ಶೌಚಾಲಯಕ್ಕಾಗಿ ಉಪವಾಸ ಕುಳಿತ ವಿದ್ಯಾರ್ಥಿನಿ ಮಲ್ಲಮ್ಮ!
ಕೊಪ್ಪಳ, ಜುಲೈ 14 : ಮನೆಯಲ್ಲಿ ಶೌಚಾಲಯ ಕಟ್ಟಿಸಲು ನಿರಾಕರಿಸಿದ್ದಕ್ಕೆ ಮಲ್ಲಮ್ಮ ಎಂಬ ವಿದ್ಯಾರ್ಥಿನಿ ಉಪವಾಸ ಕುಳಿತ ಘಟನೆ ಕೊಪ್ಪಳದಲ್ಲಿ ನಡೆದಿದೆ. ಒಂದು ವಾರದೊಳಗಾಗಿ ಮನೆಯಲ್ಲಿ ಶೌಚಾಲಯ ನಿರ್ಮಿಸಲು ನೆರವು ನೀಡುವುದಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಮಲ್ಲಮ್ಮ ಗಂಗಾವತಿ ತಾಲೂಕು ಡಣಾಪುರ ಗ್ರಾಮದ ನಿವಾಸಿ ಸಣ್ಣ ನಿಂಗಮ್ಮ ಅವರ ಪುತ್ರಿ. 10ನೇ ತರಗತಿ ವಿದ್ಯಾರ್ಥಿನಿಯಾದ ಮಲ್ಲಮ್ಮ ಮನೆಯವರ ವಿರುದ್ಧವೇ ಉಪವಾಸ ಸತ್ಯಾಗ್ರಹ ಮಾಡಿ, ಎಲ್ಲರ ಗಮನ ಸೆಳೆದಿದ್ದಾಳೆ. ತನ್ನ ಬೇಡಿಕೆಯನ್ನು ಈಡೇರಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿದ್ದಾಳೆ. [ಶೌಚಾಲಯ ಕಟ್ಟಿಸಿಕೊಳ್ಳಿ ಎಂದು ಕಾಲಿಗೆ ಬಿದ್ದ ಗ್ರಾ.ಪಂ ಅಧ್ಯಕ್ಷ]
ಕೊಪ್ಪಳ ಜಿಲ್ಲೆಯನ್ನು ಈ ವರ್ಷಾಂತ್ಯದೊಳಗೆ ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿಸುವ ಗುರಿ ಇದೆ. ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು, ಇತರೆ ಅಧಿಕಾರಿಗಳ ಜೊತೆ ಗ್ರಾಮಗಳಲ್ಲಿ ಕೈಗೊಳ್ಳುವ ಜಾಗೃತಿ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸಲು ಗುರುವಾರ ಡಣಾಪುರ ಗ್ರಾಮಕ್ಕೆ ಭೇಟಿ ನೀಡಿದ್ದರು. [ಮೈಸೂರಲ್ಲಿ ಶತಾಯುಷಿ ಬೋರಜ್ಜಿಯ ಶೌಚಾಲಯ ಅಭಿಯಾನ]

ಈ ಸಂದರ್ಭದಲ್ಲಿ ಸಣ್ಣನಿಂಗಮ್ಮ ಅವರ ಮನೆಗೆ ಭೇಟಿ ನೀಡಿದಾಗ, ಸಣ್ಣ ನಿಂಗಮ್ಮ ಅವರ ಮಗಳು ಮಲ್ಲಮ್ಮ ಶೌಚಾಲಯ ಕಟ್ಟಿಸುವಂತೆ ಒತ್ತಾಯಿಸಿ, ಉಪವಾಸ ಸತ್ಯಾಗ್ರಹ ಕೈಗೊಂಡ ವಿಷಯ ಬೆಳಕಿಗೆ ಬಂದಿದೆ. ಮನೆಯಲ್ಲಿ ಶೌಚಾಲಯ ಕಟ್ಟಿಸುವಂತೆ ಮೊದಲಿನಿಂದಲೂ ಮಲ್ಲಮ್ಮ ಬೇಡಿಕೆ ಇಟ್ಟಿದ್ದಳು. [ಪಬ್ಲಿಕ್ ಟಾಯ್ಲೆಟ್ ನಿರ್ಮಾಣದಲ್ಲಿ ಕರ್ನಾಟಕ ನಂ.5]
