ರೂಪಾಂತರಿ ಕೊರೊನಾ ವೈರಸ್: ಜನವರಿ 1ರಿಂದ ಶಾಲೆ ಆರಂಭವೋ? ಇಲ್ಲವೋ?
ಬೆಂಗಳೂರು, ಡಿ. 23: ರೂಪಾಂತರಗೊಂಡಿರುವ ಕೊರೊನಾ ವೈರಸ್ ಹೊಸ ತಳಿ ಮತ್ತೆ ಇಡೀ ಜಗತ್ತನ್ನು ಆತಂಕಕ್ಕೆ ತಳ್ಳಿದೆ. ಚೀನಾದ ವುಹಾನ್ನಲ್ಲಿ ಹುಟ್ಟಿ, ಇಂಗ್ಲೆಂಡ್ನಲ್ಲಿ ಸದೃಡಗೊಂಡು ಯುರೋಪಿಯನ್ನರಲ್ಲಿ ಮತ್ತೆ ಜೀವಭಯ ಸೃಷ್ಟಿಸಿರುವ ಹೊಸ ಕೋವಿಡ್19 ಕಟ್ಟಿಹಾಕಲು ನೈಟ್ ಕರ್ಫ್ಯೂ ಎಂಬ ಬ್ರಹ್ಮಾಸ್ತ್ರವನ್ನು ರಾಜ್ಯ ಬಿಜೆಪಿ ಸರ್ಕಾರ ಬಿಟ್ಟಿದೆ. ರಾಜ್ಯ ಆರೋಗ್ಯ ಇಲಾಖೆ ನೈಟ್ ಕರ್ಫ್ಯೂ ಮೂಲಕ ಅತ್ಯಂತ ಪರಿಣಾಮಕಾರಿಯಾಗಿ ರೂಪಾಂತರಗೊಂಡಿರುವ ಕೋವಿಡ್ ವೈರಸ್ನ್ನು ಕಟ್ಟಿ ಹಾಕಲು ಮುಂದಾಗಿದೆ. ಹೀಗಾಗಿ ಈಗಲೇ ಶಾಲೆಗಳನ್ನು ತೆರೆಯುವುದು ಬೇಡ ಎಂಬ ಮನಸ್ಥಿತಿಯಲ್ಲಿ ಆರೋಗ್ಯ ಇಲಾಖೆ ಇತ್ತು ಎನ್ನಲಾಗಿದೆ.
ರೂಪಾಂತರಿ ಕೊರೊನಾ ವೈರಸ್ನಿಮದಾಗಿ ಮೊದಲೇ ನಿರ್ಧರಿಸಿದಂತೆ ಶಾಲೆಗಳನ್ನು ಆರಂಭಿಸಬೇಕೊ? ಬೇಡವೊ? ಎಂಬ ಜಿಜ್ಞಾಸೆಯಲ್ಲಿ ಶಿಕ್ಷಣ ಇಲಾಖೆ ಇತ್ತು. ಹೀಗಾಗಿ ಎಲ್ಲಾ ಜಿಲ್ಲಾಡಳಿತಗಳೊಂದಿಗೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ವಿಡಿಯೊ ಸಂವಾದ ನಡೆಸಿದರು. ಆ ನಂತರ ಮಹತ್ವದ ತೀರ್ಮಾನವನ್ನು ಶಿಕ್ಷಣ ಇಲಾಖೆ ಕೈಗೊಂಡಿದೆ.
2021ರ ಮಾರ್ಚ್ ತಿಂಗಳಿನಲ್ಲಿ ಎಸ್ಎಸ್ಎಲ್ಸಿ, ಪಿಯುಸಿ ವಾರ್ಷಿಕ ಪರೀಕ್ಷೆ?
ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಲಹೆಯಂತೆ ಶಿಕ್ಷಣ ಇಲಾಖೆ ಅಂತಿಮ ತೀರ್ಮಾನ ಕೈಗೊಂಡಿದೆ. ಹೀಗಾಗಿ ಪಾಲಕರು ಮತ್ತು ಮಕ್ಕಳು ನಿರಾಳರಾಗಿದ್ದಾರೆ. ಜೊತೆಗೆ ಈಗಾಗಲೇ ತಿಳಿಸಿರುವಂತೆ ತರಾತುರಿಯಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳನ್ನು ಬರುವ ಮಾರ್ಚ್ ತಿಂಗಳಿನಲ್ಲಿ ನಡೆಸುವುದಿಲ್ಲ ಎಂದು ಶಿಕ್ಷಣ ಸಚಿವರು ಸ್ಪಷ್ಟಪಡಿಸಿದ್ದಾರೆ. ಜನವರಿ 1 ರಂದು ತರಗತಿಗಳು ಆರಂಭವಾಗುತ್ತವೆಯಾ? ಇಲ್ಲಿದೆ ಮಾಹಿತಿ!
