ಕರ್ನಾಟಕದ ಒಂದಿಂಚೂ ಜಾಗವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಬಸವರಾಜ ಬೊಮ್ಮಾಯಿ
ಬೆಳಗಾವಿ , ಡಿಸೆಂಬರ್ 27: ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿರುವ ನಿರ್ಣಯವನ್ನು ಖಂಡಿಸುವುದಾಗಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮಂಗಳವಾರ ಈ ಕುರಿತು ಸುವರ್ಣಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಪುನರ್ ರಚನಾ ಕಾಯ್ದೆ 1956 ರಲ್ಲಿ ರೂಪಿಸಿ ಇಷ್ಟು ವರ್ಷಗಳಾಗಿವೆ. ಎರಡೂ ಕಡೆ ಜನ ನೆಮ್ಮದಿಯಿಂದಿದ್ದಾರೆ. ಅವರ ರಾಜಕಾರಣಕ್ಕಾಗಿ ಈ ರೀತಿ ಯ ಹೇಳಿಕೆಗಳನ್ನು ಹಾಗೂ ನಿರ್ಣಯಗಳನ್ನು ನೀಡುತ್ತಿದ್ದಾರೆ. ನಮ್ಮ ನಿಲುವಿನಲ್ಲಿ ಸ್ಪಷ್ಟತೆ ಇದೆ. ಕರ್ನಾಟಕದ ಒಂದಿಂಚೂ ಜಾಗವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಗಡಿಯಿಂದಾಚೆಯಿರುವ ಕನ್ನಡಿಗರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಇನ್ನೂ ಸುಪ್ರೀಂ ಕೋರ್ಟಿನಲ್ಲಿ ವಿಚಾರ ವಿದೆ. ನಾವು ನಮ್ಮ ಭೂಮಿಯನ್ನು ಬಿಟ್ಟು ಕೊಡುವುದಿಲ್ಲ ಎಂದರೆ ಅವರು ನಮ್ಮ ಜಾಗವನ್ನು ಪಡೆಯುವುದಾಗಿ ನಿರ್ಣಯ ಮಂಡಿಸಿದ್ದಾರೆ. ಇದು ನಮಗೂ ಅವರಿಗಿರುವ ವ್ಯತ್ಯಾಸ. ಪ್ರಕರಣ ಸರ್ವೋಚ್ಚ ನ್ಯಾಯಾಲಯದಲ್ಲಿರುವ ಸಂದರ್ಭದಲ್ಲಿ ಇದಕ್ಕೆ ಬೆಲೆ ಇಲ್ಲ. ರಾಜ್ಯಕ್ಕೆ ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯ ದೊರೆಯುವ ವಿಶ್ವಾಸವಿದೆ.

ನಮ್ಮ ನಿಲುವು ಸಂವಿಧಾನಬದ್ದ ಹಾಗೂ ನ್ಯಾಯಸಮ್ಮತವಾಗಿದೆ. ಕಾನೂನಿನ ವ್ಯಾಪ್ತಿಯಲ್ಲಿ ನಮ್ಮ ನಿರ್ಣಯವೂ ಇದೆ. ವ್ಯತಿರಿಕ್ತವಾದ ಮಹಾರಾಷ್ಟ್ರದ ನಿರ್ಣಯ ಜವಾಬ್ದಾರಿಯುತವಲ್ಲ. ಇಡೀ ದೇಶ ಇದನ್ನು ನೋಡುತ್ತಿದ್ದು, ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತಿದೆ. ಇದನ್ನು ನಾವು ಖಂಡಿಸುತ್ತೇವೆ ಎಂದರು.
