ಜೈಲಲ್ಲಿ ಕಣ್ಣೀರಿಟ್ಟ ವಿನಯ್ ಕುಲಕರ್ಣಿಗೆ ಕೈದಿ ಸಂಖ್ಯೆ 16,110; ಶೀಘ್ರವೇ ಕೆಲಸ ಹಂಚಿಕೆ, ಕೂಲಿ ನಿಗದಿ
ಬೆಂಗಳೂರು: ಧಾರವಾಡದ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಕೊಲೆಗಾರನಾಗಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಎಲ್ಲ 17ಆರೋಪಿಗಳು ಜೈಲು ಸೇರಿದ್ದಾರೆ. ಈ ವಿಚಾರವಾಗಿ ರಾಜ್ಯದಲ್ಲಿ ಚರ್ಚೆಗಳು ನಡೆಯುತ್ತಿವೆ. ಇಂಥಹ ಮಹತ್ವದ ಕೋರ್ಟ್ ತೀರ್ಪಿನಿಂದ ಪೊಲೀಸರು, ರಾಜಕಾರಣಿಗಳಿಗೆ, ಹಣವಂತರಿಗೆ ಬುದ್ಧಿ ಬರಲಿದೆ. ಇದೊಂದು ಎಚ್ಚರಿಕೆ ಗಂಟೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇತ್ತ ಜೈಲು ಸೇರಿದ ವಿನಯ್ ಕಣ್ಣೀರಿಟ್ಟಿದ್ದಾರೆ. ಜೈಲಾಧಿಕಾರಿಗಳು ಕೈದಿ ಸಂಖ್ಯೆ ನೀಡಿದ್ದಾರೆ. ಮಾಜಿ ಸಚಿವರ ಜೈಲು ಜೀವನ ಕುರಿತು ಒಂದಷ್ಟು ಅಪ್ಡೇಟ್ ಮಾಹಿತಿ ಇಲ್ಲಿದೆ.
ಜೈಲು ಶಿಕ್ಷೆಗೆ ಗುರಿಯಾಗಿ ಕಂಬಿ ಹಿಂದೆ ಬರುವ ಎಲ್ಲ ಕೈದಿಗಳಿಗೆ ಒಂದೊಂದು ಸಂಖ್ಯೆ ನೀಡುವ ನಿಯಮವಿದೆ. ಅದೇ ರೀತಿ ವಿನಯ್ ಕುಲಕರ್ಣಿ ಸೇರಿ 17 ಅಪರಾಧಿಗಳಿಗೆ ಕೈದಿ ಸಂಖ್ಯೆ ನೀಡಲಾಗಿದೆ. ವಿನಯ್ಗೆ '16,110 ಕೈದಿ ಸಂಖ್ಯೆ' ನೀಡಲಾಗಿದೆ.

ಜೈಲು ಸೇರಿತ್ತಿದ್ದಂತೆ ವಿಜಯ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಜೊತೆಗೆ ಜೈಲಿನಲ್ಲಿ ನೀಡುವ ಚಪಾತಿ, ಅನ್ನ ಸಾಂಬಾರ್ ತಿನ್ನದೇ ಕಣ್ಣೀರಿಟ್ಟಿದ್ದಾರೆ. ಜೈಲಿನ ಜೀವನಶೈಲಿಗೆ ಒಗ್ಗಿಕೊಳ್ಳದೇ, ತನಗೆ ಬಂದ ಸ್ಥಿತಿ ನೆನೆದು ಭಾವುಕರಾಗಿದ್ದು, ಸರಿಯಾಗಿ ನಿದ್ದೆ ಮಾಡದೇ ಕೆಲವು ಹೊತ್ತಿ ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ. ಕೋರ್ಟ್ ತೀರ್ಪಿನ ಪ್ರಕಾರ ಅವರು ತಮ್ಮ ಜೀವನದ ಮುಂದಿನ ದಿನಗಳನ್ನು ಸೆರೆವಾಸ ಅನುಭವಿಸುವ ಮೂಲಕ ಕಳೆಯಬೇಕಿದೆ. ಉಳಿದ ಎಲ್ಲ ಅಪರಾಧಿಕಗಳಿಗೂ ಇದೇ ಶಿಕ್ಷೆ ನೀಡಲಾಗಿದೆ.