ಶಾಲಾರಂಭ ಕುರಿತು ತೀರ್ಮಾನ
ಹೊಸ ಕೊರೊನಾ ವೈರಸ್ ಹುಟ್ಟುಕೊಂಡಿರುವ ಬೆನ್ನಲ್ಲಿಯೇ ಶಾಲೆ ಆರಂಭಿಸುವ ಬಗ್ಗೆ ಚರ್ಚೆ ಆರಂಭವಾಗಿದೆ. ಆದರೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯು ಶಾಲೆ ಆರಂಭಿಸುವ ನಿರ್ಧಾರದ ಕುರಿತು ಮತ್ತೆ ಪರಿಶೀಲನೆ ಇಲ್ಲ ಎಂದು ಹೇಳಿದೆ. ಹೀಗಾಗಿ ಜನವರಿ 1 ರಿಂದ ಮೊದಲೇ ನಿಗದಿಯಾದಂತೆ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ತರಗತಿಗಳು ಆರಂಭವಾಗುತ್ತವೆ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ. ವಿಕಾಸಸೌಧದಿಂದ ವಿವಿಧ ಜಿಲ್ಲಾಡಳಿತಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಬಳಿಕ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಪಾಲಕರ ಒಪ್ಪಿಗೆ ಕಡ್ಡಾಯ
ಶಾಲೆಗೆ ಬರುವ ಮಕ್ಕಳು ಕಡ್ಡಾಯವಾಗಿ ಅವರ ಪಾಲಕರ ಒಪ್ಪಿಗೆ ಪತ್ರವನ್ನು ತರಲೇಬೇಕು ಎಂದು ಶಿಕ್ಷಣ ಸಚಿವರು ಸೂಚಿಸಿದ್ದಾರೆ. ಪಾಲಕರ ಒಪ್ಪಿಗೆ ಇಲ್ಲದೆ ಮಕ್ಕಳು ಶಾಲೆಗೆ ಬರುವಂತಿಲ್ಲ ಎಂದು ತಿಳಿಸಿದ್ದಾರೆ. ಶಾಲೆಗೆ ಬರುವುದು ಕಡ್ಡಾಯವಲ್ಲ, ಇದು ಒಂದು ಅವಕಾಶವಷ್ಟೇ. ಎಲ್ಲೂ ಬಲವಂತ ಇಲ್ಲ ಎಂದು ಶಿಕ್ಷಣ ಸಚಿವರು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಶಿಕ್ಷಕರು 72 ಗಂಟೆಗೆ ಮೊದಲು ಆರ್ಟಿಪಿಸಿಆರ್ ಪರೀಕ್ಷೆಗೆ ಒಳಗಾಗಬೇಕು. 50 ವರ್ಷ ಮೇಲ್ಪಟ್ಟ ಶಿಕ್ಷಕರು ಮಾಸ್ಕ ಜೊತೆಗೆ ಫೇಸ್ ಶಿಲ್ಡ್ ಹಾಕಿಕೊಳ್ಳುವುದು ಖಡ್ಡಾಯ ಎಂದು ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಖಾಸಗಿ ಶಾಲೆಗಳ ಶುಲ್ಕದ ವಿಚಾರವಾಗಿ ಸುರೇಶ್ ಕುಮಾರ್ ಹೇಳಿಕೆ!
ಸುರಕ್ಷತೆಯಲ್ಲಿ ರಾಜಿಯಿಲ್ಲ!
