'ನನಗೆ ರೇಷ್ಮೆ ಸೀರೆ ಕೊಡ್ಸು ಎಂದ ಮಗಳೇ ಇಲ್ಲ' ಇದು ಅಪ್ಪನ ರೋದನ
ಮಂಡ್ಯ, ಫೆಬ್ರವರಿ,13: 'ನಾನು ಅಂಗಡಿಯೊಂದರಲ್ಲಿ ಕೂಲಿ ಕೆಲಸ ಮಾಡಿ ಮಗನನ್ನು ಓದಿಸುತ್ತಿದ್ದೆ. ಅಪ್ಪಾ, ನಾ ವೈದ್ಯನಾದ ಮೇಲೆ ನಮ್ಮೆಲ್ಲಾ ಕಷ್ಟ ಕಡಿಮೆಯಾಗುತ್ತೆ ಎಂದು ಮಗ ಸದಾ ಹೇಳ್ತಿದ್ದ ಮಗನೇ ಇಲ್ಲ'. 'ಅಪ್ಪಾ, ನನಗೊಂದು ರೇಷ್ಮೆ ಸೀರೆ ಕೊಡಿಸು ಎಂದು ಕೇಳಿದ ಮಗಳೇ ಇಲ್ಲ. ನಾನು ಈಗ ಯಾರಿಗೆ ರೇಷ್ಮೆ ಸೀರೆ ಕೊಡಿಸ್ಲಿ' ಎಂದು ಮಕ್ಕಳನ್ನು ಕಳೆದುಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿರುವ ಇಬ್ಬರು ತಂದೆಯರ ಪ್ರಶ್ನೆಯಿದು.
ನಾಲೆಯಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ನೀರಿನ ರಭಸಕ್ಕೆ ಬೆಂಗಳೂರಿನ ಕಬ್ಬನ್ ಪೇಟೆಯ ಎಸ್. ಜಯರಾಮು ಅವರ ಪುತ್ರ ಜೆ. ಜೀವನ್ (24), ರಾಜಾಜಿನಗರದ ಎಲ್. ಪ್ರಕಾಶ್ ಅವರ ಪುತ್ರಿ ಎಲ್.ಪಿ ಶೃತಿ (23), ತುಮಕೂರಿನ ಗಿರೀಶ್ ಎಂಬ ಮೂವರು ವೈದ್ಯ ವಿದ್ಯಾರ್ಥಿಗಳು ಕೊಚ್ಚಿಹೋಗಿದ್ದು, ಮೂವರ ಮೃತದೇಹ ಪತ್ತೆಯಾಗಿದೆ. [ಸೆಲ್ಫಿ ಮೋಹ ಒಂದು ಮಾನಸಿಕ ಕಾಯಿಲೆ - ಮನಶ್ಶಾಸ್ತ್ರಜ್ಞರು]

ಮಿಮ್ಸ್ ವಿದ್ಯಾರ್ಥಿಗಳಾದ ಐವರಲ್ಲಿ ಮೂವರು ಮಿಮ್ಸ್ ಹಾಸ್ಟೆಲ್ ನಲ್ಲಿದ್ದರು. ವೈದ್ಯ ಶಿಕ್ಷಣ ಮುಗಿಸಿದ ಇವರನ್ನು ಇಂಟರ್ನ್ ಶಿಪ್ ಪ್ರಯುಕ್ತ ಮಂಡ್ಯ ತಾಲೂಕಿನ ಕೆರೆಗೋಡಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗ್ರಾಮೀಣ ಸೇವೆ ಮತ್ತು ತರಬೇತಿಗಾಗಿ ಗುರುವಾರ ನಿಯೋಜಿಸಲಾಗಿತ್ತು.
ಮಂಡ್ಯ ತಾಲೂಕಿನ ಕೆರೆಗೋಡಿಯಿಂದ ವಾಪಸಾಗುವ ವೇಳೆ ಮಾರ್ಗಮಧ್ಯೆ ಕಂಡ ಹುಲಿವಾನ ಹೊರವಲಯದ ವಿಶ್ವೇಶ್ವರಯ್ಯ ನಾಲೆಗೆ ಇಳಿದು ಸೆಲ್ಫಿ ತೆಗೆದುಕೊಂಡು ವಾಟ್ಸಪ್ ಮೂಲಕ ಸ್ನೇಹಿತರಿಗೆ ಕಳುಹಿಸುತ್ತಿದ್ದರು.[ಸೆಲ್ಫಿ ಹುಚ್ಚಿಗೆ ಹುಚ್ಚುಕೋಡಿ ವಿದ್ಯಾರ್ಥಿ ಬಲಿ]
ಎರಡನೇ ದಿನ ಅಂದರೆ ಶುಕ್ರವಾರ ಪುನಃ ಅದೇ ನಾಲೆಗೆ ಹೋಗಿ ಜಲಕ್ರೀಡೆಯಲ್ಲಿ ತೊಡಗಿದ್ದ ವೇಳೆ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದರೂ ಸಹ ನೀರಿಗೆ ಇಳಿದು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಮಂಜುನಾಥ್ ಮತ್ತು ಬಿ. ಸಿಂಧು ಎಂಬುವರು ಪ್ರಾಣಪಾಯದಿಂದ ಪಾರಾಗಿದ್ದಾರೆ.
ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಐವರನ್ನು ಕಂಡ ಗ್ರಾಮಸ್ಥರು ತಕ್ಷಣ ಪ್ರಾಣ ರಕ್ಷಣೆ ಮುಂದಾಗಿ ಅವರಲ್ಲಿ ಸಿಂಧು ಮತ್ತು ಮಂಜುನಾಥ್ ಅವರನ್ನು ರಕ್ಷಿಸಿದರು. ಜೀವನ್. ಶೃತಿ, ಗಿರೀಶ್ ಅವರ ಮರಣೋತ್ತರ ಪರೀಕ್ಷೆ ಮುಂದುವರೆದಿದ್ದು, ಕೆರೆಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೀರಾವರಿ ಇಲಾಖೆಯಿಂದ ಸರಿಯಾದ ಸ್ಪಂದನೆ ಇಲ್ಲ:
ಗಿರೀಶ್ ಮೃತದೇಹಕ್ಕೆ ಶೋಧ ಕಾರ್ಯ ಮುಂದುವರೆದಿದ್ದು, ಆದರೆ ನೀರಾವರಿ ಇಲಾಖೆಯಿಂದ ಸರಿಯಾದ ಸ್ಪಂದನೆ ಸಿಗುತ್ತಿಲ್ಲ ಎಂದು ಗಿರೀಶ್ ಚಿಕ್ಕಪ್ಪ ಮಂಜುನಾಥ್ ಇಲಾಖೆ ಮೇಲೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಗ್ರಾಮಸ್ಥರು ಹಾಗೂ ಪೊಲೀಸರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ನೀರಾವರಿ ಇಲಾಖೆ ತಕರಾರು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.[ಸಮಯಪ್ರಜ್ಞೆ ಮೆರೆದು ಪ್ರಾಣ ಉಳಿಸಿದ ಪೊಲೀಸ್ ಪೇದೆ!]
ಮೃತ ಡಾ. ಜೀವನ್ ತಂದೆ ಹೇಳುವುದೇನು?
ಕೂಲಿ ಮಾಡಿ ಮಗನನ್ನು ವೈದ್ಯನನ್ನಾಗಿ ಮಾಡಿದ್ದೆ. ಈತನಿಂದ ನನ್ನ ಮನೆ ಕಷ್ಟ ನಿವಾರಣೆಯಾಗುತ್ತದೆ ಎಂದು ನಂಬಿದ್ದೆ. ಏನೇ ಬೇಕಾದರೂ ನನಗೆ ಫೋನ್ ಮಾಡಿ ಹೇಳುತ್ತಿದ್ದ. ಆದರೆ ಪಿಕ್ ನಿಕ್ ಗೆ ಹೋಗುವ ವಿಷಯವನ್ನು ಹೇಳಲೇ ಇಲ್ಲ. ಬಡತನ ಎಂಬುದು ನನ್ನ ಪಾಲಿಗೆ ಉಳಿಯಿತು ಎಂದು ಬಿಕ್ಕಿ ಬಿಕ್ಕಿ ಅತ್ತರು.
ಮೃತ ಡಾ. ಶೃತಿ ತಂದೆ ಹೇಳುವುದೇನು?
ಶೃತಿ ಕುಟುಂಬ ತುಂಬಾ ಬಡತನದ ಕುಟುಂಬ. ಈಕೆ ಇನ್ನು ಕೆಲವೇ ದಿನಗಳಲ್ಲಿ ತನ್ನ ಮನದಾಸೆಯಂತೆ, ಹೆತ್ತವರ ಹಂಬಲದಂತೆ ಡಾಕ್ಟರ್ ಆಗುವವಳಿದ್ದಳು. ಅಪ್ಪನಿಗೆ '19ರಂದು ನನಗೆ ವೈದ್ಯಕೀಯ ಪದವಿಯ ಪ್ರಮಾಣ ಪತ್ರ ದೊರಕುವ ಮಹತ್ವದ ದಿನ. ನನಗೆ ಅಂದು ಉಡಲು ರೇಷ್ಮೆ ಸೀರೆ ಕೊಡಿಸುವಿರಾ?" ಎಂದು ಕೇಳಿದ್ದಳು. ಅಲ್ಲದೇ ಆಕೆ ಮೊದಲು ಪಿಕ್ ನಿಕ್ ಗೆ ಹೋಗಲು ಮನಸ್ಸು ಮಾಡಿರಲಿಲ್ಲ. ಸಿಂಧುವಿನ ಒತ್ತಾಯಕ್ಕೆ ಮಣಿದು ಹೋಗಿದ್ದಳು ಎಂದು ಅಳುತ್ತಾರೆ ಶೃತಿ ತಂದೆ. ಶೃತಿಗೆ ಒಬ್ಬಳು ತಂಗಿಯೂ ಇದ್ದಾಳೆ.[ಗರ್ಭಿಣಿ ಪ್ರಿಯತಮೆಯನ್ನು ನದಿಗೆ ತಳ್ಳಿದ ಭೂಪ]
ಗಿರೀಶ್ ಮೃತ ದೇಹ ಪತ್ತೆ
ಶುಕ್ರವಾರ ಸಂಜೆ ನೀರು ಪಾಲಾದ ಮೂವರು ವಿದ್ಯಾರ್ಥಿಗಳಲ್ಲಿ ಇಬ್ಬರು ಶವ ಮಾತ್ರ ಸಿಕ್ಕಿತು. ಆದರೆ ಗಿರೀಶ್ ಶವಕ್ಕಾಗಿ ಶೋಧ ಕಾರ್ಯ ಮುಂದುವರೆದಿತ್ತು. 10 ಜನರ ಈಜುಗಾರರ ಸಹಾಯದಿಂದ ಗಿರೀಶ್ ಮೃತದೇಹ ಪತ್ತೆಯಾಗಿದ್ದು, ಪೋಷಕರ ದುಃಖದ ಕಟ್ಟೆ ಒಡೆದಿದೆ.











Click it and Unblock the Notifications