ಗದ್ದಲದ ನಡುವೆಯೇ ಪರಿಷತ್ತಿನಲ್ಲಿ 3 ವಿಧೇಯಕಗಳಿಗೆ ಒಪ್ಪಿಗೆ
ಬೆಂಗಳೂರು, ಜುಲೈ 14 : ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ವಿಚಾರದಲ್ಲಿ ವಿಧಾನಪರಿಷತ್ತಿನಲ್ಲಿ ಇಂದು ಕೋಲಾಹಲ ಉಂಟಾಯಿತು. ಒಂದು ಗಂಟೆ ಕಾಲವೂ ಕಲಾಪ ನಡೆಯಲಿಲ್ಲ. ವಿರೋಧ ಪಕ್ಷಗಳ ಪ್ರತಿಭಟನೆ ನಡುವೆಯೇ 3 ವಿಧೇಯಕಗಳಿಗೆ ಅನುಮೋದನೆ ನೀಡಲಾಯಿತು.
ಗುರುವಾರದ ಕಲಾಪ ಆರಂಭವಾಗುತ್ತಿದ್ದಂತೆ ವಿಧಾನಪರಿಷತ್ತಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದ ಬಗ್ಗೆ ಉತ್ತರ ನೀಡಲು ಎದ್ದು ನಿಂತರು. ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯರು 'ಇದು ಕೊಲೆಗಡುಕ ಸರ್ಕಾರ' ಎಂದು ಘೋಷಣೆ ಕೂಗಿದರು. [ಸದನದಲ್ಲಿ ಶುಕ್ರವಾರ ಏನಾಯ್ತು?]

ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರು, 'ಮೊದಲು ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ಪಡೆಯಿರಿ, ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿ, ನಂತರ ಉತ್ತರ ಕೊಡಿ' ಎಂದು ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು. [ಸಚಿವ ಕೆಜೆ ಜಾರ್ಜ್ ಗೆ ಹೈಕಮಾಂಡ್ ಬುಲಾವ್]
ಈ ಸಂದರ್ಭದಲ್ಲಿ ಈಶ್ವರಪ್ಪ-ಸಿದ್ದರಾಮಯ್ಯ ನಡುವೆ ಮಾತಿನ ಚಕಮಕಿ ನಡೆಯಿತು. 'ಈಶ್ವರಪ್ಪ ಅವರನ್ನು ಸದನದಿಂದ ಹೊರಹಾಕಿ' ಎಂದು ಸಿದ್ದರಾಮಯ್ಯ ಹೇಳಿದರು. 'ನನ್ನನ್ನು ಹೊರಹಾಕಲು ಹೇಳಲು ನೀವು ಯಾರು?, ಅದನ್ನು ಸಭಾಪತಿಗಳು ಹೇಳಲಿ' ಎಂದು ಈಶ್ವರಪ್ಪ ತಿರುಗೇಟು ಕೊಟ್ಟರು. [ಗಣಪತಿ ಆತ್ಮಹತ್ಯೆ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ]
ವಿಪಕ್ಷಗಳ ಗದ್ದಲ ತೀವ್ರಗೊಂಡಿದ್ದರಿಂದ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರ ಕಲಾಪವನ್ನು 20 ನಿಮಿಷಗಳ ಕಾಲ ಮುಂದೂಡಿದರು. ಪುನಃ ಕಲಾಪ ಆರಂಭವಾದರೂ ಗದ್ದಲ ಮುಂದುವರೆಯಿತು. ಗದ್ದಲದ ನಡುವೆ ಮೂರು ವಿಧೇಯಕ ಮಂಡನೆ ಮಾಡಲು ಸಭಾಪತಿಗಳು ಅವಕಾಶ ನೀಡಿದರು.
ಬಿಜೆಪಿ ಮತ್ತು ಜೆಡಿಎಸ್ ಸದಸ್ಯರ ಪ್ರತಿಭಟನೆಗಳ ನಡುವೆಯೇ ರಾಜ್ಯ ಕಾನೂನು ವಿಶ್ವವಿದ್ಯಾಲಯ ತಿದ್ದುಪಡಿ ವಿಧೇಯಕ, ಕರ್ನಾಟಕ ರಾಜ್ಯ ಸಹಕಾರಿ ಸಂಘ ತಿದ್ದುಪಡಿ ವಿಧೇಯಕ, ಆರ್ಡಿಪಿಆರ್ ಇಲಾಖೆ ತಿದ್ದುಪಡಿ ವಿಧೇಯಕಗಳನ್ನು ಪರಿಷತ್ತಿನಲ್ಲಿ ಅಂಗೀಕರಿಸಲಾಯಿತು. ಬಳಿಕ ಕಲಾಪವನ್ನು ಶುಕ್ರವಾರ ಬೆಳಗ್ಗೆ 11ಗಂಟೆಗೆ ಮುಂದೂಡಲಾಯಿತು.












Click it and Unblock the Notifications