ಕಾಂಗ್ರೆಸ್ನಿಂದಲೇ ಸಿಎಂ ಸಿದ್ದರಾಮಯ್ಯ ರಾಜೀನಾಮೆಯ ಸುಳಿವು ಕೊಟ್ಟ ಅಂಶಗಳಿವು..
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸಿಎಂ ಸಿದ್ದರಾಮಯ್ಯ ಅವರ ಕುರ್ಚಿ ಅಲುಗಾಡುತ್ತಿದೆ. ಒಂದೆಡೆ ವಿಪಕ್ಷಗಳಿಂದ ಸಿಎಂ ರಾಜೀನಾಮೆಗೆ ಆಗ್ರಹ ಕೇಳಿಬಂದಿದೆ. ಸ್ವಪಕ್ಷದಲ್ಲಿ ನಾನೇ ಸಿಎಂ ಎನ್ನುವವರ ಸಂಖ್ಯೆಯೂ ಹೆಚ್ಚಾಗಿದೆ. ಮತ್ತೊಂದೆಡೆ ಸಿಎಂ ವಿರುದ್ಧ ದಾಖಲಾಗಿರುವ ಎಫ್ಐಆರ್, ಎ1 ಆರೋಪಿ ಪಟ್ಟ ಕೂಡ ಸಿದ್ದರಾಮಯ್ಯ ಅವರ ಕುರ್ಚಿಯನ್ನು ಅಲುಗಾಡಿಸುತ್ತಿದೆ. ಈ ಸುಳಿಯಿಂದ ಪಾರಾಗುವುದೇ ಸಿದ್ದರಾಮಯ್ಯ ಅವರಿಗೆ ಈಗಿರುವ ಸವಾಲಾಗಿದೆ.
ಮೊದಲಿಗೆ ಸಿಎಂ ರಾಜೀನಾಮೆಗೆ ವಿಪಕ್ಷಗಳಾದ ಬಿಜೆಪಿ-ಜೆಡಿಎಸ್ನಿಂದ ಮಾತ್ರ ಒತ್ತಾಯ ಕೇಳಿಬಂದಿತ್ತು. ಆದರೆ, ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ, ಕಾಂಗ್ರೆಸ್ ಕೂಡ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಬೇಕು ಎಂದು ನಿರ್ಧರಿಸಿದೆಯೇ? ಎನ್ನುವ ಅನುಮಾನಗಳನ್ನು ಹುಟ್ಟುಹಾಕಿದೆ.

ಇದಕ್ಕೆ ಪುಷ್ಟಿ ನೀಡುವಂತಹ ಬೆಳವಣಿಗೆಗಳು ಕಾಂಗ್ರೆಸ್ನಲ್ಲೇ ನಡೆದಿರುವುದನ್ನು ನಾವು ಗಮನಿಸಬಹುದು. ಮುಡಾ ಕೇಸ್ ಸಿದ್ದರಾಮಯ್ಯ ಅವರನ್ನು ಸುತ್ತಿಕೊಂಡಾಗ ಮೊದಲಿಗೆ ಕಾಂಗ್ರೆಸ್ ಶಾಸಕರು, ಸಚಿವರು, ಸಂಸದರು ಹಾಗೂ ಹೈಕಮಾಂಡ್ ಕೂಡ ಒಗ್ಗಟ್ಟು ಪ್ರದರ್ಶಿಸಿತ್ತು. ನಾವೆಲ್ಲ ಸಿದ್ದರಾಮಯ್ಯ ಅವರ ಬೆಂಬಲಕ್ಕಿದ್ದೇವೆ ಎನ್ನುವ ಸಂದೇಶ ಕೂಡ ಸಾರಿತ್ತು. ಇದರಿಂದ ಮೊದಲಿಗೆ ಸಿದ್ದರಾಮಯ್ಯ ಅವರಿಗೆ ಆನೆಬಲ ಬಂದಿದ್ದಂತೂ ನಿಜ.
ಇದರ ನಡುವೆಯೇ ರಾಜ್ಯ ಕಾಂಗ್ರೆಸ್ನಲ್ಲಿ ಸಿಎಂ ಆಗಬೇಕು ಎನ್ನುವವರ ಪಟ್ಟಿ ಹೆಚ್ಚುತ್ತಾ ಹೋಯಿತು. ಮೊದಲಿನಿಂದಲೂ ಡಿಸಿಎಂ ಡಿ.ಕೆ.ಶಿವಕುಮಾರ್, ಜಿ.ಪರಮೇಶ್ವರ್ ಅವರ ಹೆಸರುಗಳು ಮಾತ್ರ ಸಿಎಂ ರೇಸ್ನಲ್ಲಿ ಸದ್ದು ಮಾಡುತ್ತಿತ್ತು. ಆದರೆ, ಈಗ ಎಂ.ಬಿ.ಪಾಟೀಲ್, ಆರ್.ವಿ.ದೇಶಪಾಂಡೆ ಸೇರಿದಂತೆ ಹಲವು ನಾಯಕರು ನಾನು ಕೂಡ ಸಿಎಂ ಆಗಬೇಕೆಂದಿದ್ದೇನೆ ಎಂದು ಇಂಗಿತ ವ್ಯಕ್ತಪಡಿಸಿದ್ದರು.

