Bengaluru-Tirupati Vande Bharat Train: ಬೆಂಗಳೂರು-ತಿರುಪತಿ ವಂದೇ ಭಾರತ್ ರೈಲು; ಎಲ್ಲೆಲ್ಲಿ ನಿಲುಗಡೆ
ಆಂಧ್ರಪ್ರದೇಶದ ಪ್ರಸಿದ್ಧ ಧಾರ್ಮಿಕ ಸ್ಥಳ ತಿರುಪತಿ ದೇವಸ್ಥಾನಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ತೆರಳುತ್ತಾರೆ. ಬೆಂಗಳೂರಿನಿಂದ ಕೆಲವೇ ಗಂಟೆಗಳಲ್ಲಿ ಪ್ರಯಾಣಿಸಬಹುದಾದ ಕಾರಣ ಕರ್ನಾಟಕದ ಭಕ್ತಾದಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲೇ ದೇವರ ದರ್ಶನಕ್ಕೆ ಹೋಗುತ್ತಿರುತ್ತಾರೆ. ಸದ್ಯ ಅಲ್ಲಿಗೆ ಬಸ್, ವಿಮಾನ, ರೈಲು ಸೇವೆ ಇದೆ. ಇದರೊಂದಿಗೆ ಶರವೇಗದಲ್ಲಿ ಚಲಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳ ಸೇವೆ ಕೂಡ ಇನ್ನು ಮುಂದೆ ಸಿಗಲಿದೆ. ನಿಶ್ಚಿಂತೆಯಾಗಿ ಬೆಂಗಳೂರಿನಿಂದ ತಿರುಪತಿಗೆ ಈ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸಬಹುದು. ಬಳಿಕ ಅಲ್ಲಿಂದ ಬೆಂಗಳೂರಿಗೆ ವಾಪಸ್ ಬರುವಾಗಲೂ ಇದೇ ರೈಲು ಹತ್ತಬಹುದಾಗಿದೆ. ಈ ಮೂಲಕ ಭಾರತೀಯ ರೈಲ್ವೆ ಯಾತ್ರಾರ್ಥಿಗಳಿಗೆ ಸಿಹಿಸುದ್ದಿ ನೀಡಿದೆ.
ವಿಜಯವಾಡ-ಬೆಂಗಳೂರು ನಡುವೆ ಸಂಚರಿಸಲಿರುವ ಹೊಸ ವಂದೇ ಭಾರತ್ ರೈಲು ತಿರುಪತಿ ಮಾರ್ಗವಾಗಿಯೇ ಸೇವೆ ನೀಡಲಿದೆ. ಇದು ತಿರುಪತಿಗೆ ತೆರಳುವವರಿಗೆ ಭಾರಿ ಅನುಕೂಲ ಮಾಡಿಕೊಡಲಿದೆ. ಸದ್ಯ ಸಾಮಾನ್ಯ ರೈಲುಗಳು ಬೆಂಗಳೂರಿನಿಂದ ತಿರುಪತಿಗೆ ಸೇವೆ ನೀಡುತ್ತಿದ್ದರೂ, ಸುತ್ತಿ ಬಳಸಿದ ಮಾರ್ಗಗಳ ಜೊತೆಗೆ ಹೆಚ್ಚು ಸಮಯ ಹಿಡಿಯುತ್ತಿದ್ದವು. ಈಗ ವಂದೇ ಭಾರತ್ ರೈಲು ಕೆಲವೇ ಗಂಟೆಯಲ್ಲಿ ತಿರುಪತಿ ತಲುಪಲಿದೆ. ಈ ವಂದೇ ಭಾರತ್ ಈ ಮಾರ್ಗದಲ್ಲಿ ಎಲ್ಲೆಲ್ಲಿ ನಿಲುಗಡೆ ನೀಡಲಿದೆ ಎಂಬ ಮಾಹಿತಿ ಇಲ್ಲಿದೆ.

ಭಾರತೀಯ ರೈಲ್ವೆ ಶೀಘ್ರದಲ್ಲೇ ವಿಜಯವಾಡ ಮತ್ತು ಬೆಂಗಳೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೇವೆಯನ್ನು ಆರಂಭಿಸಲು ಸಿದ್ಧತೆ ನಡೆಸುತ್ತಿದೆ. ಈ ಹೊಸ ಸೇವೆ ಪ್ರಯಾಣಿಕರಿಗೆ ವೇಗವಾದ ಹಾಗೂ ಆರಾಮದಾಯಕ ಪ್ರಯಾಣ ಅನುಭವವನ್ನು ನೀಡಲಿದೆ. ಇತ್ತೀಚಿನ ವಂದೇ ಭಾರತ್ ಎಕ್ಸ್ಪ್ರೆಸ್ ಸೇವೆ ಇತರ ರೈಲುಗಳಿಗೆ ಹೋಲಿಸಿದರೆ ಸುಮಾರು 3 ಗಂಟೆಯಷ್ಟು ಸಮಯ ಉಳಿಸುತ್ತದೆ. ಉದ್ಯೋಗಿಗಳು, ವಿದ್ಯಾರ್ಥಿಗಳು, ತಿರುಪತಿ ದೇವಾಲಯಕ್ಕೆ ಹೋಗುವ ಭಕ್ತರು ಮತ್ತು ವ್ಯಾಪಾರಿಗಳಿಗೆ ಈ ಸೇವೆ ಉಪಯುಕ್ತವಾಗಲಿದೆ.
