ಉಡುಪಿಯಲ್ಲಿ ಕಂಬಳ ನಿಷೇಧ, ಜನರ ಆಕ್ರೋಶ
ಉಡುಪಿ, ನ. 15 : ಉಡುಪಿಯಲ್ಲಿ ಕಂಬಳ ನಿಷೇಧ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಅವರು ಸುಪ್ರೀಂಕೋರ್ಟ್ ಆದೇಶದಂತೆ ಜಿಲ್ಲಾಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ. ಇಂದು ಸಂಜೆ ವಿಧಾನಸೌಧದಲ್ಲಿ ಈ ಕುರಿತು ಸಭೆ ನಡೆಯಲಿದ್ದು, ನಂತರ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಹಿಂದಿನ ಸುದ್ದಿ : ಕರಾವಳಿಯ ಜಾನಪದ ಕ್ರೀಡೆ ಕಂಬಳ ನಿಷೇಧಿಸಿರುವ ಕ್ರಮ ಉಡುಪಿಯಲ್ಲಿ ಚರ್ಚೆಗೆ ಕಾರಣವಾಗಿದೆ. ಉಡುಪಿ ಜಿಲ್ಲಾಡಳಿತ ನ.15ರಿಂದ ನಡೆಯಬೇಕಾಗಿದ್ದ ಎಲ್ಲಾ ಕಂಬಳವನ್ನು ನಿಷೇಧಿಸಿ ಆದೇಶ ಹೊರಡಿದೆ. ಸುಪ್ರೀಂಕೋರ್ಟ್ ಆದೇಶ ಮತ್ತು ರಾಜ್ಯ ಸರ್ಕಾರ ನಿರ್ದೇಶನದ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ.
ಸಾರ್ವಜನಿಕರು, ಕಂಬಳ ಆಯೋಜಕರು ನಡೆಸುವ ಕಂಬಳವನ್ನು ತಡೆ ಹಿಡಿಯಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮೂಲಕ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಸರ್ಕಾರದಿಂದ ಆದೇಶ ಬಂದಿದ್ದು, ಇದನ್ನು ಅನುಷ್ಠಾನಗೊಳಿಸಿಲು ಜಿಲ್ಲಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ.

ಭಾರತೀಯ ಪ್ರಾಣಿ ಕ್ಷೇಮಾಭಿವೃದ್ಧಿ ಮಂಡಳಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಕೆಲವು ದಿನಗಳ ಹಿಂದೆ ತಮಿಳುನಾಡಿನ ಹೋರಿಗಳ ಸ್ಪರ್ಧೆಯಾದ ಜಲ್ಲಿಕಟ್ಟನ್ನು ನಿಷೇಧಿಸಿತ್ತು. ಈ ತೀರ್ಪಿನ ಪ್ರತಿಯನ್ನು ಜಿಲ್ಲಾಧಿಕಾರಿಗಳಿಗೆ ರವಾನಿಸಿದ್ದ ಮುಖ್ಯಕಾರ್ಯದರ್ಶಿಗಳು ಕಂಬಳ ನಿಷೇಧಿಸುವ ಕುರಿತು ಸೂಚನೆ ನೀಡಿದ್ದರು. ಇದೇ ತೀರ್ಪನ್ನು ಆಧಾರವಾಗಿಟ್ಟುಕೊಂಡು ಕಂಬಳ ನಿಷೇಧಿಸುವ ಆದೇಶವನ್ನು ನೀಡಲಾಗಿದೆ. [ಮುನ್ನೂರು ಗ್ರಾಮದ ಗೌಜಿ ಗಮ್ಮತ್ತು ಚಿತ್ರಗಳು]
ಕೆಲವು ದಿನಗಳ ಹಿಂದೆ ಉಡುಪಿ ಜಿಲ್ಲಾಧಿಕಾರಿ ಕಂಬಳ ಸಮಿತಿಯವರನ್ನು ಕರೆದು ಕಂಬಳದಲ್ಲಿ ನಡೆಯುವ ಪ್ರಾಣಿ ಹಿಂಸೆ ಬಗ್ಗೆ ಚರ್ಚೆ ನಡೆಸಿದ್ದರು. ನ.2ರಂದು ಕಾರ್ಕಳ ಮಿಯಾರಿನಲ್ಲಿ ಪ್ರಾಯೋಗಿಕವಾಗಿ ಕಂಬಳವನ್ನು ನಡೆಸಿ, ಅದರ ಚಿತ್ರವನ್ನು ಉಡುಪಿ ಜಿಲ್ಲಾಧಿಕಾರಿಗಳಿಗೆ ನೀಡಲಾಗಿತ್ತು. ಆಗ ಜಿಲ್ಲಾಧಿಕಾರಿಗಳು ಕಂಬಳ ನಡೆಸಲು ಯಾವುದೇ ತೊಂದರೆ ಇಲ್ಲಾ ಎಂದು ಹೇಳಿದ್ದರು. ಆದರೆ, ಈಗ ನಿಷೇಧದ ಆದೇಶ ಹೊರಬಿದ್ದಿದೆ. [ಆಸ್ಟ್ರೋ ಮೋಹನ್ ಚಿತ್ರಗಳಿಗೆ ಅಂತಾರಾಷ್ಟ್ರೀಯ ಮನ್ನಣೆ]
ಈ ಬಗ್ಗೆ ಚರ್ಚೆ ನಡೆಸುತ್ತೇವೆ : ಕಂಬಳ ಒಂದು ಜನಪದ ಕ್ರೀಡೆಯಾಗಿದ್ದು, ಈಗ ಅದು ಹಿಂಸಾತ್ಮಕವಾಗಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿಯವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ರಾಜ್ಯ ಮುಖ್ಯ ಕಾರ್ಯದರ್ಶಿಯವರ ಆದೇಶದ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದಬಂದಿದ್ದು, ಕರಾವಳಿಯ ಸಚಿವರು, ಗಣ್ಯರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಕರಾವಳಿ ಕಂಬಳ ಸಮಿತಿಗಳ ಒಕ್ಕೂಟದ ಅಧ್ಯಕ್ಷ ಭಾಸ್ಕರ ಸುಬ್ಬಯ್ಯ ಹೇಳಿದ್ದಾರೆ.












Click it and Unblock the Notifications