ವ್ಯಾಸರಾಜರ ಮೂಲ ವೃಂದಾವನ ಪುನರ್ ನಿರ್ಮಾಣ: ಉತ್ತರಾದಿ ಮಠಾಧೀಶರ ಸಂದೇಶ
ಬೆಂಗಳೂರು, ಜುಲೈ 18: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿನ ಆನೆಗುಂದಿಯಲ್ಲಿ ಇರುವ ವ್ಯಾಸರಾಜರ ಮೂಲ ವೃಂದಾವನವನ್ನು ಕೆಲ ದುಷ್ಕರ್ಮಿಗಳು ಬುಧವಾರ ರಾತ್ರಿ ಧ್ವಂಸ ಮಾಡಿದ್ದು, ಈ ಬೆಳವಣಿಗೆ ಹಿಂದೂಗಳಲ್ಲಿ, ಅದರಲ್ಲೂ ಬ್ರಾಹ್ಮಣರ ಉಪ ಪಂಗಡಗಳ ಪೈಕಿ ಒಂದಾದ ಮಾಧ್ವ ಸಮುದಾಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಈ ಘಟನೆಗೆ ಮಾಧ್ವ್ ಸಮುದಾಯದ ವಿವಿಧ ಮಠಾಧೀಶರು ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದು, ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು. ಅವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಆಗ್ರಹಪಡಿಸಿದ್ದಾರೆ. ಈ ಮಧ್ಯೆ ಉತ್ತರಾದಿ ಮಠದ ಪೀಠಾದೀಶರಾದ ಸತ್ಯಾತ್ಮ ತೀರ್ಥರು ತಮ್ಮ ವಿಡಿಯೋ ಸಂದೇಶವನ್ನು ನೀಡಿದ್ದು, ವ್ಯಾಸರಾಜರ ಮೂಲ ವೃಂದಾವನದ ಪುನರ್ ಪ್ರತಿಷ್ಠಾಪನೆಗೆ ಕೈ ಜೋಡಿಸಲು ಮನವಿ ಮಾಡಿದ್ದಾರೆ.
ನಿಧಿಗಾಗಿ ಆನೆಗುಂದಿಯಲ್ಲಿ ವ್ಯಾಸರಾಜರ ಬೃಂದಾವನ ಧ್ವಂಸಗೊಳಿಸಿದ ದುಷ್ಕರ್ಮಿಗಳು
ಈ ವಿಚಾರದಲ್ಲಿ ಸ್ವತಃ ಆಸಕ್ತಿ ತೆಗೆದುಕೊಂಡು ಎಲ್ಲ ರೀತಿಯ ಸಹಕಾರ ನೀಡುತ್ತಿದ್ದು, ತಪ್ಪಿತಸ್ಥರನ್ನು ಶೀಘ್ರವೇ ಬಂಧಿಸಿ, ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಉತ್ತರಾದಿ ಮಠದ ಪೀಠಾಧ್ಯಕ್ಷರಾದ ಸತ್ಯಾತ್ಮ ತೀರ್ಥರ ವಿಡಿಯೋ ಸಂದೇಶದಲ್ಲಿ ಏನಿದೆ ಎಂಬುದರ ಪೂರ್ಣ ಪಾಠ ಇಲ್ಲಿದೆ.
"ವ್ಯಾಸರಾಜರ ಮೂಲ ವೃಂದಾವನಕ್ಕೆ ರಾತ್ರಿ ಹಲ್ಲೆ ನಡೆದಿದೆ ಎನ್ನುವ ವಾರ್ತೆ ಬೆಳಗ್ಗೆ ಎಲ್ಲರ ವಿಚಾರಕ್ಕೂ ಬಂತು. ಬಹಳ ದೊಡ್ಡ ಆಘಾತ ಇದು. ಮಾಧ್ವ ಸಮಾಜಕ್ಕೇನೇ ಒಂದು ದೊಡ್ಡ ಆಘಾತ. ಇಡೀ ನಮ್ಮ ಹಿಂದೂ ಸಮಾಜಕ್ಕೆ ದೊಡ್ಡ ಅವಮಾನದ ಸಂಗತಿ. ರಾಜಗುರುಗಳು, ತತ್ತ್ವ ಜ್ಞಾನ ಕ್ಷೇತ್ರದಲ್ಲಿ ಬಹಳ ದೊಡ್ಡ ಕೊಡುಗೆಯನ್ನು ಕೊಟ್ಟವರು.
ಬೃಂದಾವನ ಧ್ವಂಸ: ಕೃತ್ಯ ಮಾಡಿದವರ ವಂಶ ಸರ್ವನಾಶವಾಗಲಿ ಎಂದ ಜಗ್ಗೇಶ್
"ನ್ಯಾಯಾಮೃತ, ತಾತ್ಪರ್ಯ ಚಂದ್ರಿಕ, ತರ್ಕ ತಾಂಡವದಂಥ ದೊಡ್ಡ ಗ್ರಂಥಗಳನ್ನು ರಚನೆ ಮಾಡಿ, ನಮ್ಮ ಮಾಧ್ವ ವಾಙ್ಮಯವನ್ನು ಶ್ರೀಮಂತಗೊಳಿಸಿದ ಮಹಾನುಭಾವರು. ವ್ಯಾಸ ಸಾಹಿತ್ಯಕ್ಕೆ ಪ್ರವರ್ತಕರು. ಕೃಷ್ಣದೇವರಾಯನ ರಾಜ ಗುರುಗಳು. ಪುರಂದರ ದಾಸರಿಗೆ ದೀಕ್ಷೆಯನ್ನು ಕೊಟ್ಟ ಗುರುಗಳು. ಇಂತಹ ಮಹಾನುಭಾವರು, ಅವರೆಲ್ಲ ಮಾಡಿದ ಮಹಾ ಕಾರ್ಯಗಳು ನಿತ್ಯದಲ್ಲಿಯೂ ಸ್ಮರಣೀಯವಾದುದು.