ಮಕ್ಕಳ ಸುರಕ್ಷತೆಯ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸೂಚನೆಯಂತೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹೀಗಾಗಿ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮ ಆರಂಭವಾಗುತ್ತಿಲ್ಲ. ಆ ಮೂಲಕ ಮಕ್ಕಳು ಗುಂಪುಗೂಡುವುದನ್ನು ಸಾಧ್ಯವಾದಷ್ಟು ತಪ್ಪಿಸಲು ಪ್ರಯತ್ನಿಸಲಾಗುತ್ತಿದೆ. ಕ್ಷೀರ ಭಾಗ್ಯ ಯೋಜನೆ ಆರಂಭಿಸುವಂತೆಯೂ ಸಲಹೆ ಬಂದಿತ್ತು. ಆದರೆ ಅದನ್ನೂ ಕೂಡ ಈಗ ಮಾಡುತ್ತಿಲ್ಲ. ಮಕ್ಕಳಿಗೆ ಆಹಾರ ದಾನ್ಯವನ್ನು ಮನೆಗೆ ಕೊಡಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ವಿದ್ಯಾಗಮದಲ್ಲಿ ಮಾರ್ಪಾಟು
ವಿದ್ಯಾಗಮ ಕಾರ್ಯಕ್ರಮದಲ್ಲಿ ಸ್ವಲ್ಪ ಮಾರ್ಪಾಟು ಮಾಡಲಾಗಿದೆ. ವಿದ್ಯಾರ್ಥಿಗಳು ತಮ್ಮ ಹತ್ತಿರದ ಶಾಲೆಗಳಿಗೆ ಹೋಗುವ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಂದು ಶಾಲೆಯಲ್ಲೂ ಐಸೋಲೇಷನ್ ಕೊಠಡಿ ವ್ಯವಸ್ಥೆ ಮಾಡಬೇಕು. ಆರೋಗ್ಯದಲ್ಲಿ ಏರುಪೇರು ಆಗಿದ್ದರೂ ಅವರಿಗೆ ಚಿಕಿತ್ಸೆ ಕೊಡಿಸಲಾಗುವುದು. ಇನ್ನು ವಿದ್ಯಾರ್ಥಿಗಳು ಮಾಸ್ಕ್ ತರಬೇಕು. ಆಯಾ ಶಾಲಾ ಆಡಳಿತ ಮಂಡಳಿಗಳು (ಎಸ್ಡಿಎಂಸಿ) ತಮ್ಮಲ್ಲಿನ ಹಣವನ್ನು ಮಕ್ಕಳ ಮಾಸ್ಕ್ಗಾಗಿ ಬಳಕೆ ಮಾಡಿಕೊಳ್ಳಬೇಕು. ಜೊತೆಗೆ ಒಂದು ತರಗತಿಯಲ್ಲಿ 15 ಮಕ್ಕಳಿಗೆ ಮಾತ್ರ ಅವಕಾಶ ಮಾಡಿಕೊಡಲಾಗುವುದು ಎಂದು ಸುರೇಶ್ ಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ.
Recommended Video
ಸುಧಾಕರ್ ಜೊತೆ ಭಿನ್ನಾಭಿಪ್ರಾಯವಿಲ್ಲ
ಶಾಲೆ ಆರಂಭ ಕುರಿತಂತೆ ನನ್ನ ಹಾಗೂ ಆರೋಗ್ಯ ಸಚಿವ ಡಾ. ಸುಧಾಕರ್ ನಡುವೆ ಭಿನ್ನಾಭಿಪ್ರಾಯವಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಇದೇ ಸಂದರ್ಭದಲ್ಲಿ ಹೇಳಿದರು. ಸಚಿವ ಡಾ. ಸುಧಾಕರ್ ಅವರು ನನ್ನ ಸಹೋದರ ಇದ್ದಂತೆ. ಶಿಕ್ಷಣ ಇಲಾಖೆ ಯಾವುದೇ ನಿರ್ಧಾರ ಕೈಗೊಂಡರೂ ವಿದ್ಯಾರ್ಥಿಗಳ ಹಿತ ಮುಖ್ಯ. ವಿದ್ಯಾರ್ಥಿಗಳಿಗೆ ಬಸ್ ಪಾಸ್ ವ್ಯವಸ್ಥೆ ವಿಚಾರಕ್ಕೆ ಸಂಬಂಧಿಸಿದಂತೆ ಸಾರಿಗೆ ಸಚಿವರ ಜತೆ ಈಗಾಗಲೇ ಮಾತನಾಡಿದ್ದೇನೆ ಎಂದು ಸುರೇಶ್ ಕುಮಾರ್ ಹೇಳಿಕೆಯಲ್ಲಿ ತಿಳಿಸಿದರು. ಒಟ್ಟಾರೆ ನೈಟ್ ಕರ್ಫ್ಯೂ ಮೂಲಕ ಸರ್ಕಾರ ರೂಪಾಂತರಿ ವೈರಸ್ ಮುಂದಿಟ್ಟುಕೊಂಡು ಜನರಲ್ಲಿ ಭಯವನ್ನುಂಟು ಮಾಡುತ್ತಿದೆ. ಇದೇ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವ ಬಹುದೊಡ್ಡ ಸವಾಲನ್ನು ಮೈಮೇಲೆ ಎಳೆದುಕೊಂಡಿರುವುದು ಶ್ಲಾಘನೀಯ ಎಂದು ಪ್ರಜ್ಞಾವಂತರು ಅಭಿಪ್ರಾಯಪಟ್ಟಿದ್ದಾರೆ.