ಈ ಕುರಿತು ತನ್ನ ತಾಯಿಗೆ ಹೇಳಿದ್ದಳು. ಆದರೆ, ಬಡತನ ಹಾಗೂ ಸ್ಥಳದ ಅಭಾವದ ಕಾರಣ ಶೌಚಾಲಯ ಕಟ್ಟಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ನೊಂದ ಮಲ್ಲಮ್ಮ ಶೌಚಾಲಯ ಕಟ್ಟಿಸಲು ಒಪ್ಪುವವರೆಗೂ ಉಪವಾಸ ಮಾಡುವುದಾಗಿ ತಾಯಿಗೆ ಹೇಳಿದ್ದಾಳೆ. ಅಷ್ಟೇ ಅಲ್ಲದೆ ಅದನ್ನು ಕಾರ್ಯರೂಪಕ್ಕೂ ತಂದಿದ್ದಾಳೆ. [ಶೌಚಾಲಯ ನಿರ್ಮಾಣಕ್ಕೆ ನೀಡುವ ಸಹಾಯಧನ ಹೆಚ್ಚಳ]
ಈ ವಿಷಯ ತಿಳಿದ ಆರ್. ರಾಮಚಂದ್ರನ್ ಅವರು ಹರ್ಷ ವ್ಯಕ್ತಪಡಿಸಿ, ಖುದ್ದು ಮಲ್ಲಮ್ಮಳನ್ನು ಭೇಟಿಯಾಗಿ ಮಾತನಾಡಿದ್ದಾರೆ. ಅಲ್ಲದೆ ಸ್ವಚ್ಛತೆ ಹಾಗೂ ಶೌಚಾಲಯದ ಅಗತ್ಯತೆ ಕುರಿತು ಕುಟುಂಬದವರಿಗೆ ಅರಿವು ಮೂಡಿಸಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದರು.
ಸ್ಥಳದ ಅಭಾವಕ್ಕೂ ಕೂಡ ಅಲ್ಲಿಯೇ ಪರಿಹಾರವನ್ನು ಸೂಚಿಸಿ, ಒಂದು ವಾರದೊಳಗಾಗಿ ವೈಯಕ್ತಿಕ ಶೌಚಾಲಯ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಶೌಚಾಲಯ ಕಟ್ಟಿಸಿಕೊಳ್ಳಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸರ್ಕಾರ 15 ಸಾವಿರ ರೂ.ಗಳ ಪ್ರೋತ್ಸಾಹಧನ ದೊರೆಯಲಿದೆ.
ಡಣಾಪುರ ಗ್ರಾಮ ಪಂಚಾಯತಿಯು ಹೆಬ್ಬಾಳ, ಹೆಬ್ಬಾಳ ಕ್ಯಾಂಪ್, ಮಡ್ಡಿಕ್ಯಾಂಪ್ ಮತ್ತು ಮಾರುತಿ ನಗರವನ್ನು ಒಳಗೊಂಡಿದ್ದು, ಇಲ್ಲಿ ಒಟ್ಟು 1,497 ಕುಟುಂಬಗಳಿವೆ. ಈವರೆಗೂ 759 ಕುಟುಂಬಗಳು ಮಾತ್ರ ಶೌಚಾಲಯ ಹೊಂದಿದ್ದು, ಅದನ್ನು ಬಳಕೆ ಮಾಡುತ್ತಿದ್ದಾರೆ. ಉಳಿದ 738 ಕುಟುಂಬಗಳು ಶೀಘ್ರ ನಿರ್ಮಿಸಿಕೊಳ್ಳುವುದಾಗಿ ಒಪ್ಪಿಗೆ ಸೂಚಿಸಿದ್ದಾರೆ. [ಮಾಹಿತಿ : ಕರ್ನಾಟಕ ವಾರ್ತೆ]












Click it and Unblock the Notifications