ಕಾಂಗ್ರೆಸ್ ಸಭೆಯಲ್ಲಿ ಎಸ್ ಟಿ ಸೋಮಶೇಖರ್,ಹೆಬ್ಬಾರ್ ಭಾಗಿ: ಆರ್ ಅಶೋಕ್ ಹೇಳಿದ್ದೇನು?
ಬೆಳಗಾವಿ, ಡಿಸೆಂಬರ್ 14: ಕಾಂಗ್ರೆಸ್ ಶಾಸಕರಿಗೆ ಬುಧವಾರ ರಾತ್ರಿ ಏರ್ಪಡಿಸಿದ ಔತಣಕೂಟದಲ್ಲಿ ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್. ಟಿ ಸೋಮಶೇಖರ್ ಮತ್ತು ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಂ ಹೆಬ್ಬಾರ್ ಅವರು ಭಾಗಿಯಾಗಿದ್ದು, ಕಾಂಗ್ರೆಸ್ ಸೇರ್ಪಡೆಯಾಗುತ್ತಾರಾ ಎಂಬ ಚರ್ಚೆ ಹುಟ್ಟಿಕೊಂಡಿದ್ದು, ಈ ಬಗ್ಗೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಬೆಳಗಾವಿಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಊಟಕ್ಕೆ ಕರೆದಿದ್ದರು ಅದಕ್ಕಾಗಿ ಹೋಗಿದ್ದೆವು ಎಂದು ಎಸ್.ಟಿ.ಸೋಮಶೇಖರ್ ನನ್ನ ಬಳಿ ಹೇಳಿದ್ದಾರೆ. ಆ ದೃಷ್ಟಿಯಿಂದ ಅವರು ಯಾವುದೇ ರೀತಿಯ ಶಿಸ್ತು ಉಲ್ಲಂಘನೆ ಮಾಡಿಲ್ಲ. ನಾನು ಕೂಡ ಈಗಾಗಲೇ ಅವರ ಬಳಿ ಮಾತನಾಡಿದ್ದೇನೆ. ನಿನ್ನೆ ಬಿಜೆಪಿ ಧರಣಿಯಲ್ಲೂ ಅವರು ಭಾಗವಹಿಸಿದ್ದರು. ಆದರೂ ನಾನು ಅವರನ್ನು ಕರೆದು ಮಾತನಾಡುತ್ತೇನೆ. ನಮ್ಮ ಸಭೆಗೆ ಬಂದಿದ್ದರು, ನನ್ನ ಕೊಠಡಿಗೂ ಬಂದು ಮಾತನಾಡಿದ್ದಾರೆ ಎಂದು ಹೇಳಿದರು.

ಇನ್ನೂ ಸಚಿವ ಜಮೀರ್ ಹೇಳಿಕೆ ಕುರಿತು ಮಾತನಾಡಿದ ಅವರು, 69 ನಿಯಮದಡಿ ಚರ್ಚೆಗೆ ಅವಕಾಶ ಕೊಟ್ಟಿದ್ದಾರೆ. ಇಂದು ಚರ್ಚೆ ಮಾಡುತ್ತೇವೆ. ಜಮೀರ್ ಅವರು ಮೇಲ್ಮನೆಯಲ್ಲೂ ಕ್ಷಮಾಪಣೆ ಕೋರಲ್ಲ ಎಂದು ಹೇಳಿದ್ದಾರೆ. ಅವರಿಗೆ ಸಂವಿಧಾನದ ಮೇಲೆ ಕಿಂಚಿತ್ತೂ ಗೌರವ ಇಲ್ಲ. ದೇಶದಲ್ಲಿ ಸರ್ವಾಧಿಕಾರ ತಂದ ಕಾಂಗ್ರೆಸ್ ನವರಿಗೆ ಇದು ಕಾಮನ್ ಆಗಿದೆ. ಸ್ಪೀಕರ್ ಕೂಡ ಜಮೀರ್ ಗೆ ಕ್ಷಮಾಪಣೆ ಕೇಳುವ ಸೂಚನೆ ಕೊಟ್ಟಿಲ್ಲ. ಇದು ಎಲ್ಲರ ದೌರ್ಭಾಗ್ಯ. ಅವರು ಕ್ಷಮಾಪಣೆ ಕೇಳುವವರೆಗೆ ಜನರ ಮುಂದೆ ಈ ವಿಚಾರ ಇಡುತ್ತಾ ಇರುತ್ತೇವೆ. ಇದಕ್ಕೆ ಒಂದು ತಾರ್ಕಿಕ ಅಂತ್ಯ ಸಿಗಲೇಬೇಕು.
ಬಿಜೆಪಿ ಹೋರಾಟಕ್ಕೆ ಡಿಕೆಶಿ ವಿರೋಧ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಡಿ ಕೆ ಶಿವಕುಮಾರ್ ಗೆ ಈ ಬಗ್ಗೆ ಹೇಳುವ ನೈತಿಕತೆ ಇಲ್ಲ. ಶಾಸಕರು ವಿಧಾನಸೌಧದಲ್ಲಿ ಮಾತ್ರವಲ್ಲ ಹೊರಗಡೆಯೂ ಹೋರಾಟ ಮಾಡಬೇಕು ಎನ್ನುವ ಸಾಮಾನ್ಯ ಜ್ಞಾನ ಡಿ ಕೆ ಶಿವಕುಮಾರ್ ಗೆ ಇರಬೇಕು. ಬಿಜೆಪಿಯ ಹೋರಾಟ ಮಾಡಿದರೆ ಸರ್ಕಾರ ಬಿದ್ದು ಹೋಗುತ್ತೆ ಎಂಬ ಭಯ ಅವರನ್ನು ಕಾಡುತ್ತಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ನಲ್ಲಿ ಗೊಂದಲ ಎದ್ದು ಕಾಣುತ್ತಿದೆ. ಬಿಕೆ ಹರಿಪ್ರಸಾದ್ ಹೇಳಿಕೆಯಿಂದ ಇದು ಗೊತ್ತಾಗುತ್ತಿದೆ. ಸಿದ್ದರಾಮಯ್ಯ ರನ್ನು ಬಿಟ್ಟು ಡಿಕೆಶಿಯನ್ನು ಸಿಎಂರಾಗಿ ಮಾಡುತ್ತೇನೆ ಎಂದು ಕೆಲವರು ಹೇಳಿಕೆ ಕೊಡುತ್ತಿದ್ದಾರೆ. ಸಭೆ, ಪ್ರತಿಭಟನೆ ಮಾಡುವುದು ತಪ್ಪು ಎಂದು ಹೇಳಲು ಡಿ ಕೆ ಶಿವಕುಮಾರ್ ಯಾರು?ಅವರ ಅನುಮತಿಯನ್ನು ಪಡೆದುಕೊಳ್ಳಬೇಕಾ? ಡಿ ಕೆ ಶಿವಕುಮಾರ್ ಕೇಸ್ ವಾಪಸ್ ಕೂಡ ಚರ್ಚೆಗೆ ತೆಗೆದುಕೊಳ್ಳುತ್ತೇವೆ. ಹಿರಿಯರ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹೇಳಿದರು.












Click it and Unblock the Notifications