ಸದನದಲ್ಲಿ ಕೊರೊನಾ: ಸರವಣ ಆರೋಗ್ಯ ತಪಾಸಣೆ ಆಗಲೇಬೇಕ್!
ಬೆಂಗಳೂರು ಮಾರ್ಚ್ 4: ಮಾರಣಾಂತಿಕ ಕೊರೊನಾ ವೈರಸ್ ನಿಂದಾಗಿ ಇಡೀ ವಿಶ್ವವೇ ಭಯಭೀತಗೊಂಡಿದೆ. ಭಾರತಕ್ಕೂ ಬಂದಿರುವ ಕೊರೊನಾ ವೈರಸ್ ಬಗ್ಗೆ ಸದನದಲ್ಲಿ ಸರ್ಕಾರದ ಗಮನ ಸೆಳೆಯಲು ವಿಧಾನ ಪರಿಷತ್ ಸದಸ್ಯ ಸರವಣ ನಿನ್ನೆ ಮಾಸ್ಕ್ ಧರಿಸಿ ಬಂದಿದ್ದರು. ಇಂದು ಇದೇ ವಿಷಯ ಕಲಾಪದಲ್ಲಿ ಚರ್ಚೆಯಾಯಿತು.
''ಕೊರೊನಾ ವೈರಸ್ ಬಗ್ಗೆ ಸರ್ಕಾರದ ಗಮನ ಸೆಳೆಯಲು ನಾನು ಮಾಸ್ಕ್ ಧರಿಸಿ ಬಂದಿದ್ದೆ. ಆದ್ರೆ, ಕೆಲವರು ನಿಮಗೆ ಕೊರೊನಾ ಬಂದಿದೆಯಾ? ಅಂತ ನನಗೆ ಕೇಳಲು ಶುರು ಮಾಡಿದರು'' ಎಂದು ಕಲಾಪದಲ್ಲಿ ಸರವಣ ಮಾತು ಆರಂಭಿಸಿದರು. ಆಗ ಮಧ್ಯ ಪ್ರವೇಶಿಸಿದ ಬಸವರಾಜ ಹೊರಟ್ಟಿ, ''ಯಾರಿಗೆ ಕೊರೊನಾ ಬಂದರೂ ಸರವಣಗೆ ಬರಲ್ಲ ಬಿಡಿ'' ಎಂದು ಹಾಸ್ಯ ಮಾಡಿದರು.
ಈ ವೇಳೆ ''ಮಾಸ್ಕ್ ಧರಿಸಿ ಬಂದಿದ್ದ ಸರವಣ ಅವರ ಆರೋಗ್ಯ ತಪಾಸಣೆ ಆಗಲೇಬೇಕು. ಅನುಮಾನ ನಿವಾರಣೆ ಆಗಲು ತಪಾಸಣೆ ಅಗತ್ಯ'' ಎಂದು ತೇಜಸ್ವಿನಿ ರಮೇಶ್ ಒತ್ತಾಯಿಸಿದರು. ಆಗ ಕೂಡಲೆ, ''ನಾನು ಆರೋಗ್ಯವಾಗಿದ್ದೇನೆ. ನನಗೇನೂ ಆಗಿಲ್ಲ'' ಎಂದು ಸರವಣ ಸ್ಪಷ್ಟ ಪಡಿಸಿದರು.

ಇನ್ನೂ ಕೃಷಿ ಸಚಿವ ಬಿ.ಸಿ.ಪಾಟೀಲ್ ಕೂಡ ಕೊರೊನಾ ವೈರಸ್ ಕುರಿತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ರಿಂದ ಸದನದಲ್ಲಿ ಮಾಹಿತಿ ಕೇಳಿದರು. ''ಸೋಂಕಿತರ ಕೈಯಲ್ಲಿನ ಬೆವರಿನಿಂದ ಸಹ ಕೊರೊನಾ ಹರಡುವ ಸಾಧ್ಯತೆಯಿದೆ. ಹೀಗಾಗಿ ಹಸ್ತಲಾಘವಕ್ಕಿಂತ ಕೈಮುಗಿದು ನಮಸ್ಕರಿಸುವುದೇ ಒಳ್ಳೆಯದು. ಇದು ನಮ್ಮ ಸಂಸ್ಕೃತಿ'' ಎಂದು ಡಾ.ಕೆ.ಸುಧಾಕರ್ ಸಲಹೆ ನೀಡಿದರು.












Click it and Unblock the Notifications