ಭಾರತ-ಪಾಕಿಸ್ತಾನ ವಿಭಜನೆಯ ಸಿದ್ದಾಂತ ಮೊದಲು ಮಂಡಿಸಿದ್ದೇ ಸಾವರ್ಕರ್: ಸಿದ್ದರಾಮಯ್ಯ
ಬೆಂಗಳೂರು, ಆಗಸ್ಟ್ 18: ಭಾರತ ವಿಭಜನೆಯಾಗಲು ನೆಹರು ಕಾರಣ ಎಂದು ಬಿಜೆಪಿ ಹೇಳುತ್ತಿದೆ. ಆದರೆ ಎರಡು ರಾಷ್ಟ್ರಗಳ ಸಿದ್ದಾಂತವನ್ನು ಮೊದಲು ಮಂಡಿಸಿದ್ದೇ ಸಾವರ್ಕರ್, ಅದಾದ ಮೂರು ವರ್ಷಗಳ ಬಳಿಕ ಮಹಮ್ಮದ್ ಆಲಿ ಜಿನ್ನಾ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಟ್ಟರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬ್ರಿಟಿಷರಿಗೆ ನಾನು ನಿಮ್ಮ ಸೇವಕ ಎಂದಿದ್ದ ಸಾವರ್ಕರ್ ದೇಶಪ್ರೇಮಿ, ಸ್ವಾತಂತ್ರ್ಯ ಹೋರಾಟಗಾರರಾಗುವುದು ಹೇಗೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ನಿಜವಾಗಿ ಹೋರಾಡಿದವರನ್ನು ಸ್ವಾತಂತ್ರ್ಯ ಹೋರಾಟಗಾರರಲ್ಲ ಎನ್ನುವ ಬಿಜೆಪಿ ಬ್ರಿಟಿಷರ ಗುಲಾಮಗಿರಿ ಮಾಡಿದ ವ್ಯಕ್ತಿಯನ್ನು ಸ್ವಾತಂತ್ರ್ಯ ಹೋರಾಟಗಾರರೆಂದು ಬಿಂಬಿಸುವ ಮೂಲಕ ಇತಿಹಾಸ ತಿರುಚುವ ದುಷ್ಟ ಹುನ್ನಾರಕ್ಕೆ ಬಿಜೆಪಿ ಕೈ ಹಾಕಿದೆ ಎಂದು ಹೇಳಿದರು.
ತಮ್ಮ ರಾಜಕೀಯ ಅಜೆಂಡಾಗಳಿಗೆ ಯಾವೊಬ್ಬ ಪೂರ್ವಸೂರಿಯೂ ಗತಿಯಿಲ್ಲ ಎಂಬುದನ್ನು ಬಿಜೆಪಿ ಪದೇ ಪದೇ ಸಾಬೀತುಪಡಿಸುತ್ತಿದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
ಬಿಜೆಪಿಯವರು ಮೊದಲು ಭಗತ್ಸಿಂಗ್ ಆಶ್ರಯಿಸಿದರು. ಆದರೆ ಭಗತ್ ಸಿಂಗ್ ನಿಜವಾದ ಸ್ವಾತಂತ್ರ್ಯವೀರ, ಮಹಾನ್ ದೇಶಪ್ರೇಮಿಯಾಗಿದ್ದ, ಚಿಂತನೆಗಳಲ್ಲಿ ಎಡಪಂಥೀಯರಾಗಿದ್ದ, ಸಮಾಜವಾದಿಯಾಗಿದ್ದರು. 'ನಾನೇಕೆ ನಾಸ್ತಿಕ' ಎಂದು ಪುಸ್ತಕ ಬರೆದ ಭಗತ್ಸಿಂಗ್ ಪುರೋಹಿತಶಾಹಿ, ಸನಾತನವಾದಿ ಮತ್ತು ತಾರತಮ್ಯವಾದಿ ಮನಸ್ಥಿತಿಗೆ ಸಂಪೂರ್ಣ ವಿರುದ್ಧ ನಿಲುವು ಹೊಂದಿದ್ದರು. ಮಹಾ ಮಾನವತಾವಾದಿಯೂ, ಸಮಾನತಾವಾದಿಯೂ ಆಗಿದ್ದ ಭಗತ್ಸಿಂಗ್ರ ಚಿಂತನೆಗಳು ತಮ್ಮ ರಾಜಕೀಯ ಅಜೆಂಡಾಗಳಿಗೆ ಸರಿಯಾಗಲ್ಲ ಎಂದು ಅರಿತ ಬಿಜೆಪಿ ಭಗತ್ಸಿಂಗ್ರನ್ನು ನಿರ್ಲಕ್ಷ್ಯ ಮಾಡಲು ಪ್ರಾರಂಭಿಸಿದರು ಎಂದು ಆರೋಪಿಸಿದ್ದಾರೆ.

