2 ದಿನದಲ್ಲಿ ಇಬ್ಬರು ಪ್ರಮುಖರು ಕೈ ಬಿಟ್ಟರೂ ಕಾಂಗ್ರೆಸ್ ಡೋಂಟ್ ಕೇರ್
ಬೆಂಗಳೂರು, ಜೂನ್ 24: ಇನ್ನೇನು ವಿಧಾನಸಭಾ ಚುನಾವಣೆ ತೀರಾ ದೂರದಲ್ಲೇನೂ ಇಲ್ಲ. ಅಂಥದ್ದರಲ್ಲಿ ಕೈ ಪಕ್ಷದಿಂದ ಒಬ್ಬೊಬ್ಬರೇ ಪ್ರಮುಖ ನಾಯಕರು ಕಳಚಿಕೊಳ್ಳುತ್ತಿದ್ದಾರೆ. ಎರಡೇ ದಿನದ ಫಾಸಲೆಯಲ್ಲಿ ಪಕ್ಷದ ಹಿರಿಯ ನಾಯಕರಾದ ಎಚ್ ವಿಶ್ವನಾಥ್ ಮತ್ತು ವಿಶ್ವಕರ್ಮ ಸಮುದಾಯದ ಪ್ರಬಲ ನಾಯಕ ಕೆಪಿ ನಂಜುಂಡಿ ಕಾಂಗ್ರೆಸ್ ತೊರೆದಿದ್ದಾರೆ.
ನಂಜುಂಡಿ ಅವರ ಮನೆಗೆ ಸ್ವತಃ ಬಿಎಸ್ ಯಡಿಯೂರಪ್ಪ ಭೇಟಿ ನೀಡಿ, ಪಕ್ಷಕ್ಕೆ ಆಹ್ವಾನ ನೀಡಿದ ಮೇಲೆ ಬಿಜೆಪಿ ಸೇರುವ ಒಲವು ತೋರಿಸಿದ್ದಾರೆ. ಇನ್ನು ವಿಶ್ವನಾಥ್ ಜೆಡಿಎಸ್ ಸೇರುವ ಸಾಧ್ಯತೆಗಳಿವೆ. ಅಂದಹಾಗೆ ವಿಶ್ವನಾಥ್ ಅವರು ಎಐಸಿಸಿ ಸದಸ್ಯರಾಗಿದ್ದವರು. ಇನ್ನು ನಂಜುಂಡಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿದ್ದವರು.
ವಿಶ್ವನಾಥ್ ನಿರ್ಗಮನ ಕಾಂಗ್ರೆಸ್ ಗೆ ತೀರಾ ದೊಡ್ಡ ಪೆಟ್ಟಲ್ಲ. ಆದರೆ ಕೆಪಿ ನಂಜುಂಡಿ ಪಕ್ಷ ಬಿಟ್ಟು ಹೊರಟಿರುವುದು ವಿಶ್ವಕರ್ಮ ಸಮುದಾಯದ ಮತಗಳ ಮೇಲೆ ಖಂಡಿತಾ ಪರಿಣಾಮ ಬೀರುತ್ತದೆ.
ನಂಜುಂಡಿ ಒಬ್ಬ ಉದ್ಯಮಿ ಮತ್ತು ಕಾಂಗ್ರೆಸ್ ಸದಸ್ಯರಾಗಿದ್ದರು. ಅವರಿಗೆ ವಿಶ್ವಕರ್ಮ ಸಮಾಜದಲ್ಲಿ ಬೆಂಬಲ ಇದೆ. ಅವರ ನಿರ್ಗಮನದಿಂದಾಗಿ ಆ ಸಮಾಜದ ದೊಡ್ಡ ಮಟ್ಟದ ಮತಗಳು ಕೈ ಬಿಟ್ಟಂತಾಗುತ್ತದೆ. ಆದರೆ ಎಲ್ಲರನ್ನೂ ಯಾವಾಗಲೂ ಸಮಾಧಾನ ಪಡಿಸಲು ಆಗಲ್ಲ. ಈಗ ನಮಗೆ ಒಬ್ಬ ಟಿಕೆಟ್ ಆಕಾಂಕ್ಷಿ ಕಡಿಮೆ ಆದಂತಾಯಿತು ಅಂದುಕೊಳ್ತೀವಿ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳ್ತಾರೆ.

