ಸಿಎಂ ಪರಿಹಾರ ನಿಧಿಗೆ ಒಂದು ದಿನದ ವೇತನ ನೀಡಿದ ಸಾರಿಗೆ ಸಂಸ್ಥೆಯ ನೌಕರರು
ಬೆಂಗಳೂರು, ಮೇ 13 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಒಂದು ದಿನದ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ. ಕೊರೊನಾ ವಿರುದ್ಧ ಹೋರಾಟ ಮಾಡಲು ಹಲವಾರು ಜನರು, ಸಂಘ ಸಂಸ್ಥೆಗಳು ದೇಣಿಗೆ ನೀಡುತ್ತಿವೆ.
ಬುಧವಾರ ಸಾರಿಗೆ ಸಚಿವ, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪಗೆ ಚೆಕ್ ಹಸ್ತಾಂತರ ಮಾಡಿದರು. ಒಟ್ಟು ನಾಲ್ಕು ನಿಗಮಗಳ ನೌಕರರು ಒಂದು ದಿನದ ವೇತನವನ್ನು ನೀಡಿದ್ದಾರೆ.
ಸರ್ಕಾರಿ ಬಸ್ ಚಾಲಕರಿಗೆ ಬಹುಮಾನ ಘೋಷಿಸಿದ ಸಚಿವರು
ಕೆಎಸ್ಆರ್ಟಿಸಿ, ಬಿಎಂಟಿಸಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಎಲ್ಲಾ ಸಿಬ್ಬಂದಿಗಳ ಒಂದು ದಿನದ ವೇತನ 9.85 ಕೋಟಿ ರೂ.ಗಳನ್ನು ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ನೀಡಲಾಗಿದೆ.
ಲಾಕ್ ಡೌನ್; ನಷ್ಟದ ಲೆಕ್ಕ ಕೊಟ್ಟ ಕೆಎಸ್ಆರ್ಟಿಸಿ
ಕೊರೊನಾ ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ಸರ್ಕಾರಿ ಬಸ್ಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಕಳೆದ ವಾರ ವಲಸೆ ಕಾರ್ಮಿಕರನ್ನು ಅವರ ತವರು ಜಿಲ್ಲೆಗೆ ವಾಪಸ್ ಕಳಿಸಲು ಕೆಎಸ್ಆರ್ಟಿಸಿ ನಾಲ್ಕು ದಿನಗಳ ಕಾಲ ಉಚಿತ ಬಸ್ಗಳನ್ನು ಓಡಿಸಿತ್ತು.
ಮುಂದಿನ ವಾರದಿಂದ ಆಯ್ದ ಸ್ಥಳಗಳಿಗೆ ಬಸ್ ಸೇವೆ ಆರಂಭ?
ಲಾಕ್ ಡೌನ್ ಘೋಷಣೆಯಿಂದಾಗಿ ಸಾರಿಗೆ ಸಂಸ್ಥೆಗಳಿಗೆ ಏಪ್ರಿಲ್ 20ರ ತನಕ 816.23 ಕೋಟಿ ನಷ್ಟ ಉಂಟಾಗಿತ್ತು. ಬೆಂಗಳೂರಿನ ಜೀವನಾಡಿ ಬಿಎಂಟಿಸಿಗೆ 149 ಕೋಟಿ ನಷ್ಟವಾಗಿತ್ತು.
ಮೇ 17ರಿಂದ ಬಿಎಂಟಿಸಿ ಬಸ್ ಸಂಚಾರ ಆರಂಭವಾಗುವ ನಿರೀಕ್ಷೆ ಇದೆ. ನೌಕರರು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಈಗಾಗಲೇ ಸೂಚನೆ ನೀಡಲಾಗಿದೆ. ನೌಕರರು ಕಡ್ಡಾಯವಾಗಿ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಂಡು ಕರ್ತವ್ಯಕ್ಕೆ ವಾಪಸ್ ಆಗಬೇಕು.
ಬಿಎಂಟಿಸಿಯ ಡಿಪೋಗಳಿಂದ ಈ ಕುರಿತು ಸೂಚನೆ ಬಂದ ಹಿನ್ನಲೆಯಲ್ಲಿ ಚಾಲಕರು ಮತ್ತು ನಿರ್ವಾಹಕರು ಬಿಎಂಟಿಸಿಯ ಆಸ್ಪತ್ರೆಗಳ ಮುಂದೆ ಸಾಲುಗಟ್ಟಿ ನಿಂತಿದ್ದಾರೆ.