Tumkur Election Campaign: ಸುರೇಶ್ಗೌಡ ಪರ ಸಿಎಂ ಬೊಮ್ಮಾಯಿ ಮತಯಾಚನೆ, ಜೆಡಿಎಸ್-ಕಾಂಗ್ರೆಸ್ ವಿರುದ್ಧ ಕಿಡಿ
ತುಮಕೂರು, ಏಪ್ರಿಲ್ 23: ಕಾಂಗ್ರೆಸ್ ಎಂದರೇ ಭ್ರಷ್ಟಾಚಾರ. ಎಸ್ಸಿ, ಎಸ್ಟಿ ಮಕ್ಕಳ ಹಾಸ್ಟೆಲ್ ಹಾಸಿಗೆ ದಿಂಬಿನಲ್ಲೂ ಕಾಂಗ್ರೆಸ್ನವರು ಲೂಟಿ ಮಾಡಿದ್ದರು. ಇನ್ನೂ ಜೆಡಿಎಸ್ ಅಭಿವೃದ್ಧಿ ಬಗ್ಗೆ ನ್ಯಾಯಾಲವೇ ಸರ್ಟಿಫಿಕೇಟ್ ಕೊಟ್ಟಿದೆ. ಹೀಗಾಗಿ ಈ ಬಾರಿ ಕಾಂಗ್ರೆಸ್, ಜೆಡಿಎಸ್ ಅನ್ನು ರಾಜ್ಯದಿಂದ ಧೂಳಿಪಟ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ್ ಗೌಡರ ಪರವಾಗಿ ಗೂಳೂರಿನಲ್ಲಿ ಭಾನುವಾರ ರೋಡ್ ಶೋ ನಡೆಸಿ ಮತಯಾಚನೆ ಮಾಡಿ ಮುಖ್ಯಮಂತ್ರಿಗಳು ಮಾತನಾಡಿ ಜೆಡಿಎಸ್, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಸುರೇಶ್ ಗೌಡರು ಒಬ್ಬರು ಸಾಧಕರು. ಇದಕ್ಕೆ ಅವರು ಮಾಡಿರುವ ಕೆಲಸವೇ ಸಾಕ್ಷಿ. ಸುರೇಶ್ ಗೌಡ್ರು 50 ವರ್ಷದಲ್ಲಿ ಆಗುವ ಕೆಲಸವನ್ನು ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ 5 ವರ್ಷದಲ್ಲಿ ಮಾಡಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಕಳೆದ ಬಾರಿ ಸುರೇಶ ಗೌಡರನ್ನು ಸೋಲಿಸಿ ಅಕ್ರಮವಾಗಿ ಶಾಸಕರಾಗಿ ಆಯ್ಕೆಯಾಗಿತ್ತು. ಸುರೇಶ್ ಗೌಡರು ಕಾನೂನಿನ ನ್ಯಾಯಯದಲ್ಲಿ ಗೆದ್ದಿದ್ದಾರೆ. ಅವರ ಪರವಾಗಿ ತೀರ್ಪು ಬಂದಿದೆ. ಈಗ ಜನತಾ ನ್ಯಾಯಾಲಯದಲ್ಲಿ ತಾವು ನ್ಯಾಯ ಕೊಡುವ ಮೂಲಕ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು. ಯಾವಾಗ ಜನತಾ ನ್ಯಾಯಾಲಯದಲ್ಲಿ ಗೆಲುವು ಸಿಗುತ್ತದೊ ಆಗ ಜರುಗಿದ್ದ ಅನ್ಯಾಯ, ಅಕ್ರಮ ಎಲ್ಲ ಸಕ್ರಮ ಆಗುತ್ತದೆ. ಅಲ್ಲಿಯವರೆಗೂ ನೀವು ವಿಶ್ರಮಿಸಬಾರದು ಎಂದು ಅವರು ಮನವಿ ಮಾಡಿದರು.

ಬಿಜೆಪಿ ಸರ್ಕಾರದ ಸಾಧನೆ ತಿಳಿಸಿ: ಸಿಎಂ ಸೂಚನೆ
ಹಗಲು ರಾತ್ರಿ ಪ್ರತಿದಿನ ನೀವೇ ಸುರೇಶ್ ಗೌಡರಾಗಿ ಮನೆ ಮನೆಗೆ ಹೋಗಿ ಕೇಂದ್ರದಲ್ಲಿ ನರೇಂದ್ರ ಮೋದಿ ಅವರು ಮಾಡಿರುವ ಕೆಲಸ ಹಾಗೂ ರಾಜ್ಯದಲ್ಲಿ ಯಡಿಯೂರಪ್ಪನವರು ಹಾಗೂ ನಾನು ಮಾಡಿರುವ ಕೆಲಸಗಳನ್ನು, ಯೋಜನೆಗಳನ್ನು ಜನರಿಗೆ ತಿಳಿಸಿ. ಎಲ್ಲರ ಮನ ಗೆದ್ದು ಮತ್ತೊಮ್ಮೆ ಕಮಲ ಅರಳಿಸಿ. ಕೇಂದ್ರದ ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯದ 54 ಲಕ್ಷ ರೈತರಿಗೆ ಹಣ ದೊರೆತಿದೆ. ತುಮಕೂರು ಗ್ರಾಮಾಂತರದಲ್ಲಿ 30 ಸಾವಿರ ರೈತರಿಗೆ ಯೋಜನೆಯಿಂದ ಪ್ರಯೋಜನ ಆಗಿದೆ. ಆಯುಷ್ಮಾನ್ ಭಾರತ್, ಪ್ರಧಾನಮಂತ್ರಿ ಆವಾಸ್ ಯೋಜನೆಯಿಂದ ಫಲಾನುಭವಿಗಳಿಗೆ ಪ್ರಯೋಜನವಾಗಿದೆ ಎಂದರು.
ಬಿಜೆಪಿ ಸರ್ಕಾರದಿಂದ ಈ ಕ್ಷೇತ್ರದ 7 ಸಾವಿರ ರೈತರ ಮಕ್ಕಳಿಗೆ ವಿದ್ಯಾನಿಧಿ ಸಿಕ್ಕಿದೆ. ಮಹಿಳೆಯರಿಗೆ ಸ್ವಯಂ ಉದ್ಯೋಗ ಕೊಡುವ ಸ್ತ್ರೀ ಶಕ್ತಿ ಯೋಜನೆ ಜಾರಿಗೆ ತಂದಿದ್ದೇವೆ. ಯುವಕರಿಗೆ ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆ ಜಾರಿಗೆ ತಂದಿದ್ದೇನೆ. ಇದನ್ನು ಹೆಚ್ಚು ಪ್ರಚಾರ ಮಾಡಿ ಸುರೇಶ್ ಗೌಡರನ್ನು 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಕೋರಿದರು.
ಜೆಡಿಎಸ್ ಅಭಿವೃದ್ಧಿಯನ್ನು ವಿರೋಧಿಸಿದ್ದರು
ಜೆಡಿಎಸ್ ಅಭ್ಯರ್ಥಿ ಬಗ್ಗೆ ನ್ಯಾಯಾಲಯವೇ ಸರ್ಟಿಫಿಕೇಟ್ ಕೊಟ್ಟಿದೆ. ಜೆಡಿಎಸ್ ನವರು ಅಧಿಕಾರದಲ್ಲಿದ್ದಾಗ ಗೂಳೂರು ಏತ ನೀರಾವರಿ ಮಾಡಬಾರದು ಎಂದು ಯೋಜನೆಗೆ ವಿರೋಧಿಸಿ ಆದೇಶ ಮಾಡಿದ್ದರು. ನಾನು ನೀರಾವರಿ ಸಚಿವನಾಗಿ ಈ ಯೋಜನೆಯನ್ನು ಕೈಗೆತ್ತಿಕೊಂಡು ಒಂದೇ ವರ್ಷದಲ್ಲಿ ಇದಕ್ಕೆ ಅಡಿಗಲ್ಲು ಆಯ್ತು. ಸಿದ್ದಗಂಗಾ ಮಠದ ಹಿರಿಯ ಸ್ವಾಮೀಜಿಗಳು ಭೂಮಿ ಪೂಜೆ ಮಾಡಿದ್ದರು. ನಾವೇ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಜನರ ಸಮಸ್ಯೆಗಳನ್ನು ಪರಿಹಾರ ಮಾಡುವ ಶಕ್ತಿ ಸುರೇಶ್ ಗೌಡರಿಗಿದೆ ಎಂದು ಶ್ಲಾಘಿಸಿದರು.
ಮನಸ್ಸಿಟ್ಟು ಕೆಲಸ ಮಾಡೋರಿಗೆ ಸಿಟ್ಟು ಬರುತ್ತದೆ. ಅದು ಪ್ರೀತಿಯ ಸಿಟ್ಟು. ಮಗುವಿನಂತ ಮನಸ್ಸು ಹೊಂದಿರುವ ಸುರೇಶ್ ಗೌಡರಿಗೆ ಜನರ ಮೇಲೆ ಅಪಾರ ಪ್ರೀತಿ ವಿಶ್ವಾಸ ಇದೆ. ಕಳೆದ ಬಾರಿಯ ಅಕ್ರಮವನ್ನು ಈ ಬಾರಿ ಸಕ್ರಮ ಮಾಡಿ ಕಾಂಗ್ರೆಸ್ ಜೆಡಿಎಸ್ ಅನ್ನು ರಾಜ್ಯದಿಂದ ಧೂಳಿಪಟ ಮಾಡಬೇಕು ಎಂದರು.











Click it and Unblock the Notifications