ಎಂಎಲ್ ಸಿ ಸ್ಥಾನ ನೀಡಲಿಲ್ಲ
ಕೆಪಿ ನಂಜುಂಡಿ ಅವರಿಗೆ ಹಲವು ಸಲ ಎಂಎಲ್ ಸಿ ಸ್ಥಾನ ನೀಡಲಿಲ್ಲ. ಕಳೆದ ಬಾರಿ ಸಮಾಜ ಸೇವೆ ಕೋಟಾದಿಂದ ಅವರ ಹೆಸರು ಅಂತಿಮವಾಗಿತ್ತು. ಕೊನೆ ಕ್ಷಣದಲ್ಲಿ ಕೈ ತಪ್ಪಿ ಹೋಯಿತು. ಬಿಜೆಪಿ ಸೇರುತ್ತಿರುವ ನಂಜುಂಡಿ, ನಾನು ಯಾವುದೇ ಹುದ್ದೆ ಆಕಾಂಕ್ಷಿ ಅಲ್ಲ ಎಂದಿದ್ದಾರೆ. ಆದರೆ ಬಿಜೆಪಿ ರಾಜ್ಯ ಘಟಕದಲ್ಲಿ ಅವರಿಗೆ ಪ್ರಮುಖ ಹುದ್ದೆ ಕೊಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಉಪಾಧ್ಯಕ್ಷ ಸ್ಥಾನದ ಸಾಧ್ಯತೆಗಳಿವೆ
ಕೆಪಿ ನಂಜುಂಡಿ ಅವರಿಗೆ ಬಿಜೆಪಿ ಉಪಾಧ್ಯಕ್ಷ ಸ್ಥಾನವನ್ನೇ ಕೊಡುವ ಸಾಧ್ಯತೆಗಳಿವೆ. ಏಕೆಂದರೆ, ಅವರ ಬೆನ್ನಿಗೆ ಹನ್ನೆರಡಕ್ಕೂ ಹೆಚ್ಚು ಸ್ವಾಮೀಜಿಗಳ ಹಾಗೂ ಅವರ ಅನುಯಾಯಿಗಳ ಬೆಂಬಲ ಇದೆ. ಜತೆಗೆ ವಿಶ್ವಕರ್ಮ ಸಮುದಾಯದ ವೋಟ್ ಬ್ಯಾಂಕ್ ನ ಲಾಭ ಪಡೆಯುವ ಉದ್ದೇಶದಿಂದ ಪ್ರಮುಖ ಸ್ಥಾನ ಮಾನವನ್ನೇ ನೀಡಲಾಗುವುದು.

ಸಿದ್ದರಾಮಯ್ಯ ಧೋರಣೆಗೆ ಅಸಮಾಧಾನ
ಸಿದ್ದರಾಮಯ್ಯ ಅವರ ಧೋರಣೆ ಬಗ್ಗೆ ಅಸಮಾಧಾನ ಹೊಂದಿದ್ದ ವಿಶ್ವನಾಥ್ ಹಲವು ವಾರಗಳಿಂದಲೇ ಕಾಂಗ್ರೆಸ್ ಬಿಡುವ ಮಾತನಾಡುತ್ತಿದ್ದರು. ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಗೆ ಕರೆತಂದವರೇ ವಿಶ್ವನಾಥ್ ಎಂಬ ಮಾತಿದ್ದು, ಇದೀಗ ವಿಶ್ವನಾಥ್ ರನ್ನು ಪಕ್ಷದಲ್ಲಿ ನಡೆಸಿಕೊಳ್ಳುತ್ತಿದ್ದ ರೀತಿಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ವಿಶ್ವನಾಥ್ ಮೂರನೆಯವರು
ಕಾವೇರಿ ಪಾಳೇಪಟ್ಟಿನಲ್ಲಿ ಕಾಂಗ್ರೆಸ್ ತೊರೆದ ನಾಯಕರ ಪೈಕಿ ವಿಶ್ವನಾಥ್ ಮೂರನೆಯವರು. ಈ ಹಿಂದೆ ವಿ.ಶ್ರೀನಿವಾಸ್ ಪ್ರಸಾದ್ ಹಾಗೂ ಎಸ್ಸೆಂ ಕೃಷ್ಣ ಪಕ್ಷ ತೊರೆದಿದ್ದಾರೆ. ಈ ಇಬ್ಬರೂ ನಾಯಕರು ಪಕ್ಷದ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಡಿಸಿದ್ದಾರೆ.

ಬಿಜೆಪಿ ಅಲ್ಲೆಲ್ಲೋ ದೂರದ ಮೂರನೇ ಸ್ಥಾನದಲ್ಲಿ
ಕಾಂಗ್ರೆಸ್ ನ ಭದ್ರಕೋಟೆ ಎನಿಸಿರುವ ಮಂಡ್ಯ-ಮೈಸೂರು ಭಾಗದಲ್ಲಿ ನಿಜವಾದ ಕದನ ಇದ್ದದ್ದು ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯೆ. ಬಿಜೆಪಿ ಅಲ್ಲೆಲ್ಲೋ ದೂರದ ಮೂರನೇ ಸ್ಥಾನದಲ್ಲಿತ್ತು. ಈ ಭಾಗದ ಮೂವರು ನಾಯಕರು ಕೈ ಬಿಟ್ಟು ಹೋಗುವುದರೊಂದಿಗೆ ಕಾಂಗ್ರೆಸ್ ಜನಪ್ರಿಯತೆಗೆ ಇದು ಹಿನ್ನಡೆಯೇ. ಆದರೆ ಒಬ್ಬ ಶ್ರೀನಿವಾಸ್ ಪ್ರಸಾದ್ ರ ಪ್ರಾಬಲ್ಯ ಇರುವ ಪ್ರದೇಶ ಹೊರತುಪಡಿಸಿ ಉಳಿದೆಡೆ ಮತ ಗಳಿಕೆ ಪ್ರಮಾಣದಲ್ಲಿ ಅಂಥ ವ್ಯತ್ಯಾಸ ಆಗುವಂತೆ ಕಾಣುತ್ತಿಲ್ಲ.












Click it and Unblock the Notifications