ಬಾಗಲಕೋಟೆ : ನಕಲಿ ವೋಟರ್ ಐಡಿ ಕೆಸರೆರಚಾಟ!
ಬಾಗಲಕೋಟೆ, ಜನವರಿ 25 : ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲಾ ಪಕ್ಷಗಳು ಎದುರಾಳಿಯನ್ನು ಮಣಿಸೋಕೆ ತಂತ್ರ ರೂಪಿಸುವುದು ಸಾಮಾನ್ಯ. ಬಾಗಲಕೋಟೆ ಜಿಲ್ಲೆಯ ಹುನಗುಂದ ಕ್ಷೇತ್ರದ ಹಾಲಿ ಹಾಗೂ ಮಾಜಿ ಶಾಸಕರು ತಂತ್ರ, ಪ್ರತಿತಂತ್ರ ರೂಪಿಸುತ್ತಿದ್ದಾರೆ. ಒಂದೇ ವಿಷಯದ ಮೇಲೆ ಇಬ್ಬರು ನಾಯಕರು ಕತ್ತಿ ಮಸೆಯುತ್ತಿದ್ದಾರೆ.
ಶಾಸಕ ವಿಜಯಾನಂದ ಕಾಶಪ್ಪನವರ್ ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಮುಂದಿನ ಬಾರಿ ನಾನೇ ಹುನಗುಂದದ ಶಾಸಕ ಎಂದು ಈಗಾಗಲೇ ತಾವು ಮಾಡಿದ ಕಾರ್ಯಗಳನ್ನು ಜನರ ಮುಂದಿಡುವ ಪ್ರಯತ್ನ ಮಾಡುತ್ತಿದ್ದಾರೆ.
ಬಿಜೆಪಿಯ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಸಹ ಇದಕ್ಕೆ ಪ್ರತಿತಂತ್ರ ರೂಪಿಸಿದ್ದಾರೆ. ಬಹಳ ದಿನಗಳಿಂದ ಇಬ್ಬರು ನಾಯಕರ ನಡುವೆ ಜಟಾಪಟಿ ನಡೆಯುತ್ತಿದೆ. ಈಗ ಮತ್ತೆ ಒಬ್ಬರ ಮೇಲೊಬ್ಬರು ಒಂದೇ ವಿಷಯಕ್ಕೆ ಗೂಬೆ ಕೂರಿಸಿಕೊಂಡಿದ್ದಾರೆ.

ಶಾಸಕ ವಿಜಯಾನಂದ ಕಾಶಪ್ಪನವರ ತಮ್ಮ ಹುಟ್ಟೂರು ಹುನಗುಂದ ತಾಲೂಕಿನ ಹಾವರಗಿ ಗ್ರಾಮದ ಮತದಾರು ಪಟ್ಟಿಯಲ್ಲಿ, ಇಳಕಲ್ ನಗರದ ವಾರ್ಡ್ ನಂಬರ್ 1ರ ಮತದಾರರಪಟ್ಟಿಯಲ್ಲಿ ಹೆಸರನ್ನು ಹೊಂದಿದ್ದಾರೆ ಎಂದು ದೊಡ್ಡನಗೌಡ ಪಾಟೀಲ್ ಆರೋಪಿಸಿದ್ದಾರೆ.
ಇಳಕಲ್ ನಗರದ ಬೂತ್ ನಂಬರ್ 151ರಲ್ಲಿ ಬೇರೆ-ಬೇರೆ ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಗ್ರಾಮದಲ್ಲಿರುವ 29 ಜನರನ್ನು ಸೇರಿಸಲಾಗಿದೆ. ಅಲ್ಲದೇ ಅದೇ ಬೂತ್ ನಲ್ಲಿ 16 ಜನ ಸತ್ತವರ ಹೆಸರನ್ನು ಸೇರ್ಪಡೆ ಮಾಡಿದ್ದಾರೆ ಎಂದು ದಾಖಲೆ ನೀಡಿದ್ದಾರೆ.
ಕ್ಷೇತ್ರದಾದ್ಯಂತ ಕಾಶಪ್ಪನವರ್ ತಮ್ಮ ಪ್ರಭಾವ ಬಳಸಿ ಹುನಗುಂದ ಕ್ಷೇತ್ರದಲ್ಲಿ 10 ಸಾವಿರಕ್ಕೂ ಅಧಿಕ ನಕಲಿ ಮತದಾರರನ್ನು ಸೃಷ್ಟಿ ಮಾಡಿದ್ದಾರಲ್ಲದೇ, ಇದಕ್ಕೆ ಹುನಗುಂದ ತಹಶೀಲ್ದಾರ್, ಇಳಕಲ್ ನಗರಸಭೆ ಆಯುಕ್ತರು ಸಹಕಾರ ನೀಡಿದ್ದಾರೆ ಎಂದು ದೂರಿದ್ದಾರೆ.

ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಚುನಾವಣಾ ಆಯೋಗ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಅತ್ತ ಕಾಶಪ್ಪನವರ್ ದೊಡ್ಡನಗೌಡ ಪಾಟೀಲ್ ವಿರುದ್ಧ ಹಲವು ಆರೋಪ ಮಾಡಿದ್ದಾರೆ.
ಪತ್ರಿಕಾಗೋಷ್ಠಿ ನಡೆಸಿ ದಾಖಲೆ ಸಮೇತ ವಿವರಣೆ ನೀಡಿದ್ದಾರೆ. 'ನಮ್ಮ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರು ತಮ್ಮ ವಾರ್ಡ್ನ ಅರ್ಹ ಜನರನ್ನು ಮತದಾರ ಪಟ್ಟಟಿಯಲ್ಲಿ ಕಾನೂನಾತ್ಮಕವಾಗಿ ಸೇರಿಸಿದ್ದಾರೆ' ಎಂದು ಹೇಳಿದ್ದಾರೆ.
ದೊಡ್ಡನಗೌಡ ಪಾಟೀಲ್ ಮೂಲತ ಲಿಂಗಸಗೂರು ತಾಲೂಕಿನ ಲೆಕ್ಕಿಹಾಳ ಗ್ರಾಮದವರು. ಮತದಾರರ ಪಟ್ಟಿಯಲ್ಲಿ ಅವರ ಹೆಸರು ಲೆಕ್ಕಿಹಾಳ ಮತ್ತು ಇಳಕಲ್ ನಗರದಲ್ಲೂ ಇದೆ. ಅಲ್ಲದೇ ಅವರ ಪುತ್ರ ರಾಜು ಪಾಟೀಲ್ ಅಕ್ರಮವಾಗಿ ಒಂದೇ ಕ್ಷೇತ್ರದ ಏಳು ಕಡೆ ಬೇರೆ, ಬೇರೆ ಹೆಸರಲ್ಲಿ ಮತದಾರ ಪಟ್ಟಿಯಲ್ಲಿ ಹೆಸರು ಸೇರಿಸಿದ್ದಾರೆ.
ಲೆಕ್ಕಿಹಾಳ ಗ್ರಾಮದ ಜನರನ್ನು ತಾಲೂಕಿಗೆ ಕರೆತಂದು ನಕಲಿ ವೋಟರ್ ಐಡಿ ತಯಾರಿಸಿ ಚುನಾವಣಾ ಆಯೋಗದ ಕಣ್ಣಿಗೆ ಮಣ್ಣೆರೆಚಿದ್ದಾರೆ ಎಂದು ಆರೋಪ ಮಾಡಿದ್ದು, ಚುನಾವಣಾ ಆಯೋಗಕ್ಕೆ ದೂರು ಕೊಡಲು ನಿರ್ಧರಿಸಿದ್ದಾರೆ.











Click it and Unblock the Notifications