ನಮ್ಮ ರಾಜ್ಯದ ಒಂದೂ ಹಳ್ಳಿಯನ್ನು ಮಹಾರಾಷ್ಟ್ರಕ್ಕೆ ನೀಡಲು ತಯಾರಿಲ್ಲ: ಡಿ ಕೆ ಶಿವಕುಮಾರ್ ಕಿಡಿ
ನಮ್ಮ ರಾಜ್ಯದ ಒಂದು ಹಳ್ಳಿಯನ್ನು ಮಹಾರಾಷ್ಟ್ರಕ್ಕೆ ನೀಡಲು ತಯಾರಿಲ್ಲ, ನಮ್ಮ ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ಮಹಾರಾಷ್ಟ್ರದ ನಿರ್ಣಯವನ್ನು ಕಾಂಗ್ರೆಸ್ ಪಕ್ಷ ಹಾಗೂ ಇಡೀ ಕರ್ನಾಟಕ ತೀವ್ರವಾಗಿ ಖಂಡಿಸಿ ವಿರೋಧಿಸುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ನಮ್ಮ ರಾಜ್ಯದ ಒಂದೂ ಹಳ್ಳಿಯನ್ನು ಮಹಾರಾಷ್ಟ್ರಕ್ಕೆ ನೀಡಲು ನಾವು ತಯಾರಿಲ್ಲ. ಅವರ ಒಂದು ಹಳ್ಳಿಯೂ ನಮಗೆ ಬೇಡ. ಎರಡೂ ರಾಜ್ಯಗಳ ಗಡಿ ಅಂತಿಮವಾಗಿದ್ದು, ನಮ್ಮ ಜನ ಅದರಂತೆ ಬದುಕುತ್ತಿದ್ದಾರೆ ಎಂದರು. ಚುನಾವಣೆ ಸಂದರ್ಭದಲ್ಲಿ ಬಿಜೆಪಿಯ ಕುತಂತ್ರದಿಂದ ಅಲ್ಲಿನ ಸಚಿವರು ಇದನ್ನು ಆರಂಭಿಸಿದ್ದು, ಈಗ ಎಲ್ಲಾ ಪಕ್ಷದವರು ಇದಕ್ಕೆ ಸೇರಿಕೊಂಡಿದ್ದಾರೆ. ನಾವೆಲ್ಲರೂ ಒಗ್ಗಟ್ಟಿನಿಂದ ನಮ್ಮ ರಾಜ್ಯವನ್ನು ಕಾಪಾಡಬೇಕು. ನಮ್ಮ ಪಕ್ಷ ಮುಂದಾಳತ್ವ ತೆಗೆದುಕೊಳ್ಳಲಿದೆ. ನಮ್ಮ ಭಾಷೆ, ನೆಲ, ಜಲ ಕಾಪಾಡುವುದು ನಮ್ಮ ಕರ್ತವ್ಯ. ಇದಕ್ಕೆ ಅಗತ್ಯ ಸಹಕಾರ ನೀಡಲು ನಾವು ಸಿದ್ಧ. ಮಹಾರಾಷ್ಟ್ರದ ತೀರ್ಮಾನಕ್ಕೆ ನಮ್ಮ ವಿರೋಧವಿದೆ. ಸದನದಲ್ಲಿ ನಾವು ಈ ವಿಚಾರವನ್ನು ಪ್ರಸ್ತಾಪ ಮಾಡುತ್ತೇವೆ ಎಂದಿದ್ದಾರೆ.
ಇದು ಅಶಾಂತಿ ಮೂಡಿಸಲು ಬಿಜೆಪಿ ಉದ್ದೇಶಪೂರ್ವಕವಾಗಿ ಆಡುತ್ತಿರುವ ನಾಟಕ. ಇಲ್ಲಿನ ಜನರ ಭಾವನೆ ಕೆದಕಿ, ಅವರ ಬದುಕಿನಲ್ಲಿ ದ್ವೇಷ ಹಾಗೂ ಅಸೂಯೆ ಮೂಡಿಸುವ ಪ್ರಯತ್ನ ಇದಾಗಿದೆ. ಎಲ್ಲ ಕನ್ನಡಪರ ಸಂಘಟನೆಗಳು ಒಟ್ಟಾಗಿ ಯಾವುದೇ ಅಳುಕಿಲ್ಲದೆ ಇದನ್ನು ಪ್ರತಿಭಟಿಸೋಣ, ರಾಜ್ಯದ ಗೌರವ ಉಳಿಸಿಕೊಳ್ಳೋಣ.
ಕೇಂದ್ರದಲ್ಲಿ, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದೆ. ಚುನಾವಣೆ ಸಮಯದಲ್ಲಿ ಇವರ ರಾಜಕೀಯ ಹಿತಾಸಕ್ತಿಗಾಗಿ ಇದಕ್ಕೆ ಕುಮ್ಮಕ್ಕು ನೀಡಿದ್ದಾರೆ. ರಾಜ್ಯದಲ್ಲಿರುವ ಮರಾಠಿ ಭಾಷಿಗರೂ ನಮ್ಮವರೇ. ಎಲ್ಲರೂ ಶಾಂತಿಯುತವಾಗಿ ಬದುಕಲು ಬಯಸುತ್ತಾರೆ. ಈ ಭಾಗದ ಜನರ ಹಕ್ಕು, ಹಿತಾಸಕ್ತಿ ಕಾಪಾಡಲು ಇಲ್ಲಿ ಸುವರ್ಣಸೌಧ ನಿರ್ಮಾಣ ಮಾಡಲಾಗಿದೆ. ಮಹಾರಾಷ್ಟ್ರ ಸರ್ಕಾರದ ಇಂತಹ ನಿರ್ಣಯ ನಾಚಿಕೆಗೇಡಿನ ವಿಚಾರವಾಗಿದ್ದು, ನಾವು ಇದನ್ನು ಖಂಡಿಸುತ್ತೇವೆ ಎಂದರು.












Click it and Unblock the Notifications