ಪ್ರವಾಸಿಗರಿಗಾಗಿ ಬಾಗಿಲು ತೆರೆದ ಕರ್ನಾಟಕದ 7 ಮೃಗಾಲಯಗಳು
ಬೆಂಗಳೂರು, ಜೂನ್ 25; ಕೋವಿಡ್ 2ನೇ ಅಲೆ ಹರಡುವಿಕೆ ತಡೆಯಲು ಘೋಷಣೆ ಮಾಡಿದ್ದ ಲಾಕ್ಡೌನ್ ಬಳಿಕ ರಾಜ್ಯದ 7 ಮೃಗಾಲಯಗಳು ಬಾಗಿಲು ತೆರೆದಿವೆ. ಬನ್ನೇರುಘಟ್ಟ ಮತ್ತು ಮೈಸೂರು ಮೃಗಾಲಯ ಪ್ರವಾಸಿಗರಿಗೆ ಇನ್ನೂ ಮುಕ್ತವಾಗಿಲ್ಲ.
ಹಂಪಿ, ಬೆಳಗಾವಿ, ಗದಗ, ಶಿವಮೊಗ್ಗ, ಚಿತ್ರದುರ್ಗ, ಕಲಬುರಗಿ ಮತ್ತು ದಾವಣಗೆರೆಯಲ್ಲಿನ ಮೃಗಾಗಲಯಗಳು ಲಾಕ್ಡೌನ್ ಬಳಿಕ ಬಾಗಿಲು ತೆರೆದಿವೆ. ಏಪ್ರಿಲ್ 24ರ ಬಳಿಕ ಎಲ್ಲಾ ಮೃಗಾಲಯಗಳನ್ನು ಮುಚ್ಚಲಾಗಿತ್ತು.
"ಮೊದಲ ದಿನ ಮೃಗಾಲಯಗಳಿಗೆ ಕಡಿಮೆ ಜನರು ಆಗಮಿಸಿದ್ದಾರೆ. ದಿನಕಳೆದಂತೆ ಹೆಚ್ಚು ಜನರು ಬರುವ ನಿರೀಕ್ಷೆ ಇದೆ. ಅವರ ಸುರಕ್ಷತೆಗೆ ಅಗತ್ಯ ಕ್ರಮಕೈಗೊಳ್ಳಲಾಗಿದೆ" ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ. ಪಿ. ರವಿ ಹೇಳಿದ್ದಾರೆ.

"ಮೃಗಾಲಯಗಳಿಗೆ ಬರುವ ಜನರಿಗೆ ಕೋವಿಡ್ ಪರೀಕ್ಷೆ ಮಾಡಬೇಕೆ? ಎಂದು ಅಧಿಕಾರಿಗಳು ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ" ಎಂದು ಮೃಗಾಲು ಪ್ರಾಧಿಕಾರದ ಅಧ್ಯಕ್ಷ ಎಲ್. ಆರ್. ಮಹದೇವಸ್ವಾಮಿ ತಿಳಿಸಿದ್ದಾರೆ.
ಮೃಗಾಲಯದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಎಲ್ಲರೂ ಮೊದಲ ಡೋಸ್ ಕೋವಿಡ್ ಲಸಿಕೆ ಪಡೆದಿದ್ದಾರೆ. ಸಿಬ್ಬಂದಿ ಕುಟುಂಬ ಸದಸ್ಯರಿಗೂ ಲಸಿಕೆ ನೀಡಲು ಕೆಲವು ಕಡೆ ಅಭಿಯಾನವನ್ನು ವಿಸ್ತರಣೆ ಮಾಡಲಾಗಿದೆ.
ಬನ್ನೇರುಘಟ್ಟದಲ್ಲಿ ಪ್ರವಾಸಿಗರ ಭೇಟಿಗೆ ಅವಕಾಶ ನೀಡಲು ಆರೋಗ್ಯ ಇಲಾಖೆ ಮತ್ತು ಬೆಂಗಳೂರು ಜಿಲ್ಲಾಡಳಿತ ಅನುಮತಿಗಾಗಿ ಕಾಯಲಾಗುತ್ತಿದೆ. ಜೂನ್ 28ರ ಸೋಮವಾರದಿಂದ ಬಾಗಿಲು ತೆರೆಯುವ ನಿರೀಕ್ಷೆ ಇದೆ.
ಮೈಸೂರಿನಲ್ಲಿ ಲಾಕ್ಡೌನ್ ಜಾರಿಯಲ್ಲಿದ್ದು ಶ್ರೀ ಚಾಮರಾಜೇಂದ್ರ ಮೃಗಾಲಯ ಬಾಗಿಲು ತೆರೆದಿಲ್ಲ. ರಾಜ್ಯದಲ್ಲಿ ಕೊನೆಯದಾಗಿ ಈ ಮೃಗಾಗಲು ಪ್ರವಾಸಿಗರಿಗೆ ಮುಕ್ತವಾಗುವ ನಿರೀಕ್ಷೆ ಇದೆ.












Click it and Unblock the Notifications