ಬಿಬಿಎಂಪಿ ಕಿರುಕುಳ : ಕರ್ನಾಟಕದಲ್ಲಿ ಯುಎನ್ಐ ಸೇವೆ ಬಂದ್
ಬೆಂಗಳೂರು, ಜೂನ್ 17 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಿರುಕುಳ, ದೌರ್ಜನ್ಯ ಖಂಡಿಸಿ ಯುಎನ್ಐ ಕರ್ನಾಟಕದಲ್ಲಿ ತನ್ನ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಚಂದಾದಾರರಿಗೆ ಆಗುತ್ತಿರುವ ತೊಂದರೆಗೆ ಯುಎನ್ಐ ವಿಷಾದ ವ್ಯಕ್ತಪಡಿಸಿದೆ.
ಸೋಮವಾರ ಬೆಂಗಳೂರಿನಲ್ಲಿ ಯುಎನ್ಐ ಉದ್ಯೋಗಿಗಳು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿರುದ್ಧ ಪ್ರತಿಭಟನೆ ನಡೆಸಿದರು. ವಸಂತನಗರಲ್ಲಿರುವ ಕಚೇರಿಯನ್ನು ಖಾಲಿ ಮಾಡಿಸುವುದಾಗಿ ಬೆದರಿಕೆ ಹಾಕುತ್ತಿರುವ ಬಿಬಿಎಂಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನ ವಸಂತನಗರದಲ್ಲಿ 1986ರಲ್ಲಿ ಯುಎನ್ಐ ಕಚೇರಿಯನ್ನು ಉದ್ಘಾಟನೆ ಮಾಡಲಾಗಿತ್ತು. ಇಂದು ಕರ್ನಾಟಕದಲ್ಲಿ ಯುಎನ್ಐ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಘೋಷಣೆ ಮಾಡಲಾಗಿದೆ.

ಬಿಬಿಎಂಪಿ ಜೊತೆ ಒಪ್ಪಂದ ಮಾಡಿಕೊಂಡು ವಸಂತ ನಗರದಲ್ಲಿ ಕಚೇರಿ ತೆರೆಯಲಾಗಿತ್ತು. ಒಪ್ಪಂದದ ಅವಧಿ 2013ರಲ್ಲಿಯೇ ಅಂತ್ಯಗೊಂಡಿತ್ತು. ಒಪ್ಪಂದ ನವೀಕರಣ ಮಾಡುವಂತೆ ಯುಎನ್ಐ ಹಲವು ಬಾರಿ ಮನವಿ ಮಾಡಿದರೂ ಬಿಬಿಎಂಪಿ ನಿರ್ಲಕ್ಷ್ಯ ಮಾಡಿತು. ಈಗ ಕಟ್ಟಡ ಖಾಲಿ ಮಾಡಿಸುವುದಾಗಿ ಹೇಳುತ್ತುದೆ.
ಬಿಬಿಎಂಪಿಯ ತೀರ್ಮಾನವನ್ನು ಖಂಡಿಸಿ ಕರ್ನಾಟಕದಲ್ಲಿ ಯುಎನ್ಐ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಆಡಳಿತ ಮಂಡಳಿ ತೀರ್ಮಾನಿಸಿದೆ. ಇದರಿಂದಾಗಿ ಚಂದಾದಾರರಿಗೆ ತೊಂದರೆಯಾಗುತ್ತಿದ್ದು. ಅದಕ್ಕಾಗಿ ವಿಷಾದ ವ್ಯಕ್ತಪಡಿಸಲಾಗಿದೆ.
ದೇಶದ ಪ್ರಥಮ ಪ್ರಾದೇಶಿಕ ಭಾಷಾ ಸುದ್ದಿ ಸೇವಾ ಜಾಲ ಯುಎನ್ಐ 2018ರ ಡಿಸೆಂಬರ್ನಲ್ಲಿ ಕನ್ನಡ ಸುದ್ದಿ ಭಾಷಾ ಸೇವೆಯನ್ನು ಆರಂಭಿಸಿತ್ತು. ದೇಶದ ಹಲವು ಮುದ್ರಣ, ವಿದ್ಯುನ್ಮಾನ, ವೆಬ್ ಸೈಟ್ಗಳಿಗೆ ಸುದ್ದಿಗಳನ್ನು ಒದಗಿಸುವ ಕಾರ್ಯವನ್ನು ಯುಎನ್ಐ ಮಾಡುತ್ತಿತ್ತು.












Click it and Unblock the Notifications