ವಿನಯ್ಗೆ ಕೆಲಸ ಹಂಚಿಕೆ, ಕೂಲಿ ನಿಗದಿ
ಜೈಲಲ್ಲಿರುವ ವಿನಯ್ ಕುಲಕರ್ಣಿ ಕೈದಿ ಸಂಖ್ಯೆ ಪಡೆದು ಸಜಾಬಂಧಿಯಾಗಿದ್ದಾರೆ. ಅವರು ಸೇರಿದಂತೆ ಎಲ್ಲ ಅಪರಾಧಿಗಳಿಗೆ ಜೈಲಾಧಿಕಾರಿಗಳು ಇನ್ನು ಕೆಲಸ ಹಂಚಿಕೆ ಮಾಡಿಲ್ಲ. ಶೀಘ್ರವೇ ಅವರಿಗೆಲ್ಲ ಜೈಲಿನ ನಿಯಮದಂತೆ ಕೆಲಸ ಹಂಚಿಕೆ ಮಾಡಲಿದ್ದಾರೆ. ಇತರರಂತೆ ಮಾಜಿ ಸಚಿವರು ಜೈಲಿನಲ್ಲಿ ಅಧಿಕಾರಿಗಳು ಸೂಚಿಸುವ ಕೆಲಸ ಮಾಡಬೇಕು. ಅದಕ್ಕೆ ಇಂತಿಷ್ಟು ಕೂಲಿಯನ್ನು ಜೈಲಾಧಿಕಾರಿಗಳು ಶೀಘ್ರವೇ ನಿಗದಿ ಮಾಡಲಿದ್ದಾರೆ.
ಹೇಗಿದ್ದ ಜೀವನ ಹೇಗಾಯಿತು!
ಕಾರು ಬಂಗಲೇ, ಐಶಾರಾಮಿ ಜೀವನ, ಆಳು-ಕಾಳು, ಅಧಿಕಾರದ ದರ್ಬಾರು ಎಲ್ಲವನ್ನು ಕಂಡಿದ್ದ, ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಲ್ಲದೇ ಒಂದು ಬಾರಿ ರಾಜ್ಯದ ಮಂತ್ರಿ ಸ್ಥಾನವನ್ನು ಅಲಂಕರಿಸಿದ್ದ ವಿನಯ್ ಕುಲಕರ್ಣಿ ಇಂದು ಕೊಲೆಗಾರನಾಗಿ ಜೈಲು ಸೇರಿದ್ದಾರೆ. ಅಧಿಕಾರದ ಮದದಿಂದ ಮೆರೆದವರಿಗೆ, ದುಡ್ಡಿದ್ದರೇ ಏನು ಬೇಕಾದರೂ ಮಾಡಬಹುದೆಂದು ಎಂದುಕೊಂಡಿದ್ದವರಿಗೆ ಸರಿಯಾದ ಶಿಕ್ಷೆಯಾಗಿದೆ ಅಂತಲೂ ಕೊಲೆಯಾದ ಯೋಗೇಶ್ ಗೌಡರ ಆಪ್ತರು, ಶಾಸಕರ ವಿರುದ್ಧ ಪ್ರತಿಭಟನೆ ಮಾಡಿದವರು, ಇತರರ ಮಾತನಾಡುತ್ತಿದ್ದಾರೆ.
ಹತ್ತು ವರ್ಷಗಳ ಹಿಂದೆ ನಡೆದಿದ್ದ ಕೊಲೆ, ಈಗ ಶಿಕ್ಷೆ
ಧಾರವಾಡ ಜಿಲ್ಲೆ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯ ಯೋಗೇಶ ಗೌಡ ಅವರನ್ನು 2016ರಲ್ಲಿ ಜಿಮ್ನಲ್ಲಿ ಹತ್ಯೆ ಮಾಡಲಾಗಿತ್ತು. ಈ ಕೊಲೆಯ ಹಿಂದೆ ರಾಜಕೀಯ ಜೊತೆಗೆ ರಿಯಲ್ ಎಸ್ಟೇಟ್ ವ್ಯಾಜ್ಯವು ಇತ್ತು ಎಂದು ಬೆಳಕಿಗೆ ಬಂದಿದೆ. ಆರಂಭದಲ್ಲಿ ಧಾರವಾಡ ಪೊಲೀಸರು ವಿನಯ್ ಕುಲಕರ್ಣಿ ಜತೆ ಶಾಮೀಲಾಗಿ ತನಿಖೆಯ ದಿಕ್ಕು ತಪ್ಪಿಸಿದ್ದರು. ಅನ್ಯಾಯ ಮಾಡಲು ಹೊರಟ್ಟಿದ್ದರು. 2019ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಮೃತ ಯೋಗೇಶ ಗೌಡ ಕುಟುಂಬಸ್ಥರ ಒತ್ತಾಯದ ಮೇರೆಗೆ ಸಿಬಿಐ ತನಿಖೆ ವಹಿಸಿತ್ತು. ಅಲ್ಲಿಂದ ತನಿಖೆ ನಡೆದು, ಸುಮಾರು ಎಂಟು ವರ್ಷಗಳ ಸುದೀರ್ಘ ಕೋರ್ಟ್ ವಿಚಾರಣೆ ಇತ್ತೀಚೆಗೆ ಪೂರ್ಣಗೊಂಡಿತು. ನಂತರ ಬೆಂಗಳೂರು ಜನಪ್ರತಿನಿಧಿಗಳ ನ್ಯಾಯಾಲಯವು ವಿನಯ್ ಸೇರಿ 17 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತು.













Click it and Unblock the Notifications