ಒಣಗಿದ್ದ ವಿಜಯಪುರ ಕೆರೆಗಳಿಗೀಗ ಜೀವ ಬಂದಿದ್ದು ಹೇಗೆ?
ವಿಜಯಪುರ, ಆಗಸ್ಟ್ 2: ಒಂದಾನೊಂದು ಕಾಲದಲ್ಲಿ ಸಮೃದ್ಧಿಯ ನೆಲೆವೀಡಾಗದ್ದ ವಿಜಯಪುರ ಇಂದು ಬರಗಾಲದಿಂದ ಕಂಗೆಟ್ಟಿದೆ. ಇತ್ತೀಚಿನ ಹಲವು ವರ್ಷಗಳಿಂದ ಈ ಭಾಗದಲ್ಲಿ ಸರಿಯಾಗಿ ಮಳೆಯೇ ಆಗದೆ ಇಲ್ಲಿನ ಜನರಿಗೆ ಕುಡಿವ ನೀರಿಗೂ ತತ್ವಾರ ಎಂಬಂಥ ಪರಿಸ್ಥಿತಿ ಉದ್ಭವವಾಗಿತ್ತು. ಆದರೆ ಇದೀಗ ಮತ್ತೆ ವಿಜಯಪುರ ಹಳೆಯ ವೈಭವಕ್ಕೆ ನಿಧಾನವಾಗಿ ಮರಳುವಂಥ ಸನ್ನಿವೇಷ ಸೃಷ್ಟಿಯಾಗುತ್ತಿದೆ ಎಂಬುದು ಸಂತಸದ ವಿಷಯ.
ಬೆಳಗಾವಿ: 22 ಗ್ರಾಮಗಳಿಗೆ ನೀರುಣಿಸುವ ಬಸವೇಶ್ವರ ಏತ ನೀರಾವರಿಗೆ ಚಾಲನೆ
ಆದಿಲ್ ಶಾಹಿಗಳ ಕಾಲದಲ್ಲಿ ಇಲ್ಲಿನ ಜನರ ನೀರಿನ ಅಗತ್ಯ ತೀರಿಸುವುದಕ್ಕಾಗಿ ನಿರ್ಮಿಸಲಾಗಿದ್ದ ಬಹುಪಾಲು ಕೊಳಗಳು ಇತ್ತೀಚಿನ ದಶಕಗಳಲ್ಲಿ ಒಣಗಿದ್ದವು. ಹನಿ ನೀರೂ ಇಲ್ಲದೆ, ಐತಿಹಾಸಿಕ ಮಹತ್ವ ಪಡೆದಿದ್ದ ಈ ಎಲ್ಲ ಕೊಳಗಳೂ ಒಣಗಿ ಸೋತಿದ್ದವು. ಆದರೆ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ರಾಜ್ಯ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರು 2006-07 ರಲ್ಲೇ ಹಾಕಿದ್ದ ಯೋಜನೆ ಇದೀಗ ಕಾರ್ಯರೂಪಕ್ಕೆ ಬಂದಿದ್ದು, ಕೃಷ್ಣಾ ನದಿಯಿಂದ ನೀರು ಹರಿಸಿ ಇಲ್ಲಿನ ಕೊಳಗಳನ್ನು ತುಂಬಿಸಲಾಗುತ್ತಿದೆ. ನೀರಿಲ್ಲದೆ ಪರಿತಪಿಸಿದ್ದ ಜನರೀಗ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಐತಿಹಾಸಿಕ ಮಹತ್ವವನ್ನು ಪಡೆದ ಮಮದಪುರ, ಬೆಗಂ ತಲಾಬ್, ಬಾಬಲೇಶ್ವರ, ಸರವಾಡ, ತಿಡಗುಂದಿ ಮತ್ತು ಭೂತನಾಲ್ ಮುಂತಾದ ಕೊಳಗಳ ಹೂಳೆತ್ತಿ, ಶುದ್ಧೀಕರಿಸಿ ಅವುಗಳಿಗೆ ನೀರು ತುಂಬಿಸಲಾಗಿದ್ದು ವಿಜಯಪುರಕ್ಕೀಗ ಕಳೆಬಂದಿದೆ. 2016 ರ, ಡಿಸೆಂಬರ್ ನಲ್ಲಿ ಈ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಮಯ್ಯ ಅವರೇ ಲೋಕಾರ್ಪಣೆ ಮಾಡಿದ್ದರು.
ಮಳೆಗಾಗಿ ತಲಕಾವೇರಿಯಲ್ಲಿ ಸಚಿವ ಎಂ ಬಿ ಪಾಟೀಲ್ ವಿಶೇಷ ಪೂಜೆ
ಈಗಾಗಲೇ ಇಲ್ಲಿನ 60 ಕೊಳಗಳಿಗೆ ಪೈಪ್ ಲೈನ್ ಮೂಲಕ ಕೃಷ್ಣಾ ನದಿಯ ನೀರನ್ನು ನಿಯಮಿತವಾಗಿ ಹರಿಸಲಾಗುತ್ತಿದ್ದು, ಇದರೊಂದಿಗೆ ಇನ್ನೂ 33 ಹೊಸ ಕೊಳಗಳಿಗೆ ನೀರು ಹರಿಸುವ ಕಾಮಗಾರಿ ವಿವಿಧ ಹಂತದಲ್ಲಿದೆ. ಇನ್ನೂ 2,014 ಕೊಳಗಳನ್ನು ತುಂಬಿಸಲು ಯೋಜನೆಯೂ ರೂಪುಗೊಂಡಿದ್ದು, ಮುಂದಿನ ಹಂತವಾಗಿ ಇವುಗಳನ್ನು ತುಂಬಿಸಲಾಗುವುದು ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ರಾಜ್ಯದ ಇತರ ಜಿಲ್ಲೆಗಳಾದ ಬಳ್ಳಾರಿ, ಮೈಸೂರು, ಚಾಮರಾಜನಗರ, ತುಮಕೂರು, ಹಾಸನ, ರಾಮನಗರ, ಮಂಡ್ಯ ಜಿಲ್ಲೆಗಳಲ್ಲಿ 1300 ಕೊಳಗಳನ್ನು ತುಂಬಿಸುವ ಬಗ್ಗೆಯು ರಾಜ್ಯ ಸರ್ಕಾರ ಯೋಜನೆ ಸಿದ್ಧಪಡಿಸಲು ಚಿಂತನೆ ನಡೆಸಿದೆ.
'ಯಶೋಮಾರ್ಗ' ಎಂಬ ಎನ್ ಜಿಒ ಮೂಲಕ ನಟ ಯಶ್, ಉತ್ತರ ಕರ್ನಾಟಕದ ಹಲವು ಭಾಗಗಳಿಗೆ ಅಂದರೆ ಕಲಬುರಗಿ, ರಾಯಚೂರು ಜಿಲ್ಲೆಗಳ 50 ಗ್ರಾಮಗಳಿಗೆ ಮತ್ತು ಗದಗ, ಯಾದಗಿರಿ, ಕೊಪ್ಪಳ ಹಾಗೂ ಬಾಗಲಕೋಟೆ ಜಿಲ್ಲೆಯ 15 ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸದ್ದನ್ನು ಇಲ್ಲಿ ಉಲ್ಲೇಖಿಸಬಹುದು.