ಸಿದ್ದರಾಮಯ್ಯ ನಿವಾಸದಲ್ಲಿ ಹೈವೋಲ್ಟೆಜ್ ಮೀಟಿಂಗ್: ಸಭೆಯಲ್ಲಿ ಚರ್ಚೆಯಾದ ಕುರಿತು ಸಚಿವರು ಹೇಳಿದ್ದೇನು?
ಬೆಂಗಳೂರು, ನವೆಂಬರ್ 04: ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಮುಂದಿನ ಐದು ವರ್ಷ ನಾನೇ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ತಮ್ಮ ಸರ್ಕಾರಿ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸಿಎಂ ಡಿ ಕೆ ಶಿವಕುಮಾರ್ ಸೇರಿದಂತೆ ಸಂಪುಟ ಸಚಿವರಿಗೆ ಬ್ರೇಕ್ ಫಾಸ್ಟ್ ಮೀಟಿಂಗ್ ಏರ್ಪಡಿಸಿದ್ದು, ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ.
ಇನ್ನೂ ಸಿದ್ದರಾಮಯ್ಯ ಸಚಿವರ ಜೊತೆಗೆ ಸಭೆ ನಡೆಸಿದ ಬಳಿಕ, ಸಭೆಯಲ್ಲಿ ನಡೆದ ಚರ್ಚೆಗಳ ಕುರಿತು ಹಿರಿಯ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ಸಭೆಯಲ್ಲಿ ಲೋಕಸಭೆ ಚುನಾವಣೆ ಬಗ್ಗೆ ಚರ್ಚೆ ನಡೆಸಲಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಯಾವ ಗೊಂದಲ ಇಲ್ಲ. ಅಭಿವೃದ್ಧಿ ಬಿಟ್ಟು ಬೇರೆ ಯಾವ ವಿಚಾರ ಮಾತನಾಡಬಾರದು ಎಂದು ಹೈ ಕಮಾಂಡ್ ತಿಳಿಸಿದೆ. ಬರಗಾಲ ಎದುರಿಸುವ ಕೆಲಸ ಆಗಬೇಕು ಎಂದು ಸಭೆಯಲ್ಲಿ ಚರ್ಚೆ ಆಗಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಈಗಲೂ ಬರ ಪರಿಹಾರದ ಹಣ ಬಿಡುಗಡೆ ಮಾಡಿಲ್ಲ. ಕೇಂದ್ರದ ಸಚಿವರು ವಿಧಾನಸಭೆ ಚುನಾವಣೆ ವೇಳೆ ದಂಡಯಾತ್ರೆಗೆ ಬಂದಿದ್ದರು ಅಷ್ಟೇ. ಯಾರೂ ಕೂಡ ಬಹಿರಂಗವಾಗಿ ಮಾತನಾಡುವುದು ಬೇಡ ಎಂದು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ಸಚಿವರು ಅಭಿವೃದ್ಧಿ ಬಗ್ಗೆ ಮಾತ್ರ ಮಾತನಾಡುವಂತೆ ಸೂಚಿಸಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಸಚಿವ ಭೈರತಿ ಸುರೇಶ್ ಮಾತನಾಡಿ,ಸಭೆಯಲ್ಲಿ ರಾಜ್ಯದ ಜನರಗಳಿಗೆ ಅನುಕೂಲವಾಗುವ ರೀತಿ ಕೆಲಸ ಮಾಡಲು ಸೂಚನೆ ನೀಡಿದ್ದಾರೆ. ಕುಡಿಯುವ ನೀರು ಸಮಸ್ಯೆ ಆಗಬಾರದು ಎಂದು ಸಿಎಂ ಸೂಚಿಸಿದ್ದಾರೆ. ಹೊಸ ಕಚೇರಿ ಉದ್ಗಾಟನೆ ಮಾಡಲಾಯಿತು. ಇನ್ನೂ ಪಕ್ಷ ಹಾಗೂ ಸರ್ಕಾರ ಕುರಿತು ಬಹಿರಂಗ ಹೇಳಿಕೆ ನೀಡುವ ಬಗ್ಗೆ ಸಭೆಯಲ್ಲಿ ಯಾವುದೇ ಚರ್ಚೆ ಆಗಿಲ್ಲ. ಹೈ ಕಮಾಂಡ್ ಬಹಿರಂಗ ಹೇಳಿಕೆ ನೀಡಬಾರದು ಎಂದು ಈಗಾಗಲೇ ಸೂಚನೆ ನೀಡಿದ್ದಾರೆ.
