕೃಷಿ ಮಾತ್ರವಲ್ಲದೇ ಕುಡಿಯವ ನೀರಿಗೂ ಹಾಹಾಕಾರ ತಲೆದೂರಿದೆ. ಮಲೆನಾಡಿನ ಜಿಲ್ಲೆಗಳು ಸೇರಿದಂತೆ ಕರಾವಳಿ ಹಾಗೂ ಕಲ್ಯಾಣ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಕುಡಿಯಲು ನೀರಿಲ್ಲದೇ ಜನ ಪರದಾಡುತ್ತಿದ್ದಾರೆ. ಈ ಸಂಬಂಧ ಪರಿಹಾರ ಕ್ರಮ ಕೈಗೊಳ್ಳುವ ಕುರಿತು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಸೋಮವಾರ ಸಭೆ ನಡೆಸಲಿದ್ದಾರೆ.
ಸಾಮಾನ್ಯವಾಗಿ ಮುಂಗಾರು ಜೂನ್ 1ರಂದು ಆರಂಭವಾಗಬೇಕು. ಆದರೆ ಈ ಬಾಗಿ ನಿರೀಕ್ಷಿತ ಅವಧಿಗಿಂತಲೂ ಮುಂಗಾರು ವಿಳಂಬವಾಗಿದೆ. ಈ ಸಂಬಂಧ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆ, ಶಿವಮೊಗ್ಗ, ಕಲಬುರಗಿ, ಕೊಪ್ಪಳ, ಕೊಡಗು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಜನರಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಇತ್ತ ಬಿಸಿಲು ಸಹ ಹೆಚ್ಚಾಗಿದೆ.

ಕಳೆದ ಬಾರಿ ವಾಡಿಕೆಯಷ್ಟು ಮಳೆಯಾದರೂ ಸಹ ಪ್ರಸಕ್ತ ವರ್ಷ ಅಧಿಕ ಬಿಸಿಲು ಹಾಗೂ ನೀರಿನ ಬಳಕೆ ಹೆಚ್ಚಾಗಿದ್ದರಿಂದ ರಾಜ್ಯದ ಹಲವು ಡ್ಯಾಂಗಳು ಸಹ ಖಾಲಿಯಾಗಿವೆ. ತುಂಗಭದ್ರಾ, ಲಿಂಗನಮಕ್ಕಿ, ಆಲಮಟ್ಟಿ, ಬಸವಸಾಗರ, ಕೆ.ಆರ್.ಎಸ್ ಡ್ಯಾಂಗಳಲ್ಲಿ ನೀರಿನ ಸಂಗ್ರಹವಿಲ್ಲ. ಕಳೆದ ವರ್ಷಕ್ಕಿಂತಲೂ ಡ್ಯಾಂಗಳಲ್ಲಿ ಅತೀ ಕಡಿಮೆ ನೀರಿದೆ.
ನೀರಿನ ಸಮಸ್ಯೆ ನೀಗಲು ಸಾಕಷ್ಟು ಸಮಯ ಬೇಕಿದೆ
ಮುಂದಿನ ದಿನಗಳಲ್ಲಿ ಮಳೆ ಬಂದು ಕೆರೆ, ನದಿಗಳೆಲ್ಲ ತುಂಬಲು, ಸದ್ಯದ ನೀರಿನ ಸಮಸ್ಯೆ ನೀಗಲು ಸಾಕಷ್ಟು ಸಮಯ ಹಿಡಿಯುತ್ತದೆ. ಅಲ್ಲಿಯವರೆಗೆ ಈ ಸಮಸ್ಯೆ ತಡೆಯಲು ಮತ್ತು ನೀರು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲು ಸಿಎಂ ಸಿದ್ದರಾಮಯ್ಯ ಇಂದು ಸಭೆ ನಡೆಸಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ನೀರಿನ ಸಮಸ್ಯೆ ಬಿಗುಡಾಯಿಸುತ್ತಿದ್ದಂತೆ ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಸಭೆ ನಡೆಸಿದ್ದ ಸಿದ್ದರಾಮಯ್ಯ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಅದರ ನಿವಾರಣೆಗೆ ತಕ್ಷಣವೇ ಕ್ರಮ ಕೈಗೊಳ್ಳಿ ಎಂದು ಹಿರಿಯ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು.
ಅದಲ್ಲದೇ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಸುಮಾರು 30ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದರು. ವೃದ್ಧೆ ಸೇರಿದಂತೆ ಗುಣಮುಖರಾಗದೇ ಮೂರು ಮಂದಿ ಮೃತಪಟ್ಟರು. ಮುಂದೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸುವಂತೆ, ಶುದ್ಧ ನೀರು ಪೂರೈಸುವಂತೆ ಅಧಿಕಾರಿಗಳಿಗೆ ಸಭೆಯಲ್ಲಿ ಸಿಎಂ ತಿಳಿಸಿದೆ. ಇಂದಿನ ಸಭೆಯಲ್ಲೂ ಸಹ ಸಿಎಂ ಸಿದ್ದರಾಮಯ್ಯ ಕೆಲವು ಮಹತ್ವದ ಅಂಶಗಳನ್ನು ಚರ್ಚಿಸಿ ಪರಿಹಾರ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications