Breaking; ಪಕ್ಷ ಬಿಟ್ಟ ತಿಪಟೂರಿನ ಕಾಂಗ್ರೆಸ್ ನಾಯಕ, ಜೆಡಿಎಸ್ಗೆ
ತಿಪಟೂರಿನ ಕಾಂಗ್ರೆಸ್ ನಾಯಕ ಕೆ. ಟಿ. ಶಾಂತಕುಮಾರ್ ಪಕ್ಷ ತೊರೆದಿದ್ದಾರೆ. ಅವರು ಎಚ್. ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಸೇರಲಿದ್ದಾರೆ
ಬೆಂಗಳೂರು, ಫೆಬ್ರವರಿ 03; ತುಮಕೂರು ಜಿಲ್ಲೆಯ ತಿಪಟೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನಾಯಕರೊಬ್ಬರು ಪಕ್ಷ ತೊರೆದಿದ್ದಾರೆ. 2018ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಅವರು ಕಣಕ್ಕಿಳಿಸಿದ್ದರು.
ಕೆ. ಟಿ. ಶಾಂತಕುಮಾರ್ ಕಾಂಗ್ರೆಸ್ ಪಕ್ಷ ಬಿಟ್ಟಿದ್ದು, ಶುಕ್ರವಾರ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ಸೇರಲಿದ್ದಾರೆ.
2018ರ ಚುನಾವಣೆಯಲ್ಲಿಯೇ ಕೆ. ಟಿ. ಶಾಂತಕುಮಾರ್ ವಿವಿಧ ಪಕ್ಷದ ಟಿಕೆಟ್ಗಾಗಿ ಪ್ರಯತ್ನ ನಡೆಸಿದ್ದರು. ಆದರೆ ಯಾವ ಪಕ್ಷದಲ್ಲೂ ಟಿಕೆಟ್ ಸಿಗದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋಲು ಕಂಡಿದ್ದರು.

ಕಳೆದ ಚುನಾವಣೆಯಲ್ಲಿ 13506 ಮತಗಳನ್ನು ಪಡೆದಿದ್ದ ಕೆ. ಟಿ. ಶಾಂತಕುಮಾರ್ ಬಳಿಕ ಕಾಂಗ್ರೆಸ್ ಪಕ್ಷದ ಜೊತೆ ಗುರುತಿಸಿಕೊಂಡಿದ್ದರು. ಆದರೆ ಈಗ ಚುನಾವಣೆ ಹತ್ತಿರವಾಗುತ್ತಿರುವಾಗ ಜೆಡಿಎಸ್ ಸೇರುತ್ತಿದ್ದಾರೆ.
2017ರಲ್ಲಿ ತಿಪಟೂರಿನಲ್ಲಿ ತಮ್ಮ ಕಚೇರಿ ಆರಂಭಿಸಿದ್ದ ಕೆ. ಟಿ. ಶಾಂತ ಕುಮಾರ್, ಯಾವುದೇ ಸಂದರ್ಭದಲ್ಲೂ ನಾನು ಯಾವುದೇ ಪಕ್ಷದಿಂದ ಟಿಕೆಟ್ ಸಿಗದಿದ್ದರೆ 2018ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವುದು ಖಚಿತ ಎಂದು ಹೇಳಿದ್ದರು.
ನನ್ನ ತಾಲೂಕಿನ ಜನಕ್ಕೆ ನನ್ನದೇ ಆದ ಸೇವೆ ಮಾಡುವುದು ಹಾಗೂ ಹೊಸ ಬದಲಾವಣೆ ತರುವುದು ನನ್ನ ಗುರಿ. ಜನರ ತೀರ್ಮಾನ ಅಂತಿಮವಾಗಿರುತ್ತದೆ. ಅವರ ಯಾವುದೇ ತೀರ್ಪಿಗೂ ನಾನು ಚಿರರುಣೆ ಎಂದು ತಿಳಿಸಿದ್ದರು.
ತಿಪಟೂರು ಕ್ಷೇತ್ರದ ಹಾಲಿ ಶಾಸಕರು ಬಿಜೆಪಿಯ ಬಿ. ಸಿ. ನಾಗೇಶ್. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು.
ಕಳೆದ ಚುನಾವಣೆಯಲ್ಲಿ ಬಿ. ಸಿ. ನಾಗೇಶ್ 61,383 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್ನ ಕೆ. ಷಡಕ್ಷರಿ 35,820 ಮತಗಳನ್ನು ಪಡೆದಿದ್ದರು. ಜೆಡಿಎಸ್ನ ಲೋಕೇಶ್ವರ 17,027 ಮತ ಪಡೆದು ಸೋಲು ಕಂಡಿದ್ದರು.












Click it and Unblock the Notifications