ಸ್ವಾಮಿ ವಿವೇಕಾನಂದರನ್ನು ಬಿಟ್ಟ ಬಿಜೆಪಿ
ಭಗತ್ಸಿಂಗ್ ನಂತರ ಬಿಜೆಪಿಯವರು ಸ್ವಾಮಿ ವಿವೇಕಾನಂದರನ್ನು ಗುತ್ತಿಗೆ ಪಡೆದವರಂತೆ ಆಡಿದರು. ಆದರೆ ಸ್ವಾಮಿ ವಿವೇಕಾನಂದರು ಈ ದೇಶದ ಎಲ್ಲಾ ಶಾಪಗಳಿಗೆ ಮನುವಾದಿಗಳಾದ ಪುರೋಹಿತಶಾಹಿಗಳೇ ಕಾರಣ ಎಂದು ಹೇಳಿ, ಪುರೋಹಿತಶಾಹಿಗಳನ್ನು ಸಮುದ್ರದಾಚೆಗೆ ಎಸೆದರೆ ಮಾತ್ರ ಇಲ್ಲಿ ನೆಮ್ಮದಿ ಸಾಧ್ಯ ಎಂದಿದ್ದರು. ಆದ್ದರಿಂದಲೇ ಬಿಜೆಪಿಯವರು ನಿಧಾನವಾಗಿ ಸ್ವಾಮಿ ವಿವೇಕಾನಂದ ಅವರನ್ನೂ ದೂರ ಮಾಡಿದರು ಎಂದು ಸಿದ್ದರಾಮಯ್ಯ ಹೇಳಿದರು.
ಮತ್ತೆ ಒಂದಷ್ಟು ದಿನಗಳ ಕಾಲ ಸುಭಾಶ್ ಚಂದ್ರ ಬೋಸ್ ಅವರ ಹೆಸರು ಹೇಳುತ್ತಿದ್ದ ಬಿಜೆಪಿ ನಂತರ ಅವರನ್ನು ಬಿಟ್ಟುಕೊಟ್ಟರು ಎಂದರು.

ಸಾವರ್ಕರ್ ಬ್ರಿಟಿಷರಿಗೆ ಸಹಾಯ ಮಾಡುತ್ತಿದ್ದರು
ದೇಶ ಭಕ್ತರೆಂದು ಹೇಳಿಕೊಳ್ಳುವ ಸಾವರ್ಕರ್, ಬ್ರಿಟಿಷರೆ ನಾವು ನಿಮ್ಮ ಜೊತೆ ಇದ್ದೇವೆ ಎಂದು ಹೇಳಿ ಬ್ರಿಟಿಷರ ಯುದ್ಧಕ್ಕೆ ಬೇಕಾದ ಸೈನ್ಯದ ನೇಮಕಾತಿಗೆ ಸಾವರ್ಕರ್ ಬೆಂಬಲವಾಗಿ ನಿಂತರು. ಇದೆಲ್ಲ ಬಿಜೆಪಿಯವರಿಗೆ ಯಾರಾದರೂ ಹೇಳಿಕೊಡಬೇಕಾಗಿದೆ ಎಂದು ಹೇಳಿದರು.