ಡಿಕೆಶಿ ಹೇಳಿಕೆ: ಸಿಎಂ ಆಕಾಂಕ್ಷಿಗಳ ಪಟ್ಟಿ ಹೆಚ್ಚಿದ್ದೇ, ಕಾಂಗ್ರೆಸ್ನಲ್ಲಿ ಸಿಎಂ ಕುರ್ಚಿ ಬದಲಾಗಲಿದೆ ಎನ್ನುವ ಮಾತು ಮತ್ತಷ್ಟು ಬಲವಾಯಿತು. ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ಇತ್ತೀಚೆಗೆ ತಾವು ಸಿಎಂ ಆಗಬೇಕು ಎನ್ನುವ ಅರ್ಥದಲ್ಲೇ ಮಾತನಾಡಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಗುಸುಗುಸು ಶುರುವಾಗಿದೆ. ಕನಕಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ನೀಡಿರುವ ಹೇಳಿಕೆಯು ಇದೇ ಅರ್ಥವನ್ನು ಹೋಲುವಂತಿತ್ತು.
ಕ್ಷೇತ್ರದ ಜನ ನನಗೆ ಆಶೀರ್ವಾದ ಮಾಡಿದ್ದಾರೆ. ರಾಜ್ಯದ ಸೇವೆ ಮಾಡಬೇಕು ಎಂದು ದೊಡ್ಡ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಹೋರಾಟ ಕೂಡ ನಡೆಯುತ್ತಿದೆ, ಈಗ ನಾನೇನಾದರೂ ಇದರ ಬಗ್ಗೆ ಮಾತನಾಡಿದರೆ ಬೇರೆ ರೀತಿಯಲ್ಲಿ ಬಿಂಬಿಸಲಾಗುತ್ತದೆ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದರು. ಸಿಎಂ ಸಿದ್ದರಾಮಯ್ಯ ಅವರ ಸಂಕಷ್ಟದ ಸಮಯದಲ್ಲೇ ಡಿಕೆಶಿ ಅವರ ಈ ಹೇಳಿಕೆಯು ಸಿಎಂ ಬದಲಾವಣೆಯ ಸುಳಿವು ನೀಡುವಂತಿತ್ತು.
ಕಳೆದ ವಿಧಾನಸಭಾ ಚುನಾವಣೆ ವೇಳೆಯೇ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಬಹಿರಂಗವಾಗಿಯೇ ಸ್ಪರ್ಧೆ ನಡೆದಿತ್ತು. ದೆಹಲಿಯಲ್ಲಿ ಎರಡೂ ನಾಯಕರ ಬಣಗಳು ಬೀಡಿಬಿಟ್ಟು, ಸಿಎಂ ಸ್ಥಾನಕ್ಕೆ ಪಟ್ಟು ಹಿಡಿದಿದ್ದವು. ಕೊನೆಗೆ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನೇ ಸಿಎಂ ಎಂದು ಘೋಷಿಸಿ, ಡಿ.ಕೆ.ಶಿವಕುಮಾರ್ ಅವರಿಗೆ ಡಿಸಿಎಂ ಸ್ಥಾನ ನೀಡಿತ್ತು.
ಖರ್ಗೆ ಹೇಳಿಕೆ: ಕಾಂಗ್ರೆಸ್ ಪಕ್ಷದ ಕುರಿತು ಇತ್ತೀಚೆಗೆ ಹೇಳಿಕೆ ನೀಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಸಿಎಂ ಸಿದ್ದರಾಮಯ್ಯ ಅವರು ಇವತ್ತು ಇರಬಹುದು, ನಾಳೆ ಇಲ್ಲದೆ ಇರಬಹುದು. ಆದರೆ, ಕಾಂಗ್ರೆಸ್ ಪಕ್ಷ ಎಂದಿನಂತೆ ಮುಂದುವರಿಯುತ್ತದೆ ಎಂದಿದ್ದರು. ಈ ಹೇಳಿಕೆಯು ಕಾಂಗ್ರೆಸ್ಗೆ ಸಿದ್ದರಾಮಯ್ಯ ಅವರ ಅನಿವಾರ್ಯತೆ ಇಲ್ಲ ಎಂಬರ್ಥವನ್ನೇ ನೀಡುವಂತಿತ್ತು.
ಸ್ವಪಕ್ಷದವರ ಅಸಮಾಧಾನ: ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ಅವರು ಮುಡಾ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದ ಕಾರಣ, ಇದು ಈ ಮಟ್ಟಕ್ಕೆ ತಲುಪಿತು. ಇದಕ್ಕೆ ಸಿಎಂ ಹಾಗೂ ಅವರ ನಿರ್ಲಕ್ಷ್ಯವೇ ಕಾರಣ ಎಂದು ಸ್ವಪಕ್ಷದ ನಾಯಕರೇ ಅಪಸ್ವರ ಎತ್ತಿದ್ದಾರೆ ಎಂದು ವರದಿಯಾಗಿದೆ. ಸಿಎಂ ಪರ ವಕೀಲರು ಕೂಡ ಬಲವಾದ ವಾಡ ಮಾಡುತ್ತಿಲ್ಲ. ಈ ಎಲ್ಲ ಕಾರಣಗಳಿಂದ ಸಿದ್ದರಾಮಯ್ಯ ವಿರುದ್ಧ ಸ್ವಪಕ್ಷದಲ್ಲೇ ಸಮಾಧಾನ ಸ್ಫೋಟಗೊಂಡಿದೆ. ಮತ್ತೊಂದಡೆ ಸಿದ್ದರಾಮಯ್ಯ ಅವರು ಕುರ್ಚಿಯಿಂದ ಇಳಿಯಲು ಇದು ಸಕಾಲ ಎನ್ನುವಂತಹ ನಾಯಕರ ಹೇಳಿಕೆಗಳಿಂದ ಸಿದ್ದರಾಮಯ್ಯ ಅವರ ಕುರ್ಚಿ ಅಲುಗಾಟ ಮತ್ತಷ್ಟು ತೀವ್ರಗೊಂಡಿದೆ.












Click it and Unblock the Notifications