'ಕಾವೇರಿ' ಖಾಲಿ ಮಾಡಲು ಸಿದ್ದರಾಮಯ್ಯಗೆ 4 ದಿನದ ಗಡುವು
ಬೆಂಗಳೂರು, ಅಕ್ಟೋಬರ್ 20 : ನಾಲ್ಕು ದಿನದಲ್ಲಿ 'ಕಾವೇರಿ' ನಿವಾಸವನ್ನು ಖಾಲಿ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸೂಚನೆ ನೀಡಲಾಗಿದೆ. ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾ ಪಕ್ಕದ ನಿವಾಸ ಮುಖ್ಯಮಂತ್ರಿ ಯಡಿಯೂರಪ್ಪಗೆ ಹಂಚಿಕೆಯಾಗಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ನಾಲ್ಕು ದಿನದಲ್ಲಿ ನಿವಾಸ ಖಾಲಿ ಮಾಡದಿದ್ದರೆ ನೀರು, ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಸಿದ್ದರಾಮಯ್ಯಗೆ ಮೌಖಿಕ ಎಚ್ಚರಿಕೆ ನೀಡಿದೆ. ಇದರಿಂದಾಗಿ ಸಿದ್ದರಾಮಯ್ಯ ಕಾವೇರಿ ತೊರೆಯುವ ಅನಿವಾರ್ಯತೆಯಲ್ಲಿ ಸಿಲುಕಿದ್ದಾರೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ದಿನದಿಂದ ಕಾವೇರಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. 2018ರ ವಿಧಾನಸಭೆ ಚುನಾವಣೆ ಬಳಿಕ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಸಿದ್ದರಾಮಯ್ಯ ಕಾವೇರಿಯಲ್ಲಿಯೇ ಮುಂದುವರೆದಿದ್ದರು.

ಪ್ರತಿಪಕ್ಷ ನಾಯಕರಾದ ಬಳಿಕ 'ಕಾವೇರಿ' ನಿವಾಸದಲ್ಲಿಯೇ ಇರುತ್ತೇನೆ ಎಂದು ಸಿದ್ದರಾಮಯ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಪತ್ರ ಬರೆದಿದ್ದರು. ಆದರೆ, ಸರ್ಕಾರ ಮನವಿ ತಿರಸ್ಕರಿಸಿ ಯಡಿಯೂರಪ್ಪಗೆ ನಿವಾಸ ಹಂಚಿಕೆ ಮಾಡಿತ್ತು.
ಯಡಿಯೂರಪ್ಪ ಡಾಲರ್ಸ್ ಕಾಲೋನಿಯ 'ಧವಳಗಿರಿ' ನಿವಾಸದಲ್ಲಿದ್ದಾರೆ. ಅದು ಅವರ ಸ್ವಂತ ನಿವಾಸವಾಗಿದೆ. ಅಲ್ಲಿಂದ ಗೃಹ ಕಚೇರಿ ಕೃಷ್ಣಾಗೆ ಬರಲು ಸಾಕಷ್ಟು ಸಮಯ ಬೇಕಿದೆ. ಅಲ್ಲದೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಬರುವ ಜನರು ಧವಳಗಿರಿಗೆ ಹೋಗುವುದರಿಂದ ಅಲ್ಲಿ ಜನದಟ್ಟಣೆ ಉಂಟಾಗುತ್ತಿದೆ.
ಆದ್ದರಿಂದ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಗೃಹ ಕಚೇರಿ ಕೃಷ್ಣಾದ ಪಕ್ಕದಲ್ಲಿರುವ ಕಾವೇರಿಯನ್ನು ಮುಖ್ಯಮಂತ್ರಿಗಳಿಗೆ ಹಂಚಿಕೆ ಮಾಡಿದೆ. ಆದಷ್ಟು ಬೇಗ ಖಾಲಿ ಮಾಡುವಂತೆ ಸಿದ್ದರಾಮಯ್ಯಗೆ ಸೂಚನೆ ನೀಡಲಾಗಿದೆ.











Click it and Unblock the Notifications