ಸನಾತನವಾದಿ ಪುರೋಹಿತಶಾಹಿ ಮೌಲ್ಯಗಳು ಹಾಗೂ ದ್ವೇಷಯುತವಾದ ವಿಚಾರಗಳನ್ನು ಬಿಟ್ಟರೆ ಸಾವರ್ಕರ್ರಿಂದ ದೇಶದ ಜನರು ಏನು ಕಲಿಯಲು ಸಾಧ್ಯ?. ಕೊಲೆ ಕೇಸಿನಲ್ಲಿ ಜೈಲಿಗೆ ಹೋದ ಸಾವರ್ಕರ್, ಜೈಲಿನಲ್ಲಿದ್ದಾಗ ಯಾಕೆ ಶರಣಾಗತಿಯ 6 ಪತ್ರಗಳನ್ನು ಬ್ರಿಟಿಷರಿಗೆ ಬರೆದರು? ನಾನು ನಿಮ್ಮ ವಿನಮ್ರ ಸೇವಕ ಎಂದು ಯಾಕೆ ಬರೆದರು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಬ್ರಿಟಿಷರ ಕ್ಷಮಾಪಣೆ ಪಡೆದು ಜೈಲಿನಿಂದ ಬಿಡುಗಡೆಯಾದ ಮೇಲೆ ಸಾವರ್ಕರ್ ಮಾಡಿದ್ದೇನು? ತಮ್ಮ ಜೊತೆಯಲ್ಲಿ ಅಂಡಮಾನಿನ ಜೈಲಿನಲ್ಲಿದ್ದ ಕೈದಿಗಳ ಬಿಡುಗಡೆಗೆ ಹೋರಾಟ ಮಾಡಿದರೆ? ಪಿಂಚಣಿ ಹಣ ಸಾಕಾಗುತ್ತಿಲ್ಲ ಅದನ್ನು ಹೆಚ್ಚಿಸಿ ಎಂದು ಸಾವರ್ಕರ್ ಬ್ರಿಟಿಷ್ ಸರ್ಕಾರಕ್ಕೆ ಕೇಳಿದ್ಯಾಕೆ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಸಾವರ್ಕರ್ ಬಗ್ಗೆ ಬಹಿರಂಗ ಚರ್ಚೆ ನಡೆಯಲಿ
ಸಾವರ್ಕರ್ರನ್ನು ಸ್ವಾತಂತ್ರ್ಯ ಹೋರಾಟಗಾರ, ದೇಶಪ್ರೇಮಿ ಎಂದು ಹೇಗೆ ಕರೆಯಬೇಕು? ಯಾಕೆ ಕರೆಯಬೇಕು? ಎಂದು ಬಿಜೆಪಿಯವರೇ ಹೇಳಬೇಕು. ಈ ಕುರಿತು ಮುಕ್ತವಾದ ಬಹಿರಂಗ ಚರ್ಚೆ ನಡೆಯಲಿ. ಆರ್ ಎಸ್ಎಸ್ಗೆ ಸಂಪೂರ್ಣ ತಲೆಬಾಗಿದ್ದೇನೆಂದು ಹೇಳುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಚರ್ಚೆಯ ನೇತೃತ್ವ ವಹಿಸಲಿ ಎಂದು ಹೇಳಿದರು.