ಯಾವುದೇ ವಿಚಾರಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಾತನಾಡುತ್ತಾರೆ. ಸಚಿವರುಗಳು ಮಾತನಾಡುವುದಿಲ್ಲ. ಕೆಲ ಸಚಿವರಿಗೆ ಪೂರ್ವ ನಿಯೋಜಿತ ಕಾರ್ಯಕ್ರಮ ಇದ್ದಿದ್ದರಿಂದ ಸಭೆಗೆ ಕೆಲವರಿಗೆ ಬರಲು ಆಗಿಲ್ಲ. ಸತೀಶ್ ಜಾರಕಿಹೊಳಿಗೆ ಅನಾರೋಗ್ಯ ಕಾರಣ ಸಭೆಗೆ ಬಂದಿಲ್ಲ. ಲಕ್ಷ್ಮಿ ಹೆಬ್ಬಾಳ್ಕರ್ ಉಡುಪಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರಿಂದ ಬರಲು ಆಗಿಲ್ಲ. ಎಲ್ಲಾ ಸಚಿವರುಗಳಿಗೆ ಸಭೆಗೆ ಆಹ್ಚಾನ ನೀಡಲಾಗಿತ್ತು. ಸಭೆಗೆ ಬಾರದೇ ಇರುವವರು ಇಂದು ಮಧ್ಯಾಹ್ನ ಮೇಲೆ ಬಂದು ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿಯಾಗುತ್ತಾರೆ ಎಂದು ಹೇಳಿದರು.
ಇನ್ನೂ ಸಚಿವ ಹೆಚ್ ಕೆ ಪಾಟೀಲ್ ಮಾತನಾಡಿ, ರಾಜ್ಯ ಸರಕಾರದಲ್ಲಿ ನಾಯಕತ್ವ ಗೊಂದಲವಿಲ್ಲ. ಈಗ ನಡೆಯುತ್ತಿರುವ ಚರ್ಚೆ ಮಾಧ್ಯಮಗಳ ಸೃಷ್ಠಿ. ನ್ಯಾಯದಾನಕ್ಕೆ ಬಲ ತುಂಬಲು ನಮ್ಮ ಸರಕಾರ ಬದ್ದವಾಗಿದೆ. ಈಗಾಗಲೇ ಕ್ಯಾಬಿನೆಟ್ ನಲ್ಲಿ ಘೋಷಣೆಯಾಗಿದೆ. ಸಾಧ್ಯವಾದರೆ ಜನವರಿ 26 ರ ವೇಳೆಗೆ ರಾಜ್ಯದಲ್ಲಿ ಗ್ರಾಮ ನ್ಯಾಯಲಯ ಸ್ಥಾಪನೆಗೆ ಸಿದ್ದತೆ ಮಾಡಿಕೊಳ್ಳಲಾಗಯವುದು. ಈ ಕುರಿತು ಮುಖ್ಯನ್ಯಾಯಾಧೀಶರೊಂದಿಗೆ ಚರ್ಚಿಸಿ ಅಂತಿಮ ರೂಪರೇಷ ನೀಡಲಾಗುವುದು ಎಂದರು.
ರಾಜ್ಯದ ನ್ಯಾಯಲಯಗಳಿಗೆ ಮೂಲಭೂತ ಸೌಲಭ್ಯ ನೀಡಲು ಆದ್ಯತೆ ನೀಡಲಾಗುವುದು ಎಂದ ಅವರು, ಕಾಂಗ್ರೆಸ್ ಸರಕಾರದಲ್ಲಿ ನಾಯಕತ್ವ ಕುರಿತು ಈಗಾಗಲೇ ಮುಖ್ಯಮಂತ್ರಿಗಳು ಸ್ಪಷ್ಠಪಡಿಸಿದ್ದಾರೆ. ಹೈಕಮಾಂಡ ಮಾಡುವ ನಿರ್ಧಾರಕ್ಕೆ ನಾವು ಚರ್ಚಿಸಬಾರದು. ಸಧ್ಯಕ್ಕೆ ಸಿಎಂ ಖುರ್ಚಿ ಖಾಲಿ ಇಲ್ಲ. ಹೀಗಾಗಿ ಚರ್ಚೆ ಅನಗತ್ಯ. ಈ ರೀತಿ ಚರ್ಚೆ ಪಕ್ಷದ ಘನತೆ ಹಾಗು ಬಲಕುಂದುತ್ತದೆ. ಸಚಿವರಿಗೆ ಸಿಎಂ ಮನೆಯಲ್ಲಿಯ ಉಪಹಾರ ಕುರಿತು ನನಗೆ ಆಹ್ವಾನವಿಲ್ಲ. ನಾನು ಅಲ್ಲಿ ಇಲ್ಲದೆ ಇರುವದರಿಂದ ಭಾಗವಹಿಸಲು ಆಗೋದಿಲ್ಲ ಎಂದು ಹೇಳಿದರು.
ಇದೇ ವೇಳೆ ಮುಖ್ಯಮಂತ್ರಿ ಆಗುವದಕ್ಕೆ ನೀವು ರೇಸ್ ನಲ್ಲಿ ಇದ್ದಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಜನರ ಬೆಂಬಲ ಹಾಗೂ ಹೈಕಮಾಂಡ ಆಶೀರ್ವಾದ ಮುಖ್ಯ. ಸಿಎಂ ಹುದ್ದೆ ಕೇಳಿ ಪಡೆಯುವುದಲ್ಲ ಆ ಎತ್ತರಕ್ಕೆ ಬೆಳೆಯಬೇಕು ಎಂದು ಸಚಿವ ಹೆಚ್ ಕೆ ಪಾಟೀಲ ಹೇಳಿದರು.












Click it and Unblock the Notifications