ವೈಕುಂಠದ ಬಾಗಿಲು ತೆರೆದಿದೆ, ಶ್ರೀನಿವಾಸನ ದರ್ಶನ ಪಡೆಯಿರಿ
ಬೆಂಗಳೂರು, ಡಿಸೆಂಬರ್, 21: ಕರ್ನಾಟಕದಲ್ಲಿ ವೈಕುಂಠ ಏಕಾದಶಿ ಸಂಭ್ರಮ. ಮುಂಜಾನೆಯಿಂದಲೇ ದೇವಾಲಯಗಳಲ್ಲಿ ಸರತಿ ಸಾಲು. ವೆಂಕಟೇಶ್ವರನ ದರ್ಶನ ಪಡೆದ ಭಕ್ತರು ಪುನೀತರಾಗಿ ಹೊರಕ್ಕೆ ಬರುತ್ತಿದ್ದಾರೆ.
ತಿರುಪತಿ ತಿರುಮಲದಲ್ಲೂ ಭಕ್ತರು ತುಂಬಿದ್ದು, ಕಲ್ಯಾಣೋತ್ಸವ ಮತ್ತು ರಥೋತ್ಸವ ಜರುಗಲಿದೆ. ಇಸ್ಕಾನ್ ನಲ್ಲಿ ಲಕ್ಷ ಪುಷ್ಪಾರ್ಚನೆ ನಡೆಯುತ್ತಿದೆ.
ಧನುರ್ಮಾಸದ ಶುಕ್ಲ ಪಕ್ಷ ಏಕಾದಶಿಯಂದು ಶ್ರೀ ವಿಷ್ಣುವಿನ ವಾಸಸ್ಥಾನ ವೈಕುಂಠ ದ್ವಾರ ತೆರೆಯುವ ದಿನ ಎಂಬ ನಂಬಿಕೆಯೇ ಹಬ್ಬದ ಆಚರಣೆ ಹಿನ್ನೆಲೆ. ಬೆಂಗಳೂರಿನ ಕೆಂಗೇರಿ, ಬನಶಂಕರಿ, ಬಸವನಗುಡಿ, ಹನುಮಂತ ನಗರ, ವಿದ್ಯಾಪೀಠ, ಗಿರಿನಗರ ಸೇರಿದಂತೆ ಎಲ್ಲ ಕಡೆಯ ದೇವಾಲಯಗಳಲ್ಲಿಯೂ ಮುಂಜಾನೆಯಿಂದಲೇ ಭಕ್ತರ ಸಾಲು ಕಂಡು ಬಂತು. ಇಸ್ಕಾನ್ ನಲ್ಲಿ ಶ್ರೀ ಕೃಷ್ಣನ ದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ.[ವೈಕುಂಠ ಏಕಾದಶಿ ವಿಶೇಷತೆಯೇನು?]
ವೈಕುಂಠ ಏಕಾದಶಿ ದಿನ ಉಪವಾಸವಿದ್ದು ದೇವಾಲಯಗಳ ದರ್ಶನ ಪಡೆದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ತಿರುಪತಿ ತಿರುಮಲದಲ್ಲೂ ವಿಶೇಷ ಪೂಜೆಗಳು ನಡೆಯುತ್ತವೆ. ನೀವು ಮುಂಜಾನೆಯೇ ದೇವರ ದರ್ಶನ ಮಾಡಿ ಬಂದಿದ್ದೀರಿ ತಾನೆ. ಇಲ್ಲವಾದರೆ ಹೋಗಿ ಬನ್ನಿ

ವೈಕುಂಠ ಏಕಾದಶಿ ಸಂಭ್ರಮ
ಕೆಂಗೇರಿ ಉಪನಗರದ ಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ಮುಂಜಾನೆಯೇ ವಿಶೇಷ ಪೂಜೆ ಆರಂಭವಾಗಿತ್ತು. ವೈಕುಂಠ ಏಕಾದಶಿ ಹಿನ್ನಲೆಯಲ್ಲಿ ಲಕ್ಷ್ಮೀ ವೆಂಕಟರಮಣನಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದೆ.

ಭಕ್ತರ ದಂಡು
ಭಕ್ತರ ದಂಡೇ ಗಿರಿನಗರ ದೇವಾಲಯಕ್ಕೆ ಭೇಟಿ ನೀಡಿತ್ತು. ಮಕ್ಕಳು, ಮಹಿಳೆಯರ ಆದಿಯಾಗಿ ಎಲ್ಲರೂ ವೆಂಕಂಟೇಶ್ವರನ ಸನ್ನಿಧಿಗೆ ತೆರಳಿ ಪ್ರಾರ್ಥನೆ ಮಾಡಿದರು.

ಧಾರ್ಮಿಕ ಗ್ರಂಥಗಳು
ವಿವಿಧ ಧಾರ್ಮಿಕ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಭರಾಟೆ ಜೋರಾಗಿದೆ. ಧಾರ್ಮಿಕ ಸ್ತೋತ್ರಗಳ ಪುಸ್ತಕಗಳನ್ನು ಜನರು ಕೊಳ್ಳುತ್ತಿರುವುದು ಕಂಡು ಬಂತು.

ಮಧ್ಯರಾತ್ರಿಯಿಂದಲೇ ಸಿದ್ಧತೆ ಆರಂಭ
ಬೆಂಗಳೂರಿನಲ್ಲಿರುವ ಅನೇಕ ವಿಷ್ಣು ದೇವಾಲಯದಲ್ಲಿ ಶ್ರೀನಿವಾಸನಿಗೆ ವಿಶೇಷ ಪೂಜೆಗಳು ಸಲ್ಲಿಸಲಾಗುತ್ತಿದ್ದು, ವೈಕುಂಠ ವಾಸನ ದರ್ಶನ ಪಡೆಯುವ ಸುಲುವಾಗಿ ಸಾಲು ಸಾಲು ಜನ ಮಧ್ಯರಾತ್ರಿಯಿಂದಲೇ ಕಾಯುತ್ತಿದ್ದರು.

ಪೌರಾಣಿಕ ಹಿನ್ನೆಲೆ ಏನು?
ಏಕಾದಶಿಯಂದು ದರ್ಶನ ಪಡೆದರೆ ಮುಕ್ತಿ ಸಿಗುತ್ತದೆ. ವೈಕುಂಠದ ಬಾಗಿಲು ತೆರೆದಿರುವುದರಿಂದ ಉಪವಾಸ ಆಚರಿಸಿ ವ್ರತ ಕೈಗೊಂಡರೆ ಪುಣ್ಯ ಪ್ರಾಪ್ತಿ ಎಂಬ ನಂಬಿಕೆಯಿದೆ. ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.











Click it and Unblock the Notifications