ರಾಜ್ಯ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲ: ನಿಜವಾಯಿತೇ ಈಶ್ವರಪ್ಪ ಭವಿಷ್ಯ?
ಬೆಂಗಳೂರು, ಜುಲೈ 1: ಆಷಾಢ ಮಾಸಕ್ಕೆ ಎರಡು ದಿನದ ಮೊದಲೇ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರಕ್ಕೆ 'ಆಷಾಢ ಸಂಕಟ' ಆರಂಭವಾಗಿದೆ. ಅಮವಾಸ್ಯೆಯ ಮುನ್ನಾದಿನವಾದ ಜುಲೈ ಒಂದರಂದು ಇಬ್ಬರು ಕೈ ಶಾಸಕರು ರಾಜೀನಾಮೆ ನೀಡಿದ್ದಾರೆ.
ಹದಿನೈದು ದಿನದ ಕೆಳಗೆ ಬಿಜೆಪಿ ಹಿರಿಯ ಮುಖಂಡ, ಕೆ ಎಸ್ ಈಶ್ವರಪ್ಪ, ಆಪರೇಷನ್ ಕಮಲ ಆರಂಭವಾದರೆ, ಅದು ಆರಂಭವಾಗುವುದು ಬಳ್ಳಾರಿ ಜಿಲ್ಲೆಯಿಂದಲೇ ಎಂದು ಹೇಳಿದ್ದರು.
ಬಳ್ಳಾರಿ ಲೋಕಸಭಾ ವ್ಯಾಪ್ತಿಯ ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಮತ್ತು ಬೆಳಗಾವಿ ಜಿಲ್ಲೆ ಗೋಕಾಕ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಸೋಮವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಮೈತ್ರಿ ಪಕ್ಷದ ಶಾಸಕರುಗಳೇ ನಮ್ಮನ್ನು ಸಂಪರ್ಕಿಸುತ್ತಿದ್ದಾರೆ, ನಾವೇನೂ ಆಪರೇಷನ್ ಮಾಡಬೇಕಾಗಿಲ್ಲ. ಎರಡು ಪಕ್ಷಗಳ ನಡುವೆ ಹೊಂದಾಣಿಕೆ ಎನ್ನುವುದು ಇಲ್ಲವೇ ಇಲ್ಲ ಎಂದು ಈಶ್ವರಪ್ಪ ಬಳ್ಳಾರಿಯಲ್ಲಿ ಹೇಳಿದ್ದರು.
ಒಂದು ವೇಳೆ, ಆಪರೇಷನ್ ಕಮಲ ಮಾಡಬೇಕಾಗಿ ಬಂದರೂ, ಅದು ಬಳ್ಳಾರಿಯಿಂದ ಆರಂಭವಾಗಲಿದೆ ಎಂದು ಈಶ್ವರಪ್ಪ ಹೇಳಿದ್ದರು. ಅದರಂತೆಯೇ, ಆನಂದ್ ಸಿಂಗ್ ರಾಜೀನಾಮೆ ನೀಡಿ ರಾಜ್ಯಪಾಲರನ್ನು ಭೇಟಿಯಾಗಿ ಬಂದಿದ್ದಾರೆ.
ನಾನೇನು ಬಿಜೆಪಿ ಪ್ರಭಾವಕ್ಕೆ ಒಳಗಾಗಲಿಲ್ಲ ಎಂದು ಆನಂದ್ ಸಿಂಗ್ ಮಾಧ್ಯಮದವರ ಮುಂದೆ ಹೇಳಿದ್ದಾರೆ. ಈಶ್ವರಪ್ಪ ಹೇಳಿರುವುದಕ್ಕೂ ಆನಂದ್ ಸಿಂಗ್ ರಾಜೀನಾಮೆ ನೀಡಿರುವುದೂ ಕಾಕತಾಳೀಯವೂ ಆಗಿರಬಹುದು..












Click it and Unblock the Notifications