"ಅಂತಹ ಮಹಾನುಭಾವರಿಗೆ ಆಗಿರುವಂಥ ಈ ಅಪಚಾರ ಇದು ಅಕ್ಷಮ್ಯವಾದದ್ದು. ಇದರ ಬಗ್ಗೆ ಸರಿಯಾದ ತನಿಖೆ ನಡೆಯಲೇಬೇಕು. ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆ ವಿಧಿಸಲೇಬೇಕು. ಸರಕಾರ ಇದರ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಬೇಕು ಅಂತ ನಮ್ಮೆಲ್ಲರ ಅಪೇಕ್ಷೆ. ನಾವೆಲ್ಲ ಸೇರಿ ಅದಕ್ಕಾಗಿ ಪ್ರತಿಭಟನೆಯನ್ನು ಮಾಡಿ, ತನಿಖೆ ಆಗುವವರೆಗೂ ಸರಕಾರ ಬಿಡಬಾರದು. ಅವರಿಗೆ ಶಿಕ್ಷೆಯನ್ನು ಕೊಡಲೇಬೇಕು ಅಂತ ಮತ್ತೆ ಮತ್ತೆ ಆಗ್ರಹ ಪಡಿಸುತ್ತೇವೆ.
ವ್ಯಾಸರಾಜರ ಬೃಂದಾವನ ಧ್ವಂಸ; ಮೈಸೂರಿನಲ್ಲಿ ಬ್ರಾಹ್ಮಣ ಸಂಘಟನೆಗಳಿಂದ ಪ್ರತಿಭಟನೆ
"ವ್ಯಾಸರಾಜ ಮಠಾಧೀಶರಾದ ವಿದ್ಯಾಶ್ರೀಶ ತೀರ್ಥರ ಜತೆಗೆ ಮಾತನಾಡಿದ್ದೇವೆ. ಮುಂದಿನ ಬೃಂದಾವನದ ಪುನರ್ ನಿರ್ಮಾಣ ಕಾರ್ಯದಲ್ಲಿ ಶೀಘ್ರದಲ್ಲಿ ಅವರು ತೊಡಗುತ್ತಿದ್ದಾರೆ. ಅದಕ್ಕಾಗಿ ಮೈಸೂರಿನಿಂದ ಧಾವಿಸಿ ಬರುತ್ತಿದ್ದಾರೆ. ನಾವು ಕೂಡ ನವ ವೃಂದಾವನದ ಕಡೆಗೆ ಸಾಗುತ್ತಿದ್ದೇವೆ. ಅವರು ಮಾಡುವ ವೃಂದಾವನದ ಪುನರ್ ನಿರ್ಮಾಣ ಕಾರ್ಯದಲ್ಲಿ ನಮ್ಮ ಪೂರ್ಣವಾದ ಸಹಕಾರ, ಸಹಯೋಗ ಇದೆ.
"ಸಕಲರಿಗೂ ಮಾನ್ಯರಾದ, ಪೂಜ್ಯರಾದ ಆ ವ್ಯಾಸರಾಜರ ಸೇವೆಯನ್ನು ಮಾಡುವುದಕ್ಕೆ ಎಲ್ಲರೂ ಸಿದ್ಧ. ವಿದ್ಯಾಶ್ರೀಶರು ಮಾಡುತ್ತಿರುವ ಆ ಕಾರ್ಯಕ್ಕೆ ಎಲ್ಲರ ನೈತಿಕವಾದ ಹಾಗೂ ಆಧ್ಯಾತ್ಮಿಕವಾದ ಎಲ್ಲ ರೀತಿಯ ಸಹಕಾರ ಇರಬೇಕು. ವಿಶೇಷವಾಗಿ ಜಪ, ವ್ಯಾಸರಾಜರ ಸ್ಮರಣೆ, ಅವರ ಸ್ತೋತ್ರದ ಪಠಣವನ್ನು ಮಾಡಿ.
ಆನೆಗುಂದಿ ವ್ಯಾಸರಾಯರ ಬೃಂದಾವನ ಧ್ವಂಸ: ಆನ್ಲೈನ್ ಪೆಟಿಷನ್
"ಅವರ ಅನುಗ್ರಹದಿಂದ ಮುಖ್ಯಪ್ರಾಣ ದೇವರ, ಗೋಪಾಲಕೃಷ್ಣ ದೇವರ, ಶ್ರೀರಾಮ ದೇವರ ಅನುಗ್ರಹದಿಂದ ಈ ಕಾರ್ಯ ನಿರ್ವಿಘ್ನವಾಗಿ ಆಗಲಿ ಅಂತ ಸಕಲ ಆಸ್ತಿಕ ಮಹಾಶಯರೂ ಕೂಡ ದೇವರಲ್ಲಿ, ವಾಯು ದೇವರಲ್ಲಿ ಭಕ್ತಿಯಿಂದ ಪ್ರಾರ್ಥನೆ ಮಾಡೋಣ" ಎಂದು ಸತ್ಮಾತ್ಮ ತೀರ್ಥರು ಹೇಳಿದ್ದಾರೆ.