ಸಿದ್ದು ದುಬಾರಿ ವಾಚ್ ಮತ್ತು ಬಿಎಸ್ವೈ ಟೊಯೋಟ ಕಾರಿಗೆ ಇರುವ ವ್ಯತ್ಯಾಸ!
ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಸುತ್ತಿದ್ದ ದುಬಾರಿ ಊಬ್ಲೋ ವಾಚ್ ಮತ್ತು ಯಡಿಯೂರಪ್ಪನವರಿಗೆ ಮಾಜಿ ಸಚಿವ ಮುರುಗೇಶ್ ನಿರಾಣಿ ನೀಡಿರುವ ಸುಮಾರು ಒಂದು ಕೋಟಿ ಬೆಲೆಯ ಟೊಯೋಟ ಲ್ಯಾಂಡ್ ಕ್ರೂಸರ್ ಪ್ರಾಡೊ ಕಾರು ಇವೆರಡರ ನಡುವಿನ ವ್ಯತ್ಯಾಸವೇನು?
ಬಿಜೆಪಿ ಮುಖಂಡ ಮತ್ತು ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್ ಪ್ರಕಾರ ಇವರಡರ ನಡುವೆ ಹೋಲಿಕೆ ಮಾಡುವುದೇ ಮೊದಲು ತಪ್ಪು. ಮುಖ್ಯಮಂತ್ರಿಗಳಿಗೆ ವಾಚ್ ವೈಯಕ್ತಿಕವಾಗಿ ಬಂದಂತಹ ಗಿಫ್ಟ್ ಎಂದು ಅಶೋಕ್ ಅಭಿಪ್ರಾಯ ಪಟ್ಟಿದ್ದಾರೆ. (ಯಡಿಯೂರಪ್ಪನವರನ್ನು ವಿವಾದದ ಸುಳಿಗೆ ಸಿಲುಕಿಸಿರುವ ಕಾರು)
ಯಡಿಯೂರಪ್ಪನವರಿಗೆ ನಿರಾಣಿಯವರು ಕಾರ್ ನೀಡಿದ್ದು ಪಕ್ಷ ಸಂಘಟನೆ ಬಲ ಪಡಿಸುವ ಸಲುವಾಗಿ ರಾಜ್ಯ ಪ್ರವಾಸ ಮಾಡಲು, ಹೀಗಾಗಿ ಇವರಡರ ನಡುವೆ ಹೋಲಿಕೆ ಸಲ್ಲದು ಎಂದು ಅಶೋಕ್ ಹೇಳಿದ್ದಾರೆ.
ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡುತ್ತಿದ್ದ ಅಶೋಕ್, ನಾನು ಕೂಡಾ ರಾಜ್ಯಾಧ್ಯಕ್ಷ ಹುದ್ದೆಯ ಆಕಾಂಕ್ಷಿಯಾಗಿದ್ದು ನಿಜ. ಆದರೆ ಆ ಹುದ್ದೆಗೆ ಯಡಿಯೂರಪ್ಪನವರ ಹೆಸರು ಬರುತ್ತಿದ್ದಂತೆಯೇ ನಾನು ಹಿಂದಕ್ಕೆ ಸರಿದೆ ಎಂದಿದ್ದಾರೆ.
ನಾನು ಹುಟ್ಟಿ, ಬೆಳೆದದ್ದು ಬೆಂಗಳೂರಿನಲ್ಲಿ, ಹಾಗಾಗಿ ನಾನು ಮೊದಲು ಪ್ರಾಶಸ್ತ್ಯ ನೀಡುವುದು ಇಲ್ಲಿನ ರಾಜಕೀಯಕ್ಕೆ. ಆದರೆ ರಾಜ್ಯದಲ್ಲಿ ನಡೆಯುವ ಎಲ್ಲಾ ಸಾರ್ವಜನಿಕ ಸಭೆಗೆ ನಾನೇ ಉಸ್ತುವಾರಿ ಎಂದು ಅಶೋಕ್ ಹೇಳಿದ್ದಾರೆ. (ದುಬಾರಿ ಕಾರು ವಾಪಸ್ ಮಾಡಿದ ಬಿಎಸ್ವೈ)
ಹೆಬ್ಬಾಳ ಉಪ ಚುನಾವಣೆಯ ವೇಳೆ ನನ್ನನ್ನು ಕಡೆಗಣಿಸಲಾಯಿತು ಎನ್ನುವ ಮಾತು ತಪ್ಪು. ಕ್ಷೇತ್ರದ ಚುನಾವಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು ನಾನೇ. ಸಿದ್ದು ದುಬಾರಿ ವಾಚ್, ಬಿಎಸ್ವೈ ದುಬಾರಿ ಕಾರಿಗೆ ಇರುವ ವ್ಯತ್ಯಾಸ, ಅಶೋಕ್ ಪ್ರಕಾರ ಏನು? ಸ್ಲೈಡಿನಲ್ಲಿ..
