ಅಪಘಾತ ನಡೆಯದಂತೆ ತಿಟ್ಟಮಾರನಹಳ್ಳಿ ಗ್ರಾಮಸ್ಥರಿಂದ ರಸ್ತೆಗೆ ಕುರಿ ಬಲಿ
ರಾಮನಗರ, ಅಕ್ಟೋಬರ್ 14: ಗ್ರಾಮದಲ್ಲಿ ಸಾಮೂಹಿಕವಾಗಿ ಜನರು ಕಾಯಿಲೆ ಬಿದ್ದರೆ ಪ್ರಾಣಿ ಬಲಿ ನೀಡಿ, ಪ್ರಾರ್ಥನೆ ಸಲ್ಲಿಸುವ ಸಂಪ್ರದಾಯ ಹಲವಾರು ಕಡೆ ಇನ್ನೂ ನಡೆದುಕೊಂಡು ಬಂದಿದೆ. ಆದರೆ ಅಪಘಾತ ನಡೆಯದಿರಲಿ ಎಂದು ರಸ್ತೆಗೆ ಕುರಿ ಬಲಿ ನೀಡಿದ ಘಟನೆ ಎಲ್ಲಾದರೂ ಕೇಳಿದ್ದೀರಾ?
ಹೌದು, ಅಂಥದ್ದೊಂದು ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ತಿಟ್ಟಮಾರನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರಾಮಮ್ಮನ ಕೆರೆಯ ಏರಿ ರಸ್ತೆ ಬಹಳ ಕಡಿದಾಗಿದೆ. ಅಲ್ಲದೇ ತಿರುವುಗಳಿಂದ ಕೂಡಿದೆ. ಒಮ್ಮೆಲೆ ಬಸ್, ಕಾರು ಬಂದರೆ, ಇಲ್ಲವೇ ಸ್ಕೂಟರ್ ಬಂದಾಗ ಸ್ವಲ್ಪ ಯಾಮಾರಿದರೂ ವಾಹನ ಸವಾರರು ಕೈಲಾಸ ಸೇರುತ್ತಿದ್ದರು.

ರಸ್ತೆ ಸರಿಪಡಿಸಿ ಎಂದು ಒತ್ತಾಯಿಸಿ ಗ್ರಾಮಸ್ಥರು ಶುಕ್ರವಾರ ರಸ್ತೆತಡೆ ನಡೆಸಿ, ಕೆರೆಯ ಏರಿಯ ಮೇಲಿನ ಇಕ್ಕೆಲಗಳಲ್ಲಿ ತಡೆಗೋಡೆ ನಿರ್ಮಿಸುವಂತೆ ಪ್ರತಿಭಟನೆ ಮಾಡಿದರು. ಅಲ್ಲದೇ ಪದೇ ಪದೇ ಅಪಘಾತ ಸಂಭವಿಸಿ, ಜನರು ಪ್ರಾಣವನ್ನು ಕಳೆದುಕೊಳ್ಳುತ್ತಿರುವುದರಿಂದ ರಸ್ತೆಗೆ ಕುರಿಯನ್ನು ಬಲಿ ನೀಡಿದ್ದಾರೆ.

ರಾಮಮ್ಮನ ಕೆರೆ ತುಂಬಿ ಕೋಡಿ ಒಡೆದ ಪರಿಣಾಮ ಗ್ರಾಮಸ್ಥರೆಲ್ಲ ಸೇರಿ ಮೆರವಣಿಗೆ ಮೂಲಕ ಬಂದು, ಪೂಜೆ ಮಾಡಿದ್ದಾರೆ. ಜೊತೆಗೆ ಬಾಗಿನ ಅರ್ಪಿಸಿದ್ದಾರೆ. ಹೀಗೆ ಸಮೃದ್ಧವಾದ ಮಳೆ-ಬೆಳೆಯಾಗಲಿ ಎಂದು ಗ್ರಾಮಸ್ಥರು ಪ್ರಾರ್ಥನೆ ಸಲ್ಲಿಸಿದ್ದಾರೆ.











Click it and Unblock the Notifications