ಗ್ಯಾರಂಟಿಗಳನ್ನ ನೀಡಿದಾಗ ತಲೆಯಲ್ಲಿ ಮೆದುಳು ಇರಲಿಲ್ವಾ? ಸಗಣಿ ತುಂಬಿತ್ತಾ..? ಕೈ ನಾಯಕರ ವಿರುದ್ದ ಶೋಭಾ ಕರಂದ್ಲಾಜೆ ಕಿಡಿ
ಚಿಕ್ಕಮಗಳೂರು, ಜೂನ್ 21: ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಿಮ್ಮ ಗ್ಯಾರಂಟಿ ಭರವಸೆಗಳನ್ನ ನೀಡಿದಾಗ ತಲೆಯಲ್ಲಿ ಮೆದುಳು ಇರಲಿಲ್ವಾ?, ಸಗಣಿ ತುಂಬಿತ್ತಾ..? ಎಂದು ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.
ಈ ಕುರಿತು ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, ರಾಜ್ಯ ಸರಕಾರ ಬೇಜವಾಬ್ದಾರಿ ಸರಕಾರವಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಸುಳ್ಳು ಅಶ್ವಾಸನೆ ನೀಡಿದ್ದಾರೆ. ಐದು ಭರವಸೆ ಈಡೇರಿಸಲು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.

ಕೇಂದ್ರದಲ್ಲಿ ಸಾಕಷ್ಟು ದಾಸ್ತಾನು ಇರುವುದು ತುರ್ತು ಸಂದರ್ಭದಲ್ಲಿ ಜನರಿಗೆ ನೀಡಲು. ಆಡಳಿತ ನೀಡಲು ಯೋಗ್ಯತೆಯಿಲ್ಲದೆ ಪ್ರತಿ ವಿಚಾರಕ್ಕೂ ನರೇಂದ್ರ ಮೋದಿ ಹಾಗೂ ಕೇಂದ್ರದ ಕಡೆ ಬೊಟ್ಟು ತೋರಿಸಬೇಡಿ. ಕೇಂದ್ರ ಕೊಡುತ್ತಿರುವ ಐದು ಕೆ.ಜಿ ಸೇರಿಸಿ ಹತ್ತು ಕೆ.ಜಿ ನೀಡಬೇಡಿ ಎಂದರು.
ರಾಜ್ಯದಲ್ಲಿ ಆರಾಜಕತೆ ತುಂಬಿದೆ. ವಿದ್ಯುತ್ ಬಿಲ್ ಹೆಚ್ಚಾಗಿದೆ. ಒಬ್ಬ ಮರ್ಯಾದೆ ಇಲ್ಲದ, ಬೇಜವಾಬ್ದಾರಿ ಮುಖ್ಯಮಂತ್ರಿಗಳಂತೆ ಸಿದ್ದರಾಮಯ್ಯ ಅವರು ಮೋದಿ ಕೊಡಲ್ಲ ಎಂದು ಹೇಳುತ್ತಿದ್ದಾರೆ ಕೇಂದ್ರದಲ್ಲಿ ಬಫರ್ ಸ್ಟಾಕ್ ಇರುವುದು ದೇಶಕ್ಕೆ ಆಪತ್ತು ಬಂದಾಗ ಉಪಯೋಗಿಸಲು. ಗ್ಯಾರಂಟಿ ಹೆಸರಲ್ಲಿ ವೋಟು ತಗೆದುಕೊಂಡು ಆಡಳಿತ ನಡೆಸಲು ಸಿದ್ದರಾಮಯ್ಯಗೆ ಯೋಗ್ಯತೆ ಇಲ್ಲ ಕೇಂದ್ರ ಸರ್ಕಾರದ ಐದು ಕೆಜಿ ಅಕ್ಕಿ ಸೇರಿದಂತೆ ರಾಜ್ಯದ ಜನತೆಗೆ 15 ಕೆ.ಜಿ ಅಕ್ಕಿ ನೀಡಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು.
ಮಹಿಳೆಯರು ಬಸ್ ಪಾಸ್ ಪಡೆಯಲು ಸರ್ಟಿಫಿಕೇಟ್ ಕೇಳುತ್ತಿದ್ದಾರೆ. ನಾನು ಮಹಿಳೆ ಎನ್ನುವುದಕ್ಕೆ ನನಗೆ ಸರ್ಟಿಫಿಕೇಟ್ ಬೇಕಿಲ್ಲ. ಅಕ್ಕಿ, ದುಡ್ಡು, ವಿದ್ಯುತ್ ಎಲ್ಲದಕ್ಕೂ ಮೋದಿ ಕಡೆ ತೋರಿಸುತ್ತಿದ್ದೀರಿ. ಹಾಗಾದರೆ ನೀವು ಗ್ಯಾರಂಟಿ ಕಾರ್ಡ್ ಏಕೆ ವಿತರಣೆ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಈ ಹಿಂದೆ ನೀವು ನಿಮ್ಮ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದಾಗಲೇ ನಾವು ಅವತ್ತೇ ನಿಮ್ಮನ್ನು ಕೇಳಿದ್ವಿ. ಇವುಗಳಿಗೆಲ್ಲಾ ಹಣ ಎಲ್ಲಿಂದ ತರುತ್ತೀರಿ ಎಂದು ಪ್ರಶ್ನಿಸಿದ್ದೇವು. ಆದರೆ, ಇವತ್ತು ಅಕ್ಕಿ, ದುಡ್ಡು, ವಿದ್ಯುತ್ ಎಲ್ಲದಕ್ಕೂ ಮೋದಿ ಕಡೆ ಬೆರಳು ಮಾಡಿ ತೋರಿಸುತ್ತಿದ್ದೀರಿ. ಯಾರಿಗೆ ಮೋಸ ಮಾಡಲು, ಯಾರ ಮೂಗಿಗೆ ತುಪ್ಪ ಸವರಲು ಯೋಜನೆಗಳನ್ನು ಘೋಷಣೆ ಮಾಡಿದ್ದೀರಾ? ಎಂದು ಸಿದ್ದರಾಮಯ್ಯ ಅವರನ್ನ ಪ್ರಶ್ನಿಸಿದ್ದಾರೆ.












Click it and Unblock the Notifications