ನಿಲುಗಡೆ ಎಲ್ಲೆಲ್ಲಿ?
ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್ಎಂವಿಟಿ) ರೈಲು ನಿಲ್ದಾಣನಿಂದ ಹೊರಟು-ಕೃಷ್ಣರಾಜಪುರಂ-ಕಾಟ್ಪಾಡಿ-ಚಿತ್ತೂರು-ತಿರುಪತಿ-ನೆಲ್ಲೂರು-ಒಂಗೋಲು-ತೆನಾಲಿ-ವಿಜಯವಾಡ ತಲುಪಲಿದೆ. ಈ ಸ್ಥಳಗಳಲ್ಲಿ ವಂದೇಭಾರತ್ ನಿಲುಗಡೆ ನೀಡಲಿದೆ. ಬೆಂಗಳೂರಿನಿಂದ ವಿಜಯವಾಡಕ್ಕೆ ಸುಮಾರು 713 ಕಿಮೀ ದೂರದ ಈ ಪ್ರಯಾಣದ ಅವಧಿ 9 ಗಂಟೆ ಎನ್ನಲಾಗಿದೆ. ವಿಜಯವಾಡದಿಂದ ಬೆಳಿಗ್ಗೆ 5:15ಕ್ಕೆ ಹೊರಟು ಮಧ್ಯಾಹ್ನ 2:15ರ ವೇಳೆಗೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ ಮಧ್ಯಾಹ್ನ 2.45ಕ್ಕೆ ಹೊರಟು 2.58ಕ್ಕೆ ಕೃಷ್ಣರಾಜಪುರಂ, ಸಂಜೆ 5.23ಕ್ಕೆ ಕಟ್ಪಾಡಿ, ಸಂಜೆ 5.49ಕ್ಕೆ ಚಿತ್ತೂರು, ಸಂಜೆ 6.55ಕ್ಕೆ ತಿರುಪತಿ ತಲುಪಲಿದೆ. ರಾತ್ರಿ 8.18ಕ್ಕೆ ನೆಲ್ಲೂರು, ರಾತ್ರಿ 9.29ಕ್ಕೆ ಒಂಗೋಲ್, ರಾತ್ರಿ 10.42ಕ್ಕೆ ತೆನಾಲಿ, ರಾತ್ರಿ 11.45ಕ್ಕೆ ವಿಜಯವಾಡ ಸೇರಲಿದೆ. ವಾರದಲ್ಲಿ 6 ದಿನವೂ ಈ ರೈಲುಗಳು ಸಂಚರಿಸಲಿವೆ.
7 AC ಚೇರ್ ಕಾರ್, 1 ಎಕ್ಸಿಕ್ಯೂಟಿವ್ ಚೇರ್ ಕಾರ್ ಸೇರಿ ಒಟ್ಟು 8 ಕೋಚ್ಗಳು ಇರಲಿವೆ. ಈ ಮಾರ್ಗದಲ್ಲಿ ಈಗಾಗಲೇ ಕೊಂಡವೀಡು ಎಕ್ಸ್ಪ್ರೆಸ್ನಂತಹ ಕೆಲವೇ ನೇರ ರೈಲುಗಳು ಸೀಮಿತ ದಿನಗಳಲ್ಲಿ ಮಾತ್ರ ಸಂಚರಿಸುತ್ತಿವೆ. ವಂದೇ ಭಾರತ್ ಆರಂಭವಾದರೆ, ಪ್ರಯಾಣಿಕರಿಗೆ ವೇಗ ಮತ್ತು ಆರಾಮ ಎರಡನ್ನೂ ಒದಗಿಸುವ ಪ್ರಮುಖ ಆಯ್ಕೆಯಾಗಲಿದೆ. ವಂದೇ ಭಾರತ್ ಎಕ್ಸ್ಪ್ರೆಸ್ ಸೇವೆ ಅಧಿಕೃತವಾಗಿ ಆರಂಭವಾದ ನಂತರ, ಸಮಯ ಮತ್ತು ದರಗಳಲ್ಲಿ ಸಣ್ಣ ಬದಲಾವಣೆಗಳಾಗುವ ಸಾಧ್ಯತೆ ಇದೆ ಎನ್ನಲಾಗಿದೆ.












Click it and Unblock the Notifications