ಅಶೋಕ್ ಹೇಳಿದ್ದು
ಮೂರು ಕ್ಷೇತ್ರಗಳ ಉಪಚುನಾವಣೆಯ ವೇಳೆ ಬೀದರ್ ಕ್ಷೇತ್ರದ ಉಸ್ತುವಾರಿ ವಹಿಸಿಕೊಳ್ಳಲು ಪಕ್ಷ ಆದೇಶಿಸಿತ್ತು, ಆದರೆ ಸೀಮಿತ ಅವಧಿಯಲ್ಲಿ ಅಲ್ಲಿ ಪಕ್ಷ ಸಂಘಟಿಸುವುದು ಕಷ್ಟ ಎನ್ನುವ ಕಾರಣಕ್ಕಾಗಿ ಹೆಬ್ಬಾಳ ಕ್ಷೇತ್ರದ ಉಸ್ತುವಾರಿ ವಹಿಸಿಕೊಳ್ಳುವುದಾಗಿ ಕೇಳಿಕೊಂಡಿದ್ದೆ ಎಂದು ಅಶೋಕ್ ಹೇಳಿದ್ದಾರೆ.
ಸಿದ್ದು ವೈಯಕ್ತಿಕ ಬಳಕೆಗೆ ನೀಡಿದ್ದ ವಾಚ್
ಸಿದ್ದರಾಮಯ್ಯನವರ ವಾಚ್ ವೃತ್ತಾಂತಕ್ಕೂ, ಯಡಿಯೂರಪ್ಪನವರ ಕಾರಿನ ವಿಚಾರಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಸಿದ್ದರಾಮಯ್ಯನವರು ವೈಯಕ್ತಿಕವಾಗಿ ಬಳಸಲು ಅದನ್ನು ಅವರಿಗೆ ಉಡುಗೊರೆಯಾಗಿ ನೀಡಲಾಗಿತ್ತು.
ರಾಜ್ಯಾಧ್ಯಕ್ಷರಿಗಾಗಿ ನೀಡಿದ್ದು
ಯಡಿಯೂರಪ್ಪನವರಿಗೆ ಕಾರ್ ನೀಡಿದ್ದು ಪಕ್ಷದ ಬಳಕೆಗಾಗಿ. ಇದು ದುಬಾರಿ ಬೆಲೆಯ ಕಾರು ಆಗಿರಬಹುದು, ಕಾರಿನ ಮೇಲೆ ಬಿಜೆಪಿಯ ಚಿಹ್ನೆಯಿದೆ. ಇದು ಯಡಿಯೂರಪ್ಪನವರಿಗೆ ನೀಡಲಾಗಿದೆ ಎನ್ನುವುದಕ್ಕಿಂತ ರಾಜ್ಯಾಧ್ಯಕ್ಷರಿಗೆ ನೀಡಿದ್ದು ಎನ್ನುವುದು ಸೂಕ್ತ ಎಂದು ಅಶೋಕ್ ತನ್ನದೇ ಶೈಲಿಯಲ್ಲಿ ಸಮರ್ಥನೆ ನೀಡಿದ್ದಾರೆ.
ಪಕ್ಷ ಸಂಘಟನೆಗಾಗಿ ಬಳಕೆಗೆ
ಇವತ್ತು ಬಿಎಸ್ವೈ ರಾಜ್ಯಾಧ್ಯಕ್ಷರಾಗಿರಬಹುದು, ಮುಂದೊಂದು ದಿನ ಇನ್ನೊಬ್ಬರು ರಾಜ್ಯಾಧ್ಯಕ್ಷರಾಗಿರುತ್ತಾರೆ. ಆಗ ಆ ಕಾರನ್ನು ಅವರು ಬಳಸುತ್ತಾರೆ. ಪಕ್ಷದ ಪರವಾಗಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಯ ಪ್ರವಾಸಕ್ಕೆ ಮಾತ್ರ ಬಳಸಲಾಗುತ್ತದೆ ಎಂದು ಯಡಿಯೂರಪ್ಪ ಹೇಳಿ, ಕಾರನ್ನು ಈಗಾಗಲೇ ನಿರಾಣಿಗೆ ವಾಪಸ್ ಮಾಡಿದ್ದಾರೆ - ಅಶೋಕ್.
ಮುಚ್ಚು ಮರೆಯಿಲ್ಲ
ಕಾರಿನ ವಿಚಾರದಲ್ಲಿ ನಮ್ಮಲ್ಲಿ ಯಾವುದೂ ಮುಚ್ಚುಮರೆಯಿಲ್ಲ. ಸ್ಪಷ್ಟವಾಗಿ ಇದು ಯಡಿಯೂರಪ್ಪನವರಿಗೆ ಉಡುಗೊರೆಯಾಗಿ ನೀಡಿದ್ದಲ್ಲ ಎಂದು ಸ್ಪಷ್ಟೀಕರಣ ನೀಡಲಾಗಿದೆ. ಮುಖ್ಯಮಂತ್ರಿಗಳ ವಾಚ್ ಹಗರಣದ ಹಾಗೇ ಇದರಲ್ಲಿ ಯಾವುದೂ ಮುಚ್ಚು ಮರೆಯಿಲ್ಲ - ಅಶೋಕ್.