ಶಾಲಾ ಸಿಬ್ಬಂದಿಗೆ ಕೋವಿಡ್ ಲಸಿಕೆ ನಂತರ ಶಾಲೆ ಓಪನ್: ಸುಧಾಕರ್
ಬೆಂಗಳೂರು, ಜುಲೈ 22: ''ಯಾವುದೋ ಒಂದು ದಿನ ಶಾಲೆಗಳನ್ನು ಆರಂಭಿಸಬೇಕಾಗುತ್ತದೆ. ಇದಕ್ಕೆ ಸಿದ್ಧತೆಯಾಗಿ ಶಾಲೆಗಳ ಎಲ್ಲ ಸಿಬ್ಬಂದಿಗೆ ಆದ್ಯತೆಯಲ್ಲಿ ಕೋವಿಡ್ ಲಸಿಕೆ ನೀಡಲಾಗುತ್ತದೆ,'' ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಶಾಲೆಗಳನ್ನು ಯಾವುದೋ ಒಂದು ದಿನ ಆರಂಭಿಸಲೇಬೇಕು. ಮಕ್ಕಳು ಯಾವಾಗಲೂ ಆನ್ ಲೈನ್ ತರಗತಿಯ ಮುಂದೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಆನ್ ಲೈನ್ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಅಪಾಯವಿದೆ. ಆದ್ದರಿಂದ ಎಲ್ಲವನ್ನೂ ಅಳೆದು ತೂಗಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಪರಿಣಿತರ ಅಭಿಪ್ರಾಯ, ಸಲಹೆ ಪಡೆದು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಶಾಲೆಯ ಸಿಬ್ಬಂದಿ ವರ್ಗವನ್ನು ವಿಶೇಷ ಗುಂಪಾಗಿ ಪರಿಗಣಿಸಿ ಅವರಿಗೆ ಆದ್ಯತೆಯಲ್ಲಿ ಕೋವಿಡ್ ಲಸಿಕೆ ನೀಡುವ ಕಾರ್ಯ ಆರಂಭಿಸಬೇಕೆಂದು ತೀರ್ಮಾನಿಸಲಾಗಿದೆ. ಮಕ್ಕಳ ಪೋಷಕರಿಗೆ, ಕುಟುಂಬದವರಿಗೆ ಲಸಿಕೆ ನೀಡಲಾಗಿದೆ. ಇನ್ನೂ ಕೆಲ ದಿನಗಳು ಕಳೆದರೆ ಲಸಿಕೆ ಪಡೆದವರ ಸಂಖ್ಯೆ 3 ಕೋಟಿಗೆ ತಲುಪಲಿದೆ. ಅನೇಕರಿಗೆ ಪಾಸಿಟಿವ್ ಬಂದು ಹೋಗಿ ಅವರಲ್ಲಿ ಆ್ಯಂಟಿಬಾಡಿ ಉತ್ಪಾದನೆಯಾಗಿರುವುದೂ ಇದೆ.

ವೈದ್ಯಕೀಯ ಶಿಕ್ಷಣ ಕಾಲೇಜುಗಳನ್ನು ನಡೆಸಲು ಅವಕಾಶ ನೀಡಲಾಗಿದೆ. ಉನ್ನತ ಶಿಕ್ಷಣದಲ್ಲಿ ಕಾಲೇಜು ಆರಂಭಿಸಲು ತೀರ್ಮಾನಿಸಲಾಗುತ್ತಿದೆ. ಇದೇ ರೀತಿ ಹಂತಹಂತವಾಗಿ ನೋಡಿಕೊಂಡು ಈ ಬಗ್ಗೆ ತೀರ್ಮಾನಿಸಲಾಗುತ್ತದೆ. ಇಂತಹ ತೀರ್ಮಾನವನ್ನು ಬಹಳ ಎಚ್ಚರದಿಂದ ತೆಗೆದುಕೊಳ್ಳಬೇಕು. ಮುಖ್ಯಮಂತ್ರಿಗಳೊಂದಿಗಿನ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು ಎಂದರು.
Recommended Video
ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ಶಿಕ್ಷಕರು ಮತ್ತು ಭೋದಕ / ಭೋದಕೇತರ ಸಿಬ್ಬಂದಿಗಳಿಗೆ ಕೋವಿಡ್-19 ಲಸಿಕಾಕರಣ ನಡೆಸುವ ಕುರಿತು.@CMofKarnataka @mla_sudhakar @BBMPCOMM @KannadaGrahaka @Star_Of_Mysore @Hubballi_Infra @DharwadVarthe @karnatakavarthe @PIBBengaluru pic.twitter.com/aM99mX1ewE
— K'taka Health Dept (@DHFWKA) July 22, 2021
ಪ್ರತಿ ದಿನ ರಾಜ್ಯದ ಒಟ್ಟು ಪ್ರಕರಣಗಳಲ್ಲಿ ಶೇ.5 ರಷ್ಟನ್ನು ಹೊಸ ವೈರಾಣು ಅಧ್ಯಯನಕ್ಕೆ ಒಳಪಡಿಸಿ ಪರೀಕ್ಷಿಸಲಾಗುತ್ತಿದೆ. ಈ ಮಾಹಿತಿಯನ್ನು ಐಸಿಎಂಆರ್ ಜೊತೆ ಹಂಚಿಕೊಳ್ಳಲಾಗುತ್ತಿದೆ. ವೈಜ್ಞಾನಿಕ ನೆಲೆಗಟ್ಟಿನಲ್ಲಿ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದರು.












Click it and Unblock the Notifications