'ರಮ್ಯಾ ಹೇಳಿಕೆಯಲ್ಲಿ ಯಾವುದೇ ತಪ್ಪು ಕಾಣುತ್ತಿಲ್ಲ'
ಬೆಂಗಳೂರು, ಆಗಸ್ಟ್ 25 : 'ರಮ್ಯಾ ಅವರು ನೀಡಿರುವ ಹೇಳಿಕೆಯಲ್ಲಿ ಯಾವುದೇ ತಪ್ಪು ಕಾಣುತ್ತಿಲ್ಲ. ಅವರು ಈಗಾಗಲೇ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ' ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದರು.
ಬುಧವಾರ ದೆಹಲಿಯಲ್ಲಿ ಮಾತನಾಡಿದ ದೇವೇಗೌಡ ಅವರು, 'ಪಾಕಿಸ್ತಾನದಲ್ಲೂ ಒಳ್ಳೆಯ ಜನರಿದ್ದಾರೆ. ಭಾರತದೊಂದಿಗೆ ಸೌಹಾರ್ದಯುತವಾದ ಸಂಬಂಧವನ್ನು ಬಯಸುತ್ತಾರೆ. ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಪಾಕ್ಗೆ ಸಾರಿಗೆ ಸಂಪರ್ಕ ಕಲ್ಪಿಸಿದ್ದರು' ಎಂದರು.[ಪಾಕಿಸ್ತಾನ ಪತ್ರಿಕೆಗಳಲ್ಲಿ ಸುದ್ದಿಯಾದ ರಮ್ಯಾ]
'ಎರಡೂ ದೇಶಗಳ ಮೂಲಭೂತವಾದಿಗಳಿಂದ ಸಂಬಂಧ ಹದಗೆಟ್ಟಿದೆ. ರಮ್ಯಾ ಅವರು ನೀಡಿರುವ ಹೇಳಿಕೆಯಲ್ಲೂ ಯಾವುದೇ ತಪ್ಪು ಕಾಣುತ್ತಿಲ್ಲ. ಅವರು ಈಗಾಗಲೇ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ' ಎಂದು ದೇವೇಗೌಡರು ಹೇಳಿದರು.[ಪಾಕಿಸ್ತಾನ ನರಕವಲ್ಲ, ನನ್ನ ಹೇಳಿಕೆ ಬದ್ಧಳಾಗಿದ್ದೇನೆ: ರಮ್ಯಾ ಲೇಖನ]
'ರಾಜಕಾರಣಿಗಳಿಗೆ ಇರುವುದು ಅಧಿಕಾರದ ಭಕ್ತಿ. ತ್ರೇತಾಯುಗದ ರಾಮನ ಪಾದುಕೆ ತಂದು ರಾಜಕೀಯ ಮಾಡಿದರು. ದೇಶಾದ್ಯಂತ ರಥಯಾತ್ರೆ ಮಾಡಿದರು. ಇವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ?' ಎಂದು ಪ್ರಶ್ನಿಸಿದರು.[ರಕ್ಷಣಾ ಸಚಿವರು ಹೇಳಿದಂತೆ ಪಾಕಿಸ್ತಾನವಿಲ್ಲ : ರಮ್ಯಾ]
ರಮ್ಯಾ ಹೇಳಿದ್ದೇನು? : ಶನಿವಾರ ಮಂಡ್ಯದಲ್ಲಿ ಮಾತನಾಡಿದ್ದ ರಮ್ಯಾ ಅವರು, 'ಪಾಕಿಸ್ತಾನಕ್ಕೆ ಹೋದರೆ ನರಕಕ್ಕೆ ಹೋದಂತೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಹೇಳಿದ್ದಾರೆ. ಆದರೆ, ಪಾಕಿಸ್ತಾನದಲ್ಲಿ ನಡೆದ ಸಾರ್ಕ್ ಯುವ ಸಂಸದರ ಹಾಗೂ ತಜ್ಞರ ಸಮ್ಮೇಳನದಲ್ಲಿ ಭಾಗವಹಿಸಿದ ನನ್ನ ಅನುಭವ ಚೆನ್ನಾಗಿಯೇ ಇತ್ತು. ರಕ್ಷಣಾ ಸಚಿವರು ಹೇಳಿದಂತೆ ಪಾಕಿಸ್ತಾನ ಇಲ್ಲ. ಅಲ್ಲಿಯೂ ಒಳ್ಳೆಯವರಿದ್ದಾರೆ' ಎಂದು ಹೇಳಿದ್ದರು.
ಮಾಜಿ ಸಂಸದೆ ರಮ್ಯಾ ಅವರು ಪಾಕಿಸ್ತಾನದ ಪರ ನೀಡಿರುವ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಬಿಜೆಪಿ ನಾಯಕರು ರಮ್ಯಾ ಹೇಳಿಕೆಯನ್ನು ಖಂಡಿಸಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ರಮ್ಯಾ ವಿರುದ್ಧ ಕೋರ್ಟ್ನಲ್ಲಿ ಖಾಸಗಿ ದೂರು ಸಲ್ಲಿಕೆಯಾಗಿದೆ.