ಮನೆಗೆ ಆಧಾರವಾಗಿದ್ದವನು ನಾಪತ್ತೆ, ಕುಟುಂಬದ ಕಣ್ಣೀರು
ರಾಮನಗರ ತಾಲ್ಲೂಕಿನ ಕವಣಾಪುರದ ರಾಮಚಂದ್ರೇಗೌಡ ಎಂಬುವವರು ಒಂದೂವರೆ ವರ್ಷದಿಂದ ಕಾಣೆಯಾಗಿದ್ದು, ಮನೆಗೆ ಆಧಾರವಾಗಿದ್ದವರನ್ನು ಕಳೆದುಕೊಂಡ ಕುಟುಂಬ ಕಣ್ಣೀರಿಡುತ್ತಿದೆ. ತಾಯಿ, ಹೆಂಡತಿ, ನಾಲ್ಕು ತಿಂಗಳ ಮಗುವನ್ನು ಬಿಟ್ಟು ಹೋಗಿರುವ ರಾಮಚಂದ್ರೇಗೌಡರು ಮನೆಗೆ ವಾಪಸ್ ಬರಲಿ ಎಂದು ದೇವರಿಗೆ ಮಾಡಿದ ಪೂಜೆ ಫಲ ನೀಡಿಲ್ಲ, ಪೊಲೀಸರಿಗೂ ಹುಡುಕಾಟ ನಡೆಸಲು ಸಾಧ್ಯವಾಗಿಲ್ಲ. ಈ ಘಟನೆಯ ಸಂಪೂರ್ಣ ವಿವಿರ ಇಲ್ಲಿದೆ ನೋಡಿ
ಅವನಿಗೆ ವಾತ್ಸಲ್ಯ ನೀಡುವ ತಾಯಿ, ಪ್ರೀತಿ ನೀಡುವ ಹೆಂಡತಿ, ಮುದ್ದಿನ ಮಗಳು ಎಲ್ಲರೂ ಇದ್ದಾರೆ. ಸಂಸಾರ ಸಾಗಿಸಲು ಬೇಕಾದಷ್ಟು ಆಸ್ತಿ ಇದೆ. ಆದರೆ, ಮನೆಗೆ ಆಧಾರವಾಗಿದ್ದ ಅವನು ಕಾಣೆಯಾಗಿ ಒಂದೂವರೆ ವರ್ಷ ಕಳೆದಿವೆ. ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಕಟ್ಟುತ್ತಿದ್ದ ಅವನು, ಮಾಡಿದ ಸಾಲವನ್ನು ತೀರಿಸಲಾಗದೆ ಎಲ್ಲರನ್ನು ಬಿಟ್ಟು ಪರಾರಿಯಾಗಿದ್ದಾನೆ.

ರಾಮನಗರ ತಾಲ್ಲೂಕಿನ ಕವಣಾಪುರದ ರಾಮಚಂದ್ರೇಗೌಡ ತಾಯಿಗೆ ಒಬ್ಬನೇ ಮಗ. ತಂದೆ ಸಾವಿಗೀಡಾಗಿದ್ದರಿಂದ ತನ್ನ ಮಗನಿಗೆ ಯಾವುದೇ ಕೊರತೆ ಬಾರದಂತೆ ತಾಯಿ ಚಿಕ್ಕತಾಯಮ್ಮ ಅವನನ್ನು ಸಾಕಿದ್ದರು. ಯಾರ ವಿಚಾರಕ್ಕೂ ಹೋಗದ ರಾಮಚಂದ್ರ ಇರುವ ಜಮೀನಿನಲ್ಲಿ ದುಡಿದು ಮನೆಗೆ ಆಧಾರವಾಗಿದ್ದ. ವಯಸ್ಸಿಗೆ ಬಂದ ಮಗನಿಗೆ ರೇಷ್ಮಾ ಎಂಬ ಹುಡುಗಿಯನ್ನು ನೋಡಿ ತಾಯಿ ಮದುವೆ ಮಾಡಿದ್ದರು. [ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಬುಕ್ಕಿಗಳು, 28 ಲಕ್ಷ ವಶ]
ರೇಷ್ಮಾ ಗರ್ಭವತಿಯಾಗಿ ತವರಿಗೆ ತೆರಳುತ್ತಿದ್ದಂತೆ ಐಪಿಎಲ್ ಬೆಟ್ಟಿಂಗ್ ಕಟ್ಟಲು ಆರಂಭಿಸಿದ ರಾಮಚಂದ್ರೇಗೌಡ ಯಾವ ಪಂದ್ಯ ನಡೆದರೂ ಬೆಟ್ಟಿಂಗ್ ಕಟ್ಟಲು ಆರಂಭಿಸಿದ. ಬೆಟ್ಟಿಂಗ್ನಿಂದ ದೂರವಿರಿ ಎಂದು ಹೆಂಡತಿ ಹೇಳಿದ ಮಾತಿಗೂ ಆತ ಬೆಲೆ ಕೊಟ್ಟಿರಲಿಲ್ಲ.
ಪತ್ನಿಗೆ ಹೆಣ್ಣುಮಗು ಜನಿಸಿ ನಾಲ್ಕು ತಿಂಗಳಾಗಿತ್ತು. ಮನೆಗೆ ಸಾಲಗಾರರು ಬರಲು ಆರಂಭಿಸಿದ್ದರಿಂದ ತಾಯಿ, ಹೆಂಡತಿ ಮತ್ತು ಮಗುವನ್ನು ಬಿಟ್ಟು ರಾಮಚಂದ್ರೇಗೌಡ ಪರಾರಿಯಾಗಿದ್ದಾನೆ. ಒಂದೂವರೆ ವರ್ಷದಿಂದ ಅವನು ಎಲ್ಲಿದ್ದಾನೆ ಎಂಬ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.
ರಾಮಚಂದ್ರೇಗೌಡ ನಾಪತ್ತೆಯಾದ ತಕ್ಷಣವೇ ಸ್ನೇಹಿತರ ಮನೆಯಲ್ಲೆಲ್ಲಾ ಹುಡುಕಾಡಿದ್ದಾರೆ. ಪೊಲೀಸರಿಗೆ ದೂರು ನೀಡಿದ್ದಾರೆ. ಮನೆಮಗ ಮತ್ತೆ ಬರಲಿ ಎಂದು ದೇವರು, ಜ್ಯೋತಿಷಿಗಳ ಮೊರೆ ಹೋಗಿದ್ದಾರೆ. ಆದರೆ, ಇಲ್ಲಿಯವರೆಗೂ ರಾಮಚಂದ್ರ ಎಲ್ಲಿದ್ದಾನೆಂಬುದು ಮಾತ್ರ ತಿಳಿದುಬಂದಿಲ್ಲ. ಇರುವ ಆಸ್ತಿಯಲ್ಲಿ ಸ್ವಲ್ಪ ಮಾರಿ ಮಗ ಮಾಡಿರೋ ಸಾಲ ತೀರಿಸುತ್ತೇವೆ ಎಲ್ಲಿದ್ರೂ ಬಾ ಎಂದು ತಾಯಿ ಮಗನಿಗೆ ಹೇಳಿದ್ದು, ಆತನಿಗಾಗಿ ಕಾದು ಕುಳಿತಿದ್ದಾರೆ.












Click it and Unblock the Notifications