ಸರ್ಕಾರ ಜನರ ತೆರಿಗೆಯಲ್ಲಿ ಜಾಹೀರಾತು ನೀಡುವಾಗ ತಮ್ಮ ಪಕ್ಷದ ಜಾಹೀರಾತಿನಂತೆ ನೀಡಿದೆ. ದೇಶದ ಪ್ರಜಾತಂತ್ರದ, ಸಂವಿಧಾನದ ಆಶಯಗಳನ್ನು ಸಮರ್ಥವಾಗಿ ಈಡೇರಿಸಿದ, ಅಭಿವೃದ್ಧಿಗೆ ಭದ್ರಬುನಾದಿ ಹಾಕಿದ ಜವಾಹರಲಾಲ್ ನೆಹರೂರವನ್ನು ಬಿಜೆಪಿಯವರು ಸರ್ಕಾರಿ ಜಾಹಿರಾತುಗಳಲ್ಲಿ ಕೈಬಿಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಎರಡು ರಾಷ್ಟ್ರಗಳ ಸಿದ್ಧಾಂತ ಮೊದಲು ಮಂಡಿಸಿದ್ದು ಸಾವರ್ಕರ್
ಭಾರತ ವಿಭಜನೆಗೆ ನೆಹರೂ ಕಾರಣ ಎಂಬ ಸುಳ್ಳು ಸುದ್ದಿಯನ್ನು ಬಿಜೆಪಿಯವರು ಹಬ್ಬಿಸುತ್ತಿದ್ದಾರೆ. ವಾಸ್ತವವೇನೆಂದರೆ ಮೊಟ್ಟ ಮೊದಲಿಗೆ ಎರಡು ರಾಷ್ಟ್ರಗಳ ಸಿದ್ಧಾಂತವನ್ನು ಮಂಡಿಸಿದ್ದೆ ಸಾವರ್ಕರ್. 1937 ರಲ್ಲಿ ಗುಜರಾತಿನ ಅಹಮದಾದಿನಲ್ಲಿ ನಡೆದ ಹಿಂದೂ ಮಹಾಸಭಾದ ಕಾರ್ಯಕ್ರಮದಲ್ಲಿ ಮೊದಲ ಬಾರಿ ಈ ಕುರಿತು ಮಾತನಾಡಿದ್ದಾರೆ. ಸಾವರ್ಕರ್ ಈ ಕುರಿತು ಮಾತನಾಡಿದ 3 ವರ್ಷಗಳ ನಂತರ ಮಹಮ್ಮದ್ ಆಲಿ ಜಿನ್ನಾ ದ್ವಿರಾಷ್ಟ್ರ ಸಿದ್ಧಾಂತವನ್ನು ಮಂಡಿಸಿದರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ದೇಶದ ಇತಿಹಾಸವನ್ನು ಓದಿ ಅರ್ಥ ಮಾಡಿಕೊಂಡಿರುವವರು ಯಾರೂ ಸಹ ಸಾವರ್ಕರ್ ಅಂಥವರನ್ನು ದೇಶಭಕ್ತ, ಸ್ವಾತಂತ್ರ್ಯ ಹೋರಾಟಗಾರ ಎಂದು ಕರೆಯಲು ಸಾಧ್ಯವಿಲ್ಲ. ಯಾಕೆಂದರೆ ಅವರು ಬ್ರಿಟಿಷರ ಜೊತೆ ಇದ್ದರು. ಜನರು ಬ್ರಿಟಿಷರ ಗುಂಡು, ಲಾಠಿ, ಫಿರಂಗಿಗಳಿಗೆ ಎದೆಯೊಡ್ಡಿ ನಿಂತಿದ್ದರು ಎಂದು ಹೇಳಿದರು.
ಯುವಜನತೆ ಇತಿಹಾಸವನ್ನು ಅಧ್ಯಯನ ಮಾಡಿ ತಾವೇ ಸತ್ಯವನ್ನು ಕಂಡುಕೊಳ್ಳಬೇಕು. ಇಲ್ಲದಿದ್ದರೆ, ಸುಳ್ಳು ಇತಿಹಾಸದ ಮೂಲಕ ಯುವಜನಾಂಗವನ್ನು ದಾರಿ ತಪ್ಪಿಸುವ ದುಷ್ಟಶಕ್ತಿಗಳು ಹೆಚ್ಚಾಗುತ್ತವೆ ಎಂದು ಹೇಳಿದರು. ದೇಶದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ, ಇವುಗಳನ್ನೆಲ್ಲ ಮರೆಮಾಚಿ ಬಿಜೆಪಿಯವರು ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.












Click it and Unblock the Notifications