ಸಂತಾನಹರಣ ಚಿಕಿತ್ಸೆ ಮಾಡಿಸಿರುವುದಾಗಿ ಆರೋಪಿಸಿ ಹಲ್ಲೆ
ಚಿಕ್ಕಬಳ್ಳಾಪುರ, ಡಿಸೆಂಬರ್ 04 : ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಚಿಕಿತ್ಸೆಗೆಂದು ಕರೆದುಕೊಂಡು ಹೋಗಿದ್ದಕ್ಕೆ, ಸಂತಾನ ಹರಣ ಚಿಕಿತ್ಸೆ ಮಾಡಿದ್ದೀಯೇಂದು ಆರೋಪಿಸಿ ಆಶಾ ಕಾರ್ಯಕರ್ತೆಯನ್ನು ಥಳಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಮಾರಪ್ಪನಹಳ್ಳಿಯಲ್ಲಿ ನಡೆದಿದೆ.
ಮಾರಪ್ಪನಹಳ್ಳಿಯ ನರಸಿಂಹಮೂರ್ತಿ ಅವರಿಗೆ ಜ್ವರವಿದ್ದ ಕಾರಣ ಆಶಾ ಕಾರ್ಯಕರ್ತೆ ಪದ್ಮಮ್ಮ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ಒದಗಿಸಿದ್ದರು. ಆದರೆ ಅವರ ಕುಟುಂಬದವರು ನರಸಿಂಹಮೂರ್ತಿ ಅವರಿಗೆ ಸಂತಾನಹರಣ ಚಿಕಿತ್ಸೆ ಮಾಡಿಸಿದ್ದೀಯಾ ಎಂದು ಸುಳ್ಳು ಆರೋಪ ಹೊರಿಸಿ ಮಹಿಳೆ ಪದ್ಮಮ್ಮನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಮಾರಪ್ಪನಹಳ್ಳಿ ನಿವಾಸಿ ನರಸಿಂಹಮೂರ್ತಿ ಅವರ ಪತ್ನಿ ಛಾಯಾ ಅವರು 2014ರಲ್ಲಿಯೇ ಸ್ವಯಂ ಪ್ರೇರಿತರಾಗಿ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಸರ್ಕಾರದಿಂದ ನೀಡುವಂತಹ 1100 ರೂಪಾಯಿಗಳ ಅನುದಾನ ಪಡೆದುಕೊಂಡಿದ್ದಾರೆ. ನರಸಿಂಹಮೂರ್ತಿ ಅವರು ಕೂಡ ಕೆಲವು ತಿಂಗಳುಗಳ ಮುಂಚೆ ಸ್ವಯಂ ಪ್ರೇರಿತವಾಗಿ ಸಂತಾನಹರಣ ಚಿಕಿತ್ಸೆಗೆ ಒಳಗಾಗಿದ್ದರು. ಆದರೂ ಕೂಡ ದುರುದ್ದೇಶಪೂರಿತವಾಗಿ ಈಗ ಪದ್ಮಮ್ಮ ಅವರ ಮೇಲೆ ಹಲ್ಲೆ ನಡೆಸಿ ವಿಕೃತಿ ಮೆರಿದ್ದಾರೆ.
ಆಶಾ ಕಾರ್ಯಕರ್ತೆ ಪದ್ಮಮ್ಮ ಅವರ ಮೇಲೆ ನಡೆದಿರುವ ಹಲ್ಲೆ ಖಂಡಿಸಿ ನೂರಾರು ಮಂದಿ ಆಶಾ ಕಾರ್ಯಕರ್ತೆಯರು, ಸಿ.ಐ.ಟಿ.ಯು.ನೇತೃತ್ವದಲ್ಲಿ ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ ನಡೆಸಿರುವವರನ್ನು ಬಂಧಿಸಿ ಕಾನೂನು ಪ್ರಕಾರ ತನಿಖೆಗೆ ಒಳಪಡಿಸಬೇಕು. ಸಂತಾನ ಹರಣ ಶಸ್ತ್ರಚಿಕಿತ್ಸೆ ನಡೆದಿರುವ ಬಗ್ಗೆ ತನಿಖೆಯಾಗಲಿ, ಒಂದು ವೇಳೆ ಆಶಾ ಕಾರ್ತಯಕರ್ತೆ ಪದ್ಮಮ್ಮ ಅವರು, ನರಸಿಂಹಮೂರ್ತಿ ಅವರನ್ನು ಬಲವಂತವಾಗಿ ಕರೆದುಕೊಂಡು ಬಂದು ಮಾಡಿಸಿದ್ದರೆ, ಅವರ ಮೇಲೆ ಇಲಾಖೆಯವರು ಕ್ರಮ ಜರುಗಿಸಲಿ ಅದನ್ನು ಬಿಟ್ಟು ಮಹಿಳೆಯೆಂಬುದನ್ನು ಗಮನಿಸಿದೆ ಏಕಾಏಕಿ ಹಲ್ಲೆ ನಡೆಸಿರುವ ಕ್ರಮವನ್ನು ನಾವು ಖಂಡಿಸುತ್ತೇವೆ ಎಂದು ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಂಚಾಲಕಿ ಲಕ್ಷ್ಮೀದೇವಮ್ಮ ಹೇಳಿದರು.
ಸಿ.ಐ.ಟಿ.ಯು.ಜಿಲ್ಲಾ ಮುಖಂಡ ಫಯಾಜ್ ಮಾತನಾಡಿ, ಕಾನೂನುನನ್ನು ಕೈಗೆತ್ತಿಕೊಳ್ಳುವವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು. ಆಶಾ ಕಾರ್ಯಕರ್ತೆಯರು ಮುಕ್ತವಾಗಿ, ನಿರ್ಭಿತಿಯಿಂದ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು, ಒಂದು ವೇಳೆ ಪೊಲೀಸ್ ಇಲಾಖೆ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಲು ವಿಫಲವಾದರೆ ರಾಜ್ಯಾಧ್ಯಂತ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದರು.
ನೂರಾರು ಮಂದಿ ಆಶಾ ಕಾರ್ಯಕರ್ತೆಯರು ಪ್ರವಾಸಿಮಂದಿರದಿಂದ ಹೊರಟು ಕೋಟೆ ಸರ್ಕಲ್ ವರೆಗೂ ಮೆರವಣಿಗೆ ನಡೆಸಿ, ಪ್ರತಿಭಟನೆ ನಡೆಸಿದರು. ನಂತರ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್ ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.