ಅನಂತ್ ಕುಮಾರ್ ಬಿಟ್ಟುಹೋದ ಎರಡೂ ಖಾತೆಗಳು ಕನ್ನಡಿಗರಿಗೆ
Recommended Video
ನವದೆಹಲಿ, ಮೇ 31: ನರೇಂದ್ರ ಮೋದಿ ಅವರ ಮೊದಲ ಅವಧಿಯ ಸರ್ಕಾರದಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಹಾಗೂ ಸಂಸದೀಯ ವ್ಯವಹಾರಗಳ ಖಾತೆಯ ಸಚಿವರಾಗಿದ್ದ ರಾಜ್ಯದ ಸಂಸದ ಅನಂತ್ ಕುಮಾರ್ ಅವರು 2018ರ ನವೆಂಬರ್ನಲ್ಲಿ ಮೃತಪಟ್ಟಿದ್ದರು. ಅವರ ನಿಧನದ ಬಳಿಕ ಅವರ ಎರಡೂ ಖಾತೆಗಳನ್ನು ಮರು ಹಂಚಿಕೆ ಮಾಡಲಾಗಿತ್ತು.
ರಸಗೊಬ್ಬರ ಖಾತೆ ಹೊಂದಿದ್ದ ಅನಂತ್ ಕುಮಾರ್ ಅವರಿಗೆ 2016ರಲ್ಲಿ ಸಂಪುಟ ಪುನಾರಚನೆ ಮಾಡಿದ ಸಂದರ್ಭದಲ್ಲಿ ಸಂಸದೀಯ ವ್ಯವಹಾರಗಳ ಖಾತೆಯನ್ನು ಹೆಚ್ಚುವರಿಯಾಗಿ ನೀಡಲಾಗಿತ್ತು.
ಆಗಿನ ಸರ್ಕಾರದಲ್ಲಿ ಕಾರ್ಯಕ್ರಮ ಅನುಷ್ಠಾನ ಮತ್ತು ಸಾಂಖ್ಯಿಕ ಸಚಿವರಾಗಿದ್ದ ಸದಾನಂದಗೌಡ ಅವರಿಗೆ ಹೆಚ್ಚುವರಿಯಾಗಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ವಹಿಸಲಾಗಿತ್ತು. ಸಂಸದೀಯ ವ್ಯವಹಾರಗಳ ಸಚಿವ ಖಾತೆಯನ್ನು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಗಣಿಗಾರಿಕೆ ಸಚಿವರಾಗಿದ್ದ ನರೇಂದ್ರ ಸಿಂಗ್ ತೋಮರ್ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿತ್ತು.
ಶ್ವಾಸಕೋಶದ ಕ್ಯಾನ್ಸರ್ನಿಂದ ಬಳಲುತ್ತಿದ್ದ ಅನಂತ್ ಕುಮಾರ್ ಅವರು ಕಳೆದ ವರ್ಷ ನವೆಂಬರ್ 12ರಂದು ಮೃತಪಟ್ಟಿದ್ದರು.

ಡಿವಿಎಸ್ಗೆ ಅನಂತ್ ಖಾತೆ
ಅನಂತ್ ಕುಮಾರ್ ಅವರು ನಿಭಾಯಿಸಿದ್ದ ಎರಡೂ ಖಾತೆಗಳನ್ನು ಈಗ ಕನ್ನಡಿಗರಿಗೇ ನೀಡಿರುವುದು ವಿಶೇಷ. ಹೆಚ್ಚುವರಿಯಾಗಿ ರಸಗೊಬ್ಬರ ಮತ್ತು ರಾಸಾಯನಿಕ ಖಾತೆಯನ್ನು ನಿಭಾಯಿಸಿದ ಅನುಭವ ಹೊಂದಿದ್ದ ಡಿ.ವಿ. ಸದಾನಂದ ಗೌಡ ಅವರಿಗೆ ಸಂಪೂರ್ಣವಾಗಿ ಈ ಖಾತೆಯನ್ನು ನೀಡಲಾಗಿದೆ.

ಪ್ರಹ್ಲಾದ್ ಜೋಶಿಗೆ ಸಂಸದೀಯ ವ್ಯವಹಾರ
ಇದೇ ಮೊದಲ ಬಾರಿಗೆ ಕೇಂದ್ರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಪ್ರಹ್ಲಾದ್ ಜೋಶಿ ಅವರಿಗೆ ಅನಂತ್ ಕುಮಾರ್ ಅವರು ನಿಭಾಯಿಸುತ್ತಿದ್ದ ಸಂಸದೀಯ ವ್ಯವಹಾರಗಳ ಖಾತೆಯನ್ನು ನೀಡಲಾಗಿದೆ. ಈ ಖಾತೆಯ ಜತೆಗೆ ಗಣಿ ಹಾಗೂ ಕಲ್ಲಿದ್ದಲು ಖಾತೆಯ ಹೊಣೆಯೂ ಅವರಿಗೆ ದೊರಕಿದೆ.

ಬೆಂಗಳೂರು ದಕ್ಷಿಣದಿಂದ ಆಯ್ಕೆ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸತತ ಆರು ಬಾರಿ ಸಂಸತ್ ಪ್ರವೇಶಿಸಿದ್ದ ಅನಂತ್ ಕುಮಾರ್ ಅವರು ಒಮ್ಮೆಯೂ ಸೋಲು ಕಂಡಿರಲಿಲ್ಲ. ಅನಂತ್ ಕುಮಾರ್ ಅವರ ಗೈರು ಹಾಜರಿಯಲ್ಲಿ ಎರಡು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿಯಿಂದ ಬೇರೆ ಅಭ್ಯರ್ಥಿ ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಆರಂಭದಲ್ಲಿ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರ ಹೆಸರು ಕೇಳಿಬಂದಿದ್ದರೂ, ಪಕ್ಷ ಯುವ ಮುಖಂಡ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಿತ್ತು. ತೇಜಸ್ವಿ ಸೂರ್ಯ ಮೊದಲ ಚುನಾವಣೆಯಲ್ಲಿಯೇ ಗೆದ್ದು ಸಂಸತ್ ಪ್ರವೇಶಿಸಿದ್ದಾರೆ.

ಸದಾನಂದ ಗೌಡ ಅವರಿಗೆ ಬಿಎಸ್ವೈ ಸಲಹೆ
ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುವ ಮುನ್ನ ಸದಾನಂದ ಗೌಡ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆದಿದ್ದರು. ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಅನಂತ್ ಕುಮಾರ್ ಅವರ ಸ್ಥಾನವನ್ನು ತುಂಬಬೇಕು. ಅವರಂತೆ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದರು. ಈಗ ಅನಂತ್ ಕುಮಾರ್ ಅವರು ನಿಭಾಯಿಸುತ್ತಿದ್ದ ಖಾತೆಯೇ ಸದಾನಂದ ಗೌಡ ಅವರಿಗೆ ದೊರಕಿರುವುದು ವಿಶೇಷ.












Click it